ವಜ್ರ ಮಹೋತ್ಸವಕ್ಕೆ 10 ಕೋಟಿ ರೂ. ಅಗತ್ಯವಿಲ್ಲ: ಮಾಜಿ ಶಾಸಕರ ವೇದಿಕೆ
ಬೆಂಗಳೂರು, ಅ.21: ವಿಧಾನ ಸೌಧದ ವಜ್ರಮಹೋತ್ಸವ ಸಮಾರಂಭಕ್ಕೆ 10 ಕೋಟಿ ರೂ. ಖರ್ಚು ಮಾಡುವ ಅಗತ್ಯವಿಲ್ಲ. ಹೀಗಾಗಿ, ರಾಜ್ಯ ಸರಕಾರ ದುಂದು ವೆಚ್ಚಕ್ಕೆ ಕಡಿವಾಣ ಹಾಕಿ ಸರಳವಾಗಿ ಸಮಾರಂಭ ಮಾಡಬೇಕು ಎಂದು ಕರ್ನಾಟಕ ರಾಜ್ಯ ಮಾಜಿ ಶಾಸಕರ ವೇದಿಕೆ ಆಗ್ರಹಿಸಿದೆ.
ನಗರದ ಪ್ರೆಸ್ ಕ್ಲಬ್ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವೇದಿಕೆಯ ಪ್ರಧಾನ ಕಾರ್ಯದರ್ಶಿ ಎಚ್.ಡಿ.ಬಸವರಾಜು, ವಿಧಾನಸಭೆಯ ಅಧ್ಯಕ್ಷ ಕೆ.ಬಿ.ಕೋಳವಾಡ ಹಾಗೂ ವಿಧಾನ ಪರಿಷತ್ ಸಭಾಪತಿ ಡಿ.ಎಚ್.ಶಂಕರಮೂರ್ತಿ 28 ಕೋಟಿ ರೂ. ವೆಚ್ಚದಲ್ಲಿ ವಿಧಾನಸೌಧ ವಜ್ರಮಹೋತ್ಸವ ಆಚರಣೆಗೆ ಮುಂದಾಗಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅದನ್ನು 10 ಕೋಟಿ ರೂ.ಗೆ ಕಡಿತಗೊಳಿಸಿದ್ದಾರೆ. ಇದು ಸ್ವಾಗತಾರ್ಹ. ಆದರೆ, ಕೋಟಿ ಕೋಟಿ ರೂ. ಖರ್ಚು ಮಾಡಿ ವಜ್ರಮಹೋತ್ಸವ ಆಚರಿಸುವ ಅಗತ್ಯವಾದರೂ ಏನಿದೆ? ಈ ಹಿಂದೆ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಅವರನ್ನು ಕರೆಸಿ ಸರಳವಾಗಿ ಕಾರ್ಯಕ್ರಮ ಮಾಡಿರುವ ನಿದರ್ಶನವಿದೆ. ಹೀಗಿರುವಾಗ ಕೋಟ್ಯಂತರ ರೂ. ದುಂದು ವೆಚ್ಚದ ಅಗತ್ಯವೇನು? ಕೆ.ಬಿ.ಕೋಳಿವಾಡ ಮತ್ತು ಡಿ.ಎಚ್.ಶಂಕರಮೂರ್ತಿ ಅವರು ಇದಕ್ಕೆ ಉತ್ತರಿಸಬೇಕು ಎಂದು ಒತ್ತಾಯಿಸಿದರು.
ಕಡಿಮೆ ವೆಚ್ಚದಲ್ಲಿ ಜನಮೆಚ್ಚುವ ರೀತಿ ಅರ್ಥಪೂರ್ಣ ಸಮಾರಂಭ ಮಾಡಲು ಹಲವು ಅವಕಾಶಗಳಿವೆ. ಹಲವು ಮಾಜಿ ಶಾಸಕರು ಇಂದಿಗೂ ಜೀವಂತವಾಗಿದ್ದಾರೆ. ವಿಧಾನಸೌಧದ 60 ವರ್ಷಗಳ ಇತಿಹಾಸದಲ್ಲಿ ಸಭಾಪತಿ, ಸಭಾಧ್ಯಕ್ಷರಾಗಿದ್ದವರ ಪೈಕಿ ಹಲವರು ಬದುಕಿದ್ದಾರೆ. ಅಂತವರನ್ನು ಕರೆಸಿ ಗೌರವಿಸಿ, ಚರ್ಚಾಕೂಟಗಳನ್ನು ನಡೆಸಬಹುದು. ವಿಧಾನಸೌಧದಲ್ಲಿ ಮಂಡನೆಯಾದ ಅತ್ಯುತ್ತಮ ಮಸೂದೆಗಳ ಬಗ್ಗೆ ಚರ್ಚಿಸಬಹುದು. ಆದರೆ, ಸಭಾಪತಿ ಮತ್ತು ಸಭಾಧ್ಯಕ್ಷರ ಏಕಮುಖ ತೀರ್ಮಾನದಿಂದ ವೈಭವದ ಕಾರ್ಯಕ್ರಮ ಮಾಡುತ್ತಿರುವುದು ಸರಿಯಲ್ಲ ಎಂದು ಹೇಳಿದರು.
10 ಲಕ್ಷ ಸಾಕು: ವೇದಿಕೆ ಕಾರ್ಯದರ್ಶಿ ಬಿ.ವಿ.ರಾಮಚಂದ್ರರೆಡ್ಡಿ ಮಾತನಾಡಿ, ವ್ಯಕ್ತಿ 60 ವರ್ಷ ಪೂರೈಸಿದರೆ ಷಷ್ಠಿಪೂರ್ತಿ ಮಾಡುವುದು ಸಂಪ್ರದಾಯ. ವಿಧಾನಸೌಧ ಕಟ್ಟಡಕ್ಕೆ 60 ವರ್ಷ ತುಂಬಿದಕ್ಕೆ ವಜ್ರಮಹೋತ್ಸವ ಮಾಡಲಾಗುತ್ತಿದೆ. ಮೌಢ್ಯದ ವಿರುದ್ಧ ಇರುವ ಸರಕಾರ ಈ ಕಾರ್ಯಕ್ರಮಕ್ಕೆ ಕೈ ಹಾಕಿದೆ. 10 ಲಕ್ಷದಲ್ಲಿ ಮಾಡಬಹುದಾದ ಕಾರ್ಯಕ್ರಮಕ್ಕೆ 10 ಕೋಟಿ ರೂ. ಖುರ್ಚು ಮಾಡುವ ಅಗತ್ಯವೇನು ಎಂದು ಪ್ರಶ್ನಿಸಿದ ಅವರು, ಬೆಂಗಳೂರು ನಗರದಲ್ಲಿ ಗುಂಡಿ ಮುಚ್ಚಲು ಸಾಧ್ಯವಾಗಿಲ್ಲ. ಸತತ ನಾಲ್ಕು ವರ್ಷಗಳ ಬರದಿಂದ ರಾಜ್ಯದ ಜನ ತತ್ತರಿಸಿದ್ದಾರೆ. ಹೀಗಿರುವಾಗ ಅದ್ಧೂರಿ ಕಾರ್ಯಕ್ರಮ ಬೇಕೇ ಎಂದರು.
ಕಾರ್ಯಕ್ರಮದಲ್ಲಿ ಭಾಗವಹಿಸುವ ಅತಿಥಿ-ಗಣ್ಯರಿಗೆ ಪಂಚತಾರಾ ಹೊಟೇಲ್ ಊಟದ ವ್ಯವಸ್ಥೆ ಮಾಡಲಾಗುತ್ತಿದೆ. ಸರಕಾರವೇ ಜಾರಿಗೆ ತಂದಿರುವ ಜನಪ್ರಿಯ ಯೋಜನೆ ಇಂದಿರಾ ಕ್ಯಾಂಟೀನ್ ಊಟದ ವ್ಯವಸ್ಥೆ ಮಾಡಬಹುದು. ಪ್ರತಿಕ್ಷೇತ್ರದಲ್ಲಿ ಅಲ್ಲಿನ ಶಾಸಕರು 60 ಸಸಿ ನೆಡಲು ಅವಕಾಶ ನೀಡಬಹುದು. ಹೀಗೆ ನಾನಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಕಡಿಮೆ ವೆಚ್ಚದಲ್ಲಿ ವಜ್ರಮಹೋತ್ಸವನ್ನು ಸ್ಮರಣೀಯವಾಗಿಸಲು ಮುಂದಾಗಬೆೀಕು ಎಂದು ಅವರು ಒತ್ತಾಯಿಸಿದರು.







