ಚಲನ ಶೀಲತೆಗೆ ಆದ್ಯತೆ ನೀಡುವುದೇ ಎಡ ಪಂಥೀಯ ಚಿಂತನೆ: ಸಾಹಿತಿ ಚಂಪಾ

ಮೈಸೂರು, ಅ.22: ಎಲ್ಲರನ್ನು ಅಪ್ಪಿಕೊಳ್ಳುವ ಸಮಾನತೆಯ ಧರ್ಮ ಬಸವ ಧರ್ಮ. ವರ್ತಮಾನದೊಳಗೆ ಉಂಟಾಗಿರುವ ಎಲ್ಲಾ ಗೊಂದಲಗಳನ್ನು ಅರ್ಥೈಸಿಕೊಂಡು ಬಗೆಹರಸಿಕೊಳ್ಳುವ ನಿಟ್ಟಿನಲ್ಲಿ ಸಾಮೂಹಿಕ ಪ್ರಯತ್ನದೊಳಗೆ ನಾವು ಸಾಗಬೇಕಿದೆ ಎಂದು ಸಾಹಿತಿ ಪ್ರೊ.ಚಂದ್ರಶೇಖರ ಪಾಟೀಲ ಹೇಳಿದ್ದಾರೆ.
ನಗರದ ಕಲಾಮಂದಿರದಲ್ಲಿ ಮಲೆಯೂರು ಗುರುಸ್ವಾಮಿ ಅಭಿನಂದನಾ ಸಮಿತಿ ವತಿಯಿಂದ 'ಮಲೆಯೂರು ಗುರುಸ್ವಾಮಿ ಅವರೊಂದಿಗೆ ಒಂದು ದಿನ... ಮಲೆಯೂರು ನಮ್ಮವರು, ಮಗು-70' ಎಂಬ ಶೀರ್ಷಿಕೆಯಡಿ ರವಿವಾರ ಹಮ್ಮಿಕೊಂಡಿದ್ದ ಪ್ರೊ.ಮಲೆಯೂರು ಗುರುಸ್ವಾಮಿ ಅವರ 'ಬದುಕು-ಬರಹ' ಕುರಿತ ಚಿಂತನೆ ಹಾಗೂ ಅವರ ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಚಲನ ಶೀಲತೆಗೆ ಆದ್ಯತೆ ನೀಡುವುದೇ ಎಡ ಪಂಥೀಯ ಚಿಂತನೆಯಾಗಿದೆ. ಬದುಕಿನಲ್ಲಿ ಚಲನ ಶೀಲತೆ ಬಯಸುವ ಪ್ರಗತಿಪರರು, ಪ್ರಗತಿಗಾಮಿಗಳೇ ಎಡ ಪಂಥೀಯರು. ಬುದ್ಧ, ಬಸವ ಹಾಗೂ ಬಾಬಾ ಸಾಹೇಬರು ಎಡ ಪಂಥೀಯರು. ಚಲನ ಶೀಲತೆಯ ಮೌಲ್ಯಗಳು ಹಾಗೂ ಮನೋಧರ್ಮ ನಮ್ಮದೆಂದು ಖಾತ್ರಿ ಇದ್ದಾಗ ಎಡ ಪಂಥೀಯರು ಎಂದು ಕರೆಸಿಕೊಳ್ಳಲು ಆತಂಕ ಪಡುವ ಅಗತ್ಯವಿಲ್ಲ ಎಂದು ತಿಳಿಸಿದರು.
ಚಲನ ಶೀಲತೆಗೆ ಬದಲು ಸಮಾಜವನ್ನು ಜಡತ್ವದಲ್ಲೇ ಇರಬೇಕೆಂದು ಬಯಸುವ ಸಿದ್ಧಾಂತವನ್ನು ಇದು ಒಳಗೊಂಡಿದೆ. ಯಥಾಸ್ಥಿತಿ ವಾದ ಸಮರ್ಥನೆ ಮಾಡಿಕೊಳ್ಳುವುದೇ ಬಲ ಪಂಥೀಯ ಎಂದು ಪ್ರತಿಪಾದಿಸಿದರು.
ಮಲೆಯೂರು ಗುರುಸ್ವಾಮಿ ಮೊದಲಿನಿಂದಲೂ ನಮ್ಮ ಸಂಕ್ರಮಣ ಪತ್ರಿಕೆಯ ಬರಹಗಾರರು. ಜತೆಗೆ ನಮ್ಮ ಚಳವಳಿಗಳಲ್ಲಿ ತಮ್ಮದೇ ಆದ ಮಿತಿಯೊಳಗೆ ಪಾಲ್ಗೊಂಡವರು. ಈ ಹಿಂದೆ ನಾನೂ ಕಸಾಪ ರಾಜ್ಯಾಧ್ಯಕ್ಷನಾಗಿದ್ದ ವೇಳೆ ಅವರು ಚಾಮರಾಜನಗರ ಜಿಲ್ಲಾ ಕಸಾಪದ ಅಧ್ಯಕ್ಷರಾಗಿ ಜಿಲ್ಲಾ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಯಶಸ್ವಿಯಾಗಿ ನಡೆಸಿದ್ದಾರೆ. ಅಕ್ಷರದ ಎಲ್ಲಾ ಸಾಧ್ಯತೆಗಳನ್ನು ದುಡಿಸಿಕೊಳ್ಳುವ ಮೂಲಕ ತಮ್ಮ ವ್ಯಕ್ತಿತ್ವ ರೂಪಿಸಿಕೊಂಡಿದ್ದಾರೆ. ಇವರ ಕಾಯಕ ವಲಯ ಮತ್ತಷ್ಟು ವಿಸ್ತರಣೆ ಆಗಲಿ ಎಂದು ಹಾರೈಸಿದ ಅವರು, ಕಳೆದ 10 ವರ್ಷಗಳಿಂದ ಈಚೆಗೆ ಕನ್ನಡ ಸಾಹಿತ್ಯ ಸಮ್ಮೇಳನಗಳನ್ನು ಗಮನಿಸಿದರೆ, ಅವು ಪ್ರಜಾಸತ್ಮಾಕ ವೇದಿಕೆಯಾಗಿ ಕೊಡುಗೆ ನೀಡಿವೆ ಎಂದು ನುಡಿದರು.
ಡಾ.ಮಹದೇವಸ್ವಾಮಿ ಹೆಗ್ಗೋಠಾರ ರಚನೆಯ 'ಮಲೆಯೂರು ಗುರುಸ್ವಾಮಿ ಬದುಕು-ಬರಹ' ಕೃತಿ ಬಿಡುಗಡೆ ಮಾಡಿ ಬಳಿಕ ಮಾತನಾಡಿದ ವಾಸು, ತಮ್ಮ ಶಿಷ್ಯ ಸಮೂಹ ತಯಾರು ಮಾಡಿದ ಕೀರ್ತಿ ಮಲೆಯೂರು ಗುರುಸ್ವಾಮಿ ಅವರಿಗೆ ಸಲ್ಲುತ್ತದೆ. ಇವರು 'ಕಪಿಲೆ ಹರಿದಳು ಕಡಿಲಿಗೆ' ಎಂಬ ತಮ್ಮ ಕಾದಂಬರಿಯನ್ನು ಒಬ್ಬ ಪೌರ ಕಾರ್ಮಿಕ ಮಹಿಳೆಗೆ ಅರ್ಪಿಸಿದ್ದು, ಇದು ಅವರಲ್ಲಿ ಕಟ್ಟಕಡೆ ವರ್ಗದ ಬಗ್ಗೆ ಇರುವ ಕಳಕಳಿಯಾಗಿದೆ. ಇವರ ಸಾಹಿತ್ಯ ಸೇವೆ ಇನ್ನು ಹೆಚ್ಚಿನ ರೀತಿಯಲ್ಲಿ ಸಮಾಜಕ್ಕೆ ದೊರೆಯಲಿ ಎಂದು ಆಶಿಸಿದರು.
ಕಾರ್ಯಕ್ರಮದಲ್ಲಿ ಶ್ರೀ ಹೊಸಮಠದ ಅಧ್ಯಕ್ಷ ಶ್ರೀ ಚಿದಾನಂದ ಸ್ವಾಮೀಜಿ, ವಾಟಾಳು ಸೂರ್ಯ ಸಿಂಹಾಸನ ಮಠದ ಶ್ರೀ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಸಾನಿಧ್ಯ ವಹಿಸಲಿದ್ದರು. ಸಕ್ಕರೆ ಹಾಗೂ ಸಣ್ಣ ಕೈಗಾರಿಕೆ ಸಚಿವೆ ಡಾ.ಮೋಹನ ಕುಮಾರಿ ಅಧ್ಯಕ್ಷತೆ ವಹಿಸಿದ್ದರು. ಪ್ರೊ.ಮಲೆಯೂರು ಗುರುಸ್ವಾಮಿ, ಅಭಿನಂದನಾ ಸಮಿತಿ ಅಧ್ಯಕ್ಷ ಹೆಳವರಹುಂಡಿ ಸಿದ್ದಪ್ಪ, ಸಂಚಾಲಕ ಎಂ.ಚಂದ್ರಶೇಖರ್, ಕಾರ್ಯದರ್ಶಿ ಚಿನ್ನಸ್ವಾಮಿ ವಡ್ಡಗೆರೆ ಉಪಸ್ಥಿತರಿದ್ದರು.
ದುಡ್ಡು ಸುರಿದು ಸಂಪಾದನೆ ಮಾಡುವ ರಾಜಕಾರಣ ದೇಶದಲ್ಲಿದೆ. ಅದರಿಂದ ಜನತೆಗೆ ಬೆಲೆಯೇ ಇಲ್ಲದಂತಾಗಿದೆ. ಅದಕ್ಕೆ ಪರ್ಯಾಯವಾಗಿ ಸಹನೆ, ಪ್ರೀತಿ, ಸಹಬಾಳ್ವೆ, ಸಮಾನತೆಯ ಭಾರತವನ್ನು ಕಟ್ಟಬೇಕಾಗಿದೆ. ಜನಪರವಾದ ರಚನಾತ್ಮಕ ಕೆಲಸಗಳು, ಸೈದ್ಧಾಂತಿಕ ಸಮಾಜ, ನಮ್ಮೊಳಗೆ ಅಂತರಂಗದ ಸಮತ್ವದ ಸಾಧಿಸುವುದೂ ರಾಜಕಾರಣ ಆಗಿದೆ. ಈ ಹಿನ್ನೆಲೆಯಲ್ಲಿ ಸ್ವರಾಜ್ ಇಂಡಿಯಾ ಧ್ಯೇಯ ಬದ್ಧ ನಡೆ, ಧ್ಯೇಯ ಬದ್ಧ ಪಡೆ ಎಂಬ ಘೋಷಣಾ ವಾಕ್ಯದೊಡನೆ ಸುಧಾರಣೆಯ ಉದ್ದೇಶ ನಮ್ಮ ಮುಂದಿದೆ.ಸಾಹಿತಿ ದೇವನೂರು ಮಹಾದೇವ, ಸ್ವರಾಜ್ ಇಂಡಿಯಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷೀಯ ಮಂಡಳಿ ಸದಸ್ಯ







