ಕಳಸ ತಾಲೂಕು ರಚನೆಗೆ ಪತ್ರಕರ್ತರ ಒತ್ತಾಯ

ಚಿಕ್ಕಮಗಳೂರು, ಅ.20: ಕಳಸ ತಾಲೂಕು ರಚನೆ ಮಾಡುವಂತೆ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಒತ್ತಾಯಿಸಿದೆ.
ಸಂಘದ ಜಿಲ್ಲಾ ಅಧ್ಯಕ್ಷ ಕೆ.ಜಯಕುಮಾರ್, ಕಳಸದ ಪತ್ರಕರ್ತ ಸುದೀಶ್ ಸುವರ್ಣ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಭೆೇಟಿಯಾಗಿ ಈ ಕುರಿತು ಮನವಿ ಸಲ್ಲಿಸಿ ಒತ್ತಾಯಿಸಿದ್ದಾರೆ.
ಮಾಧ್ಯಮ ಅಕಾಡಮಿ ಮತ್ತು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಯೋಗದೊಂದಿಗೆ ಬೆಂಗಳೂರಿನ ಲಲಿತ್ ಅಶೋಕ್ ಹೊಟೇಲಿನಲ್ಲಿ ಹಮ್ಮಿಕೊಳ್ಳಲಾಗಿದ್ದ ಮಾಧ್ಯಮ ಸಂವಾದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಅವರನ್ನ್ನು ಭೆೇಟಿಯಾಗಿ ಕಳಸವನ್ನು ತಾಲೂಕು ಕೇಂದ್ರವನ್ನಾಗಿ ಮಾಡುವ ಕುರಿತು ಮನವಿ ಸಲ್ಲಿಸಿದರು.
ಕಳಸವನ್ನು ತಾಲೂಕು ಕೇಂದ್ರವನ್ನಾಗಿ ಮಾಡಲು ಬೇಕಾದ ಪೂರಕ ಅಂಕಿ ಅಂಶಗಳನ್ನು ಹೊಂದಿರುವ ಮನವಿ ಸಲ್ಲಿಸಿ ಬೇಡಿಕೆಯನ್ನು ಈಡೇರಿಸಬೆಕೆಂದು ಮುಖ್ಯಮಂತ್ರಿ ಅವರಲ್ಲಿ ಮನವಿ ಮಾಡಿದರು.
ಈ ಬಗ್ಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಮುಖ್ಯಮಂತ್ರಿಗಳು ಕಳಸವನ್ನು ತಾಲೂಕು ಕೇಂದ್ರ ಮಾಡುವ ಬಗ್ಗೆ ತನ್ನ ಗಮನದಲ್ಲಿದೆ. ಇದರ ಬಗ್ಗೆ ಈಗಾಗಲೇ ಜಿಲ್ಲಾಡಳಿತದಿಂದ ವರದಿಯನ್ನು ಕೇಳಿದ್ದೇನೆ. ಆ ವರದಿಯು ಕೂಡ ತಲುಪಿದೆ. ಇದು ಪರಿಶೀಲನೆಯ ಹಂತದಲ್ಲಿದೆ ಸದ್ಯದಲ್ಲಿಯೇ ಈ ಬಗ್ಗೆ ಸ್ಪಷ್ಟ ನಿರ್ಧಾರವನ್ನು ತೆಗೆದುಕೊಳ್ಳಲಿದ್ದೇವೆ ಎಂದು ಹೇಳಿದ್ದಾರೆ ಎನ್ನಲಾಗಿದೆ.







