ಕ್ರೀಡೆಗೆ ಪ್ರತಿದಿನ ಕನಿಷ್ಠ 8ಗಂಟೆ ಪರಿಶ್ರಮ ಅಗತ್ಯ: ಸಚಿವ ಪ್ರಮೋದ್
ಉಡುಪಿ, ಅ.21: ರಾಜ್ಯ ಸರಕಾರ ಕ್ರೀಡಾ ಕ್ಷೇತ್ರಕ್ಕೆ ನಿರಂತರ ಪ್ರೋತ್ಸಾಹ ನೀಡುತ್ತಿದ್ದು, ವಿವಿಧ ಸೌಲಭ್ಯಗಳಿಗಾಗಿ ಕೋಟ್ಯಾಂತರ ಹಣ ವ್ಯಯ ಮಾಡಿದೆ. ಕ್ರೀಡಾ ವಿದ್ಯಾರ್ಥಿಗಳು ಪ್ರತಿದಿನ ಕನಿಷ್ಠ 8 ಗಂಟೆ ಪರಿಶ್ರಮ ಪಟ್ಟರೆ ನಿರ್ದಿಷ್ಟ ಗುರಿ ತಲುಪಲು ಸಾಧ್ಯವಾಗುತ್ತದೆ ಎಂದು ರಾಜ್ಯ ಮೀನುಗಾರಿಕೆ, ಯುವಜನ ಸಬಲೀಕರಣ ಮತ್ತು ಕ್ರೀಡೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದ್ದಾರೆ.
ಉಡುಪಿಯ ಶೈನ್ ಟೇಬಲ್ ಟೆನಿಸ್ ಅಕಾಡೆಮಿ ವತಿಯಿಂದ ಅಜ್ಜರ ಕಾಡು ಪುರಭವನದ ಮಿನಿ ಸಭಾಂಗಣದಲ್ಲಿ ಏರ್ಪಡಿಸಲಾದ ಎರಡು ದಿನಗಳ ರಾಜ್ಯಮಟ್ಟದ ಟೇಬಲ್ ಟೆನಿಸ್ ಪಂದ್ಯಾಟವನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಮಕ್ಕಳಲ್ಲಿರುವ ಪ್ರತಿಭೆ ಅನಾವರಣಗೊಳ್ಳಬೇಕಾದರೆ ಶಿಕ್ಷಕರು, ಪೋಷಕರು ಹಾಗೂ ಸಮಾಜದ ಪ್ರೋತ್ಸಾಹ ಅಗತ್ಯ. ಈ ನಿಟ್ಟಿನಲ್ಲಿ ಕ್ರೀಡೆ, ಸಾಂಸ್ಕೃತಿಕ, ಶಿಕ್ಷಣ ಸಹಿತ ಎಲ್ಲ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಮಕ್ಕಳಿಗೆ ಸೂಕ್ತ ತರಬೇತಿಯೊಂದಿಗೆ ನೈತಿಕ ಬೆಂಬಲ ಕೂಡ ನೀಡಬೇಕಾಗಿೆ ಎಂದು ಅವರು ಅಭಿಪ್ರಾಯ ಪಟ್ಟರು.
ಉಡುಪಿ ಜಿಲ್ಲಾ ಟೇಬಲ್ ಟೆನಿಸ್ ಸಂಘದ ಅಧ್ಯಕ್ಷ ಐ.ಕೆ.ಜಯಚಂದ್ರ ರಾವ್, ಶೈನ್ ಟೇಬಲ್ ಟೆನಿಸ್ ಅಕಾಡೆಮಿ ಅಧ್ಯಕ್ಷ ಶಫಿ ಅಹಮ್ಮದ್, ಉಪಾ ಧ್ಯಕ್ಷ ಸದಾಶಿವ ಶೆಟ್ಟಿ ಉಪಸ್ಥಿತರಿದ್ದರು. ಅಕಾಡೆಮಿಯ ಅಭಿಜಿತ್ಶೆಟ್ಟಿ ಕಾರ್ಯ ಕ್ರಮ ನಿರೂಪಿಸಿದರು.