ವಿಷಪೂರಿತ ಮೇವು ತಿಂದ 15 ಕುರಿಗಳ ಸಾವು
ಹುಳಿಯಾರು, ಅ.19: ವಿಷ ಪೂರಿತನ ಮೇವು ತಿಂದು 15 ಕುರಿಗಳು ಸಾವನ್ನಪ್ಪಿರುವ ಘಟನೆ ಚಿಕ್ಕನಾಯಕನಹಳ್ಳಿ ತಾಲ್ಲೂಕು ಹುಳಿಯಾರು ಹೋಬಳಿ ದಸೂಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಎಳೆಗೊಲ್ಲರಹಟ್ಟಿಯಲ್ಲಿ ನಡೆದಿದೆ.
ಎಳೆಗೊಲ್ಲರಹಟ್ಟಿಯ ರಾಜಣ್ಣ ಎಂಬವರಿಗೆ ಸೇರಿದ ಕುರಿಗಳು ವಿಷ ಪೂರಿತ ಮೇವು ತಿಂದು ಸಾವನ್ನಪ್ಪಿವೆ. ಎಂದಿನಂತೆ ರಾಜಣ್ಣ ಅವರು ತಮ್ಮ ರೈವತ್ತಕ್ಕೂ ಹೆಚ್ಚು ಕುರಿಗಳನ್ನು ತಮ್ಮ ಜಮೀನಿನ ಪಟ್ಟ ಬದುವಿವಲ್ಲಿ ಮೇಯಿಸುತ್ತಿದ್ದಾರೆ. ಇದರಲ್ಲಿ 20 ತಕ್ಕೂ ಹೆಚ್ಚು ಕುರಿಗಳು ರಾಜಣ್ಣನವರ ಕಣ್ತಪ್ಪಿಸಿ ಜೋಳದ ಸೆಪ್ಪೆ ತಿಂದಿವೆ.
ಕೀಟಗಳ ಕಾಟವಾಗಿದ್ದರಿಂದ ಜೊಳಕ್ಕೆ ಔಷಧಿ ಸಿಂಪಡಿಸಿದ್ದರಿಂದ 20 ಕುರಿಗಳಲ್ಲಿ ಹದಿನೈದು ಕುರಿಗಳು ಸ್ಥಳದಲ್ಲೇ ಸಾವನ್ನಪ್ಪಿವೆ. ತಕ್ಷಣ ಎಚ್ಚೆತ್ತ ರಾಜಣ್ಣ ಉಳಿದ ಕುರಿಗಳನ್ನು ಜೋಳದ ಹೊಲದಿಂದ ಹೊರ ಹೊಡೆದು ಪಶು ವೈದ್ಯರಿಗೆ ವಿಷಯ ಮುಟ್ಟಿಸಿದ್ದಾರೆ.
ದಸೂಡಿ ಹಾಗೂ ಗಾಣಧಾಳು ಪಶು ಆಸ್ಪತ್ರೆಯ ಪಶು ವೈದ್ಯರಿಬ್ಬರೂ ಸ್ಥಳಕ್ಕೆ ಆಗಮಿಸಿ ವಿಷಪೂರಿನ ಮೇವು ತಿಂದು ಸಾವುಬದುಕಿನೊಡನೆ ಹೋರಾಡುತ್ತಿದ್ದ 5 ಕುರಿಗಳಿಗೆ ಪ್ರಥಮ ಚಿಕಿತ್ಸೆ ಕೊಟ್ಟು ಪ್ರಾಣ ಉಳಿಸಿದ್ದಾರೆ. ಅಲ್ಲದೆ ಸಾವನ್ನಪ್ಪಿದ 15 ಕುರಿಗಳ ಶವ ಪರೀಕ್ಷೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.