ಮಣ್ಣಿನಡಿ ಅರ್ಧ ಹೂತುಕೊಂಡೇ ಹಣತೆ ಹಚ್ಚಿದರು
ದೀಪಾವಳಿಯಂದೂ ನಡೆಯಿತು ರೈತರ ಸಮಾಧಿ ಸತ್ಯಾಗ್ರಹ
ಜೈಪುರ್ ಅ, 20 : ತಮ್ಮ ಭೂಮಿಯನ್ನು ಸರಕಾರ ಸ್ವಾಧೀನಪಡಿಸಿದ್ದನ್ನು ವಿರೋಧಿಸಿ ಜೈಪುರದ ನೀಂಧರ್ ಗ್ರಾಮದ ರೈತರು ವಿಶಿಷ್ಟವಾಗಿ ಸಮಾಧಿ ಸತ್ಯಾಗ್ರಹ ನಡೆಸುವ ಮೂಲಕ ಪ್ರತಿಭಟಿಸುತ್ತಿದ್ದಾರೆ. ದೀಪಾವಳಿಯಂದು ಅವರು ತಮ್ಮ ದೇಹದ ಅರ್ಧ ಭಾಗವನ್ನು ಮಣ್ಣಿನಡಿ ಹೂತು ಸರಕಾರದ ಧೋರಣೆಗೆ ತಮ್ಮ ವಿರೋಧ ವ್ಯಕ್ತಪಡಿಸಿದ್ದಾರೆ.
ರೈತರು ತಮ್ಮ ಪ್ರತಿಭಟನಾ ಸ್ಥಳದಲ್ಲಿ ಹಣತೆಯನ್ನೂ ಬೆಳಗಿಸಿದ್ದರು. ಪ್ರತಿಭಟನೆಯಲ್ಲಿ ಭಾಗವಹಿಸಿದ ಹಲವಾರು ಮಹಿಳೆಯರು ಹಾಗೂ ಪುರುಷರು ಸರಕಾರ ಹಾಗೂ ಜೈಪುರ ಅಭಿವೃದ್ಧಿ ಪ್ರಾಧಿಕಾರದ ವಿರುದ್ಧ ಘೋಷಣೆಗಳನ್ನು ಕೂಗಿದ್ದಾರೆ. ``ನಾವು ನಮ್ಮ ಹಕ್ಕುಗಳನ್ನು ಕೇಳುತ್ತಿದ್ದೇವೆಯೇ ವಿನಹ ಯಾರ ಎದುರೂ ಭಿಕ್ಷೆ ಬೇಡುತ್ತಿಲ್ಲ'' ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ತಮ್ಮ ಭೂಮಿಯ ಸ್ವಾಧೀನವನ್ನು ವಿರೋಧಿಸಿ ರೈತರು ಕಳೆದ ಎರಡು ವಾರಗಳಿಗಿಂತಲೂ ಹೆಚ್ಚು ಸಮಯದಿಂದ ಪ್ರತಿಭಟಿಸುತ್ತಿದ್ದಾರೆ.
2011ರಲ್ಲಿ ಜೈಪುರ ಅಭಿವೃದ್ಧಿ ಪ್ರಾಧಿಕಾರವು ಸುಮಾರು 1,300 ಎಕ್ರೆ ಭೂಮಿಯನ್ನು ಹೌಸಿಂಗ್ ಸೊಸೈಟಿ ನಿರ್ಮಿಸಲೆಂದು ಸ್ವಾಧೀನಪಡಿಸಿಕೊಂಡಂದಿನಿಂದ ಪ್ರತಿಭಟನೆಗಳು ವಿವಿಧ ರೀತಿಯಲ್ಲಿ ನಡೆಯುತ್ತಿವೆ.
ರಾಜ್ಯ ಸರಕಾರವು ತಮ್ಮನ್ನು ನಿರ್ಲಕ್ಷ್ಯಿಸುತ್ತಿದೆ ಹಾಗೂ ಸ್ವಾಧೀನ ಪಡಿಸಿಕೊಂಡ ತಮ್ಮ ಭೂಮಿಗೆ ಯಾವುದೇ ಪರಿಹಾರ ನೀಡುತ್ತಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.