ದರೋಡೆಕೋರ ರಾಜಕೀಯ ಪ್ರತಿನಿಧಿಗಳ ವಿರುದ್ಧ ಹೋರಾಟಕ್ಕೆ ನಾವು ಸಿದ್ಧರಾಗಬೇಕು: ಹಿರೇಮಠ

ಮೈಸೂರು, ಅ.22: ಪ್ರಸ್ತುತ ದೇಶವನ್ನು ಆಳುತ್ತಿರುವ ಭ್ರಷ್ಟ, ದುಷ್ಟ, ಲೂಟಿಕೋರ ರಾಜಕಾರಣಕ್ಕೆ ಪರ್ಯಾಯಾವಾಗಿ ಸಂವಿಧಾನದತ್ತ ಸಮಾನತೆಯ ಸಮಾಜ ನಿರ್ಮಾಣದ ರಾಜಕೀಯ ಪಕ್ಷಕ್ಕೆ ನಾವು ಬೆಂಬಲ ನೀಡಬೇಕು ಎಂದು ಧಾರವಾಡದ ಸಮಾಜ ಪರಿವರ್ತನಾ ಸಂಸ್ಥೆ ಹಾಗೂ ಜನಾಂದೋಲನ ಮಹಾಮೈತ್ರಿ ಹಿರಿಯ ನಾಯಕ ಎಸ್.ಆರ್.ಹಿರೇಮಠ ತಿಳಿಸಿದ್ದಾರೆ.
ನಗರದ ಪುರಭವನದಲ್ಲಿ ರವಿವಾರ ಆಯೋಜಿಸಿದ್ದ ಸ್ವರಾಜ್ ಇಂಡಿಯಾ ಕ್ರಿಯಾಶೀಲ ಕಾರ್ಯಕರ್ತರ ಸಮಾಲೋಚನಾ ಸಭೆ ಮತ್ತು ಮೈಸೂರು ನಗರ, ಗ್ರಾಮಾಂತರ ಜಿಲ್ಲೆ ಘಟಕಗಳಿಗೆ ಚಾಲನೆ ನೀಡಿ ನಂತರ ಮಾತನಾಡಿದರು.
ಕೆಲ ಶಕ್ತಿಗಳು ರಾಜಕೀಯವನ್ನು ಹೈಜಾಕ್ ಮಾಡಿ ತಪ್ಪು ಹಾದಿಯಲ್ಲಿ ನಡೆಯುತ್ತಿವೆ. ಅದರಿಂದ ದೇಶದ ರಾಜಕಾರಣವನ್ನು ನಾವು ಕೈಗೆತ್ತಿಕೊಂಡು ಅದಕ್ಕೆ ಪುನಶ್ಚೇತನ ನೀಡಬೇಕು. ಪ್ರಸ್ತುತ ದೇಶವನ್ನು ಆಳುತ್ತಿರುವ ಭ್ರಷ್ಟ, ದುಷ್ಟ, ಲೂಟಿಕೋರ ರಾಜಕಾರಣಕ್ಕೆ ಪರ್ಯಾಯವಾಗಿ ಸಂವಿಧಾನದತ್ತ ಸಮಾನತೆಯ ಸಮಾಜ ನಿರ್ಮಾಣದ ಆಶಯದಡಿಯಲ್ಲಿ ಸ್ವರಾಜ್ ಇಂಡಿಯಾ ಪಕ್ಷ ಸ್ಥಾಪನೆಯಾಗಿದ್ದು, ದರೋಡೆಕೋರ ರಾಜಕೀಯ ಪ್ರತಿನಿಧಿಗಳ ವಿರುದ್ಧ ಹೋರಾಟಕ್ಕೆ ಸಿದ್ಧರಾಗಬೇಕು ಎಂದು ಹೇಳಿದರು.
ಜೆಸಿಬಿ ಅಳಿಸಿ ಹಾಕಿ: ರಾಜ್ಯದಲ್ಲಿ ಪ್ರಮುಖ ರಾಜಕೀಯ ಪಕ್ಷಗಳಾದ ಜೆಸಿಬಿ( ಜತನಾದಳ, ಕಾಂಗ್ರೆಸ್ ಮತ್ತು ಬಿಜೆಪಿ)ಯನ್ನು ಅಳಿಸಿ ಹಾಕಿ, ಸ್ವರಾಜ್ ಇಂಡಿಯಾ ಅಧಿಕಾರಕ್ಕೆ ತರಲು ಶ್ರಮಿಸಬೇಕು. ಕೇಂದ್ರ ಸರ್ಕಾರ 2 ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಹೇಳಿತ್ತು. ಆದರೆ 2 ಲಕ್ಷ ಮಂದಿಗೆ ಕೆಲಸ ಕೊಡುವುದೂ ಸಾಧ್ಯವಾಗಿಲ್ಲ ಎಂದು ಕಿಡಿಕಾರಿದರು.
ಶಾಸಕ ಕೆ.ಎಸ್.ಪುಟ್ಟಣ್ಣಯ್ಯ ,ಮಾತನಾಡಿ, ಟಿಪ್ಪು ಸುಲ್ತಾನ್ ಜಯಂತಿ ಚರ್ಚೆ ನಡೆಯುತ್ತಿದೆ. ಇದೆಲ್ಲ ಕೇವಲ ಓಟಿಗಾಗಿ ಎಂದು ಟೀಕಿಸಿದ ಅವರು, ಸ್ವರಾಜ್ ಬೆಳವಣಿಗೆಗೆ ಮೀಡಿಯಾಗಳು, ಐಡಿಯಾಗಳನ್ನು ಬಳಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಸ್ವರಾಜ್ ಇಂಡಿಯಾ ಸಂಪೂರ್ಣ ಮಾನವ ಧರ್ಮದ ಪಕ್ಷವಾಗಿದೆ ಎಂಬುದಾಗಿ ಕರೆ ಕೊಡಬೇಕು ಎಂದು ಅವರು ಸಲಹೆ ನೀಡಿದರು.
30ರಿಂದ 50 ಸ್ಥಾನ ಗಳಿಸಬೇಕು: ಮುಂದಿನ ಚುನಾವಣೆಯಲ್ಲಿ ಸ್ವರಾಜ್ ಇಂಡಿಯಾ 30ರಿಂದ 50 ಸ್ಥಾನಗಳಿಸುವ ನಿಟ್ಟಿನಲ್ಲಿ ಯೋಜನೆಗಳನ್ನು ರೂಪಿಸಬೇಕು. ಮತದಾನ ಪ್ರಸ್ತುತ ಸ್ಥಿತಿಯಲ್ಲಿ ಮತ`ಧನ'ವಾಗಿದೆ. ಅದಕ್ಕೆ ಜಾತಿ ಮಿಶ್ರಣ ಮಾಡಲಾಗುತ್ತಿದೆ. ಆದರೆ, ನಾವು ನಿರಾಶವಾದಿಗಳಾಗದೆ ಆಶಾಭಾವನೆಯಿಂದ ಸ್ವರಾಜ್ ಕಟ್ಟಬೇಕಿದೆ ಎಂದರು.
ಈ ವೇಳೆ ಸ್ವರಾಜ್ ಇಂಡಿಯಾ ಸಂಸ್ಥಾಪಕ ಯೋಗೇಂದ್ರ ಯಾದವ್ ಅವರ ರಚನೆಯ ಪರ್ಯಾಯ ರಾಜಕಾರಣಕ್ಕೆ ಸ್ವಾಗತ ಎಂಬ ಕಿರು ಪುಸ್ತಿಕೆಯ ಕನ್ನಡ ಅನುವಾದವನ್ನು ದಿ ಸ್ಟೇಟ್ ಆನ್ಲೈನ್ ಪತ್ರಿಕೆ ಸಂಪಾದಕ ಸುಗತ ಶ್ರೀನಿವಾಸ ರಾಜು ಬಿಡುಗಡೆಗೊಳಿಸಿದರು.
ಸಭೆಯಲ್ಲಿ ಸ್ವರಾಜ್ ಇಂಡಿಯಾ ರಾಜ್ಯ ಸಂಘಟನಾ ಸಮಿತಿ ಸಂಚಾಲಕ ಅಮ್ಜದ್ ಪಾಷ ಅಧ್ಯಕ್ಷತೆ ವಹಿಸಿದ್ದರು. ಪಕ್ಷದ ನಾಯಕ ದೊಡ್ಡಿಪಾಳ್ಯ ನರಸಿಂಹಮೂರ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸ್ವರಾಜ್ ಇಂಡಿಯಾ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯರಾದ ಕೆ.ಪಿ.ಸಿಂಗ್, ಬಡಗಲಪುರ ನಾಗೇಂದ್ರ, ರಾಜ್ಯ ಸಂಘಟನಾ ಸಮಿತಿ ಸದಸ್ಯರಾದ ಬಿ.ರಾಧ, ದಾದಾಪೀರ್, ನಿಂಗರಾಜು ಮಲ್ಲಾಡಿ, ಪ್ರೊ.ಶಬ್ಬೀರ್ ಎಂ.ಮುಸ್ತಾಫ, ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಗುರುಪ್ರಸಾದ್ ಕೆರೆಗೋಡು, ಹೊಸೂರು ಕುಮಾರ್, ಆರ್.ಲಕ್ಷ್ಮಣ್, ಜನಾರ್ಧನ್, ಶಂಭುಲಿಂಗಸ್ವಾಮಿ, ಪಿ.ತೇಜೋಪಾಲ್, ಬಿ.ಕರುಣಾಕರನ್, ಮಂಜುಳಾ ಅಕ್ಕಿ ಉಪಸ್ಥಿತರಿದ್ದರು. ರಂಗಾಯಣದ ಮಾಜಿ ನಿರ್ದೇಶಕ ಎಚ್.ಜನಾರ್ಧನ್(ಜನ್ನಿ) ಅವರು ಗೀತೆಯೊಂದನ್ನು ಹಾಡಿದರು. ಅಭಿರುಚಿ ಗಣೇಶ್ ಸ್ವಾಗತಿಸಿದರು. ಪ್ರಗತಿಪರ ಚಿಂತಕ ಜೆ.ಬಿ.ರಂಗಸ್ವಾಮಿ ನಿರೂಪಿಸಿದರು. ಬಿ.ಕರುಣಾಕರನ್ ವಂದಿಸಿದರು.
ಜಿಎಸ್ಟಿಯು ಸಣ್ಣ ಕೈಗಾರಿಕೆಗಳನ್ನು ಹೈರಾಣಾಗಿಸಿದೆ. ನೋಟು ಅಮಾನ್ಯೀಕರಣ ಜನರನ್ನು ಸಂಕಷ್ಟಕ್ಕೆ ದೂಡಿದೆ. ಈ ಬಗ್ಗೆ ಸಂಕಥನಗಳನ್ನು ಕಟ್ಟುವ ಕೆಲಸವಾಗಬೇಕು. ಬಿಜೆಪಿಗೆ ಧರ್ಮ, ಅಯೋಧ್ಯೆ ಇದ್ದರೆ, ಸದ್ಯ ಕರ್ನಾಟಕ ಸರ್ಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಲಿಂಗಾಯತ ಜಾತಿಯ ಪ್ರತ್ಯೇಕತೆಯ ಐಡೆಂಟಿಟಿ ಇದೆ. ಇವು ದುರ್ಬಳಕೆಯಾಗಿದ್ದು, ಸ್ವರಾಜ್ ಇವಕ್ಕೆ ಹೊರತಾದ ಲಿಂಗಾಧಾರಿತ, ಉದ್ಯೋಗಾಧಾರಿತವನ್ನು ಐಡೆಂಟಿಟಿಯಾಗಿ ಬಳಸಿಕೊಳ್ಳಬಹುದು.
-ಸುಗತ ಶ್ರೀನಿವಾಸರಾಜು







