ಗಾಂಜಾ ಮಾರಾಟಕ್ಕೆ ಯತ್ನ: ಆರೋಪಿ ಸೆರೆ
ಮಂಗಳೂರು, ಅ. 19: ಗಾಂಜಾವನ್ನು ಹೊಂದಿದ್ದ ಯುವಕನೋರ್ವನನ್ನು ಇಕೊನಾಮಿಕ್ ಆ್ಯಂಡ್ ನಾರ್ಕೊಟೆಕ್ಸ್ ಕ್ರೈಂ ಠಾಣಾ ಪೊಲೀಸರು ಕುದ್ರೋಳಿ ಟಿಪ್ಪುಸುಲ್ತಾನ್ ನಗರದ ಬಳಿಯಿಂದ ಗುರುವಾರ ಬಂಧಿಸಿದ್ದಾರೆ.
ಕುದ್ರೋಳಿಯ ನಿವಾಸಿ ಮುಹಮ್ಮದ್ ನೌಫಾಲ್ (30) ಬಂಧಿತ ಆರೋಪಿ.
ಇಕೊನಾಮಿಕ್ ಆ್ಯಂಡ್ ನಾರ್ಕೊಟೆಕ್ಸ್ ಕ್ರೈಂ ಪೊಲೀಸ್ ಠಾಣಾ ನಿರೀಕ್ಷಕ ಮುಹಮ್ಮದ್ ಶರೀಫ್ ಹಾಗೂ ಸಿಬ್ಬಂದಿ ಗುರುವಾರ ಕುದ್ರೋಳಿ ಯಲ್ಲಿ ರೌಂಡ್ಸ್ ಕರ್ತವ್ಯದಲ್ಲಿ ನಿರತರಾಗಿದ್ದಾಗ ಟಿಪ್ಪು ಸುಲ್ತಾನ್ ನಗರದ ಬಳಿ ತಿರುವಿನಲ್ಲಿ ಪ್ಲಾಸ್ಟಿಕ್ ಚೀಲವೊಂದನ್ನು ಹಿಡಿದುಕೊಂಡಿದ್ದ ನೌಫಾಲ್ ಪೊಲೀಸ್ ಜೀಪ್ನ್ನು ಕಂಡು ಓಡಲು ಯತ್ನಿಸಿದ್ದಾನೆ. ಈ ಸಂದರ್ಭದಲ್ಲಿ ಪೊಲೀಸರು ಆತನನ್ನು ಹಿಡಿದು ತಪಾಸಣೆಗೊಳ ಪಡಿಸಿದಾಗ ಆತನ ಕೈಯಲ್ಲಿದ್ದ ಪ್ಲಾಸ್ಟಿಕ್ ಚೀಲದಲ್ಲಿ 5,600 ರೂ. ಮೌಲ್ಯದ 245 ಗ್ರಾಂ ಗಾಂಜಾ ಪತ್ತೆಯಾಗಿದೆ. ವಿಚಾರಿಸಿದಾಗ ಮಾರಾಟ ಮಾಡಲು ತಂದಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ನಗರ ಪೊಲೀಸ್ ಆಯುಕ್ತ ಟಿ.ಆರ್.ಸುರೇಶ್ ಆದೇಶದಂತೆ ಡಿಸಿಪಿಗಳಾದ ಹನುಮಂತರಾಯ, ಉಮಾ ಪ್ರಶಾಂತ್ ಅವರ ನಿರ್ದೇಶನದಂತೆ ಸಿಸಿಆರ್ಬಿ ಎಸಿಪಿ ವೆಲೆಂಟೈನ್ ಡಿಸೋಜಾ ಮಾರ್ಗದರ್ಶನದಲ್ಲಿ ಠಾಣಾ ನಿರೀಕ್ಷಕ ಮುಹಮ್ಮದ್ ಶರೀಫ್, ಸಿಬ್ಬಂದಿಗಳಾದ ಜಗದೀಶ್, ಶಾಜು ನಾಯರ್, ಕಿಶೋರ್ ಪೂಜಾರಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.