‘ಬಾರೆರ್ ಬೀರೆರ್’ ತುಳು ಕಿರುಚಿತ್ರದ ಲಾಂಛನ ಅನಾವರಣ
ಮಂಗಳೂರು, ಅ.20: ಸಸಿಹಿತ್ಲು ರಂಗ ಸುದರ್ಶನ ಇದರ ಸಿನಿ ನಿರ್ಮಾಣ ಸಂಸ್ಥೆ ಸುದರ್ಶನ್ ಕ್ರಿಯೇಶನ್ಸ್ ನಿರ್ಮಾಣದ ‘ಬಾರೆರ್ ಬೀರೆರ್’ ತುಳು ಕಿರುಚಿತ್ರದ ಲಾಂಛನ ಮತ್ತು ಗಾನ ಸುರುಳಿಯನ್ನು ಶುಕ್ರವಾರ ನಗರದ ಪ್ರೆಸ್ಕ್ಲಬ್ನಲ್ಲಿ ಬಿಡುಗಡೆಗೊಂಡಿತು.
ಲಾಂಛನವನ್ನು ಬಿಡುಗಡೆಗೊಳಿಸಿದ ತುಳು ಸಾಹಿತ್ಯ ಅಕಾಡಮಿಯ ಅಧ್ಯಕ್ಷ ಎ.ಸಿ.ಭಂಡಾರಿ ಮಾತನಾಡಿ, ತುಳುನಾಡಿನ ಪುರಾಣ, ಇತಿಹಾಸದ ಕುರಿತು ಚಿತ್ರಗಳನ್ನು ನಿರ್ಮಿಸಿದಾಗ ಅದನ್ನು ನಮ್ಮ ಮುಂದಿನ ಪೀಳಿಗೆಗೂ ಪರಿಚಯಿಸಿದಂತಾಗುತ್ತದೆ. ಕಾರ್ಣಿಕ ಪುರುಷರಾದ ಕಾಂತಾಬಾರೆ-ಬೂದಾಬಾರೆ ಅವರ ಕುರಿತು ಕಿರುಚಿತ್ರ ನಿರ್ಮಿಸಿರುವುದು ಹೆಮ್ಮೆಯ ವಿಚಾರ ಎಂದರು.
ಗಾನ ಸುರುಳಿಯನ್ನು ಬಿಡುಗಡೆಗೊಳಿಸಿದ ಚಲನಚಿತ್ರ ನಿರ್ಮಾಪಕ ಪ್ರಕಾಶ್ ಪಾಂಡೇಶ್ವರ ಮಾತನಾಡಿ, ಪತ್ರಿಕೋದ್ಯಮ, ರಂಗಭೂಮಿ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ‘ಬಾರೆರ್ ಬೀರೆರ್’ ಚಿತ್ರತಂಡದಿಂದ ಮುಂದಿನ ದಿನಗಳಲ್ಲಿ ಇನ್ನಷ್ಟು ಚಿತ್ರಗಳು ನಿರ್ಮಾಣಗೊಳ್ಳಲಿ ಎಂದು ಶುಭಹಾರೈಸಿದರು.
ಈ ಸಂದರ್ಭ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಜಗನ್ನಾಥ ಶೆಟ್ಟಿ ಬಾಳ, ಚಿತ್ರದ ನಿರ್ಮಾಣ-ನಿರ್ವಹಣೆಯ ಕಾರ್ಯನಿರ್ವಹಿಸುತ್ತಿರುವ ಪವನ್ ಮಂಜೇಶ್ವರ ಉಪಸ್ಥಿತರಿದ್ದರು. ಚಿತ್ರದ ನಿರ್ದೇಶಕ ಪರಮಾನಂದ ಸಾಲ್ಯಾನ್ ಸ್ವಾಗತಿಸಿ, ವಂದಿಸಿದರು.