ಎಸ್ಸೆಸ್ಸೆಫ್ ವತಿಯಿಂದ 'ಮಾದಕ ಮುಕ್ತ ಭಾರತ' ಅಭಿಯಾನ
ಉಳ್ಳಾಲ, ಅ. 22: ಎಸ್ಸೆಸ್ಸೆಫ್ ವತಿಯಿಂದ 'ಮಾದಕ ಮುಕ್ತ ಭಾರತ' ಎಂಬ ಅಭಿಯಾನವನ್ನು ರಾಜ್ಯಾದ್ಯಂತ ಹಮ್ಮಿಕೊಂಡಿದ್ದು, ಆ ಪ್ರಯುಕ್ತ ಎಸ್ಸೆಸ್ಸೆಫ್ ದೇರಳಕಟ್ಟೆ ಸೆಕ್ಟರ್ ವತಿಯಿಂದ ಬೃಹತ್ ಜಾಗೃತಿ ನಡಿಗೆಯು ನಾಟೆಕಲ್ ನಿಂದ ದೇರಳಕಟ್ಟೆಯವರಿಗೆ ನಡೆಯಿತು.
ಸಚಿವ ಯು.ಟಿ ಖಾದರ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ಮಾದಕ ವಸ್ತು ನಿಯಂತ್ರಣಕ್ಕೆ ವಿಶೇಷ ತಂತ್ರಜ್ಞಾನಗಳನ್ನೊಳಗೊಂಡ ಸ್ವಾಫ್ಟ್ ವೇರ್ ರಚಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಈ ಮೂಲಕ ಮಾದಕ ವಸ್ತು ಬಳಕೆ ಮಾರಾಟ ಕಂಡುಬಂದಲ್ಲಿ ಸಾರ್ವಜನಿಕರು ಉಚಿತ ಕರೆ (ಟೋಲ್ ಫ್ರೀ) ಸಂಖ್ಯೆ ಮೂಲಕ ದೂರು ನೀಡಬಹುದು. ಟೋಲ್ ಫ್ರೀ ಸಂಖ್ಯೆ ಮೂಲಕ ಕರೆ ಮಾಡುದರಿಂದ ದೂರು ನೀಡಿದವರ ಮಾಹಿತಿ ಲಭ್ಯವಾಗುವುದಿಲ್ಲ. ಸಾರ್ವಜನಿಕರು ಮಾದಕ ವಸ್ತು ಬಳಕೆ ಮಾರಾಟ ಕಂಡು ಬಂದಲ್ಲಿ ನೇರವಾಗಿ ಕರೆ ಮಾಡಿ ದೂರು ನೀಡಬಹುದು ಈ ನೂತನ ಯೋಜನೆ ಶೀಘ್ರವೇ ಜಾರಿಯಾಗಲಿದೆ ಎಂದು ಹೇಳಿದರು.
ಎಸ್ಸೆಸ್ಸೆಫ್ ಡಿವಿಷನ್ ಅಧ್ಯಕ್ಷ ಮುನಿರ್ ಅಹ್ಮದ್ ಕಾಮಿಲ್ ಸಖಾಫಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ನವ ಪೀಳಿಗೆಯು ಇಂದು ಮಾದಕ ವ್ಯಸನಿಗಳ ಕೂಪದಲ್ಲಿ ಬೀಳುತ್ತಿರುವುದು ಖೇದಕರವಾಗಿದೆ. ಇಸ್ಲಾಂ ಮಾದಕ ವಸ್ತುಗಳನ್ನು ನಿಷೇದಿಸಿದಲ್ಲದೆ, ಅದು ಮನುಷ್ಯ ಸಮೂಹವನ್ನು ನಾಶಮಾಡಲಿದೆ ಎಂದು ತಾಕೀತು ಮಾಡಿದೆ. ಆದ್ದರಿಂದ ಜನ ಸಾಮಾನ್ಯರು ಮಾದಕ ವ್ಯಸನಗಳ ಬಗ್ಗೆ ಜಾಗೃತೆ ವಹಿಸಿ, ಯುವ ಪೀಳಿಗೆಯನ್ನು ಅದರಿಂದ ಮುಕ್ತ ಮಾಡಲು ನಾಗರಿಕರು ಮುಂದೆ ಬರಬೇಕೆಂದು ಕರೆ ನೀಡಿದರು.
ಸೈಯದ್ ಅಲವಿ ತಂಙಳ್ ಕಿನ್ಯ ಅವರು ಎಸ್ಸೆಸ್ಸೆಫ್ ಧ್ವಜವನ್ನು ಜಾಥಾ ಉಸ್ತುವಾರಿ ಸಿದ್ದೀಖ್ ಮದನಿ ಅವರಿಗೆ ನೀಡುವ ಮೂಲಕ ಜಾಥಾಕ್ಕೆ ಚಾಲನೆ ನೀಡಿದರು. ಕೆ.ಎಂ. ಮುಸ್ತಫಾ ಹಿಮಮಿ ಹಾವೇರಿ ಮಾತನಾಡಿದರು.
ಕೊಣಾಜೆ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಸುಕುಮಾರ್ ಮಾತನಾಡಿ ಎಸ್ಸೆಸ್ಸೆಫ್ ನಂತಹ ಸಮಾಜಿಕ ಸಂಘಟನೆ ಇಂತಹ ಕಾರ್ಯಕ್ರಮ ರೂಪಿಸುವುದು ನಿಜಕ್ಕೂ ಹೆಮ್ಮೆಯ ವಿಷಯವಾಗಿದೆ. ನೀವು ಮುಂದುವರಿಯಿರಿ ನಾವು ನಿಮ್ಮೊಂದಿಗೆ ಇದ್ದೇವೆ. ಎಲ್ಲಿಯಾದರೂ ಇಂತಹ ವ್ಯಸನಗಳು ಇರುವುದು ಗೊತ್ತಾದರೆ ನಮಗೆ ಮಾಹಿತಿ ನೀಡಿ ಎಂದು ಮನವಿ ಮಾಡಿದರು.
ಸಮಾರಂಭದಲ್ಲಿ ಎಸ್ವೈಎಸ್ ದೇರಳಕಟ್ಟೆ ಸೆಂಟರ್ ಅಧ್ಯಕ್ಷ ಇಸ್ಮಾಈಲ್ ಸಅದಿ ಉರುುಣೆ, ಎಸ್ಎಂಎ ದೇರಳಕಟ್ಟೆ ಪ್ರ. ಕಾರ್ಯದರ್ಶಿ ಅಶ್ರಫ್ ಇಮ್ದಾದಿ, ಎಸ್ಸೆಸ್ಸೆಫ್ ದ.ಕ. ಜಿಲ್ಲಾ ಸದಸ್ಯರಾದ ಜಮಾಲುದ್ದೀನ್ ಸಖಾಫಿ, ಉಳ್ಳಾಲ ಡಿವಿಷನ್ ಕಾರ್ಯದರ್ಶಿ ಖುಬೈಬ್ ತಂಙಳ್, ಹನೀಫ್ ಸಖಾಫಿ ನಾಟೆಕಲ್, ಎಸ್ಸೆಸ್ಸೆಫ್ ದೇರಳಕಟ್ಟೆ ಸೆಕ್ಟರ್ ಅಧ್ಯಕ್ಷ ಹಸನ್ ಸಅದಿ, ಕೆ.ಸಿಎಫ್ ಮುಖಂಡ ಮೆಹಬೂಬ್ ಸಖಾಫಿ ಕಿನ್ಯಾ, ಮಾಜಿ ಮೂಡ ಅಧ್ಯಕ್ಷ ಇಬ್ರಾಹಿಂ ಕೋಡಿಜಾಲ್, ಬೆಳ್ಮ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಬಿ.ಎಂ ಸತ್ತಾರ್, ಸದ್ಯ ಕಬೀರ್.ಡಿ, ಯೂತ್ ಕಾಂಗ್ರೆಸ್ ಮಂಗಳೂರು ವಿಧಾನ ಸಭಾ ಕ್ಷೇತ್ರ ಅಧ್ಯಕ್ಷ ರವೂಫ್, ಮಂಜನಾಡಿ ಗ್ರಾಮ ಪಂಚಾಯತ್ ಸದಸ್ಯ ಅಬ್ಬಾಸ್ ಮದಪಾಡಿ ಮುಂತಾದವರು ಈ ಸಂದರ್ಭ ಉಪಸ್ಥಿತರಿದರು.
ಈ ಕಾರ್ಯಕ್ರಮವನ್ನು ಸೆಕ್ಟರ್ ಪ್ರ.ಕಾರ್ಯದರ್ಶಿ ಶಫೀರ್ ರೆಂಜಾಡಿ ನಿರೂಪಿಸಿದರು. ಹಮೀದ್ ನಾಟೆಕಲ್ ವಂದಿಸಿದರು. ಘೋಷ ವಾಕ್ಯದೊಂದಿಗೆ ಮುಂದುವರಿದ ಜಾಥಾವು ದೇರಕಟ್ಟೆಯಲ್ಲಿ ಸಮಾಪ್ತಿಗೊಂಡಿತ್ತು.