ಕೃಷ್ಣಾಪುರ: ಸ್ಪೋರ್ಟಿಂಗ್ ಕ್ಲಬ್ ವಾರ್ಷಿಕೋತ್ಸವ; ರಕ್ತದಾನ ಶಿಬಿರ
ಮಂಗಳೂರು, ಅ.23: ಸ್ಪೋರ್ಟಿಂಗ್ ಕ್ಲಬ್ ಕೃಷ್ಣಾಪುರ ಇದರ 17ನೆ ವಾರ್ಷಿಕೋತ್ಸವದ ಅಂಗವಾಗಿ ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ ಇದರ ಜಂಟಿ ಆಶ್ರಯದಲ್ಲಿ ಫಾದರ್ ಮುಲ್ಲರ್ ಆಸ್ಪತ್ರೆ ಕಂಕನಾಡಿ ಇದರ ಸಹಯೋಗದೊಂದಿಗೆ ಬೃಹತ್ ಸಾರ್ವಜನಿಕ ರಕ್ತದಾನ ಶಿಬಿರವು ರವಿವಾರ ಇಲ್ಲಿನ ಸರಕಾರಿ ಪದವಿ ಪೂರ್ವ ಕಾಲೇಜು ಕಾಟಿಪಳ್ಳ 7ನೆ ಬ್ಲಾಕ್ ಕೃಷ್ಣಾಪುರದಲ್ಲಿ ನಡೆಯಿತು.
ಸಭಾ ಕಾರ್ಯಕ್ರಮವನ್ನು ಅಡ್ವೋಕೇಟ್ ಹಾಗೂ ನೋಟರಿ ಮುಹಮ್ಮದ್ ಇಸ್ಮಾಯಿಲ್.ಜಿ ಅಧ್ಯಕ್ಷತೆಯಲ್ಲಿ ಬದ್ರಿಯಾ ಜುಮಾ ಮಸೀದಿ ಕೃಷ್ಣಾಪುರ ಇದರ ಖತೀಬ್ ಫಾರೂಕ್ ಸಖಾಫಿ ಇವರ ದುವಾಶೀರ್ವಚನದೊಂದಿಗೆ, ಮಂಗಳೂರು ಉತ್ತರ ವಲಯದ ಶಾಸಕ ಬಿ.ಎ.ಮೊಯ್ದಿನ್ ಬಾವ ಉದ್ಘಾಟಿಸಿದರು.
ನಂತರ ಮಾತನಾಡಿದ ಶಾಸಕ, ಸ್ಥಳೀಯ ಪರಿಸರದ ಬಡ ಜನರಿಗೆ ಊರುಗೋಲಾಗಿ ಶಾಲಾ ಮಕ್ಕಳ ಪುಸ್ತಕ ವಿತರಣೆ, ಬಡವರ ಮದುವೆ ಸಹಾಯ ಮುಂತಾದ ಸಾಮಾಜಿಕ ಜನಪರ ಕಾರ್ಯ ಮಾಡುತ್ತಾ ಇದೀಗ ರಕ್ತದಾನದಂತಹ ಶಿಬಿರವನ್ನು ಏರ್ಪಡಿಸಿದ ಸ್ಪೋರ್ಟಿಂಗ್ ಕ್ಲಬ್ ಇದರ ಸೇವೆಯನ್ನು ಕೊಂಡಾಡಿದರು.
ರಕ್ತ ದಾನವು ದಾನಗಳಲ್ಲಿ ಶ್ರೇಷ್ಠವಾಗಿರುತ್ತದೆ. ಇದು ಎಲ್ಲಾ ದಾನಗಳ ಮಹಾ ತಾಯಿಯಾಗಿರುತ್ತದೆ. ರಕ್ತದಾನವು ಸಾಮಾಜಿಕ ಜಾಗೃತಿಯನ್ನು ಮೂಡಿಸುತ್ತದೆ ಎಂದು ಅಧ್ಯಕ್ಷೀಯ ಭಾಷಣದಲ್ಲಿ ಅಡ್ವೋಕೇಟ್ ಹಾಗೂ ನೋಟರಿ ಮುಹಮ್ಮದ್ ಇಸ್ಮಾಯಿಲ್. ಜಿ ಹೇಳಿದರು.
ಮಂಗಳೂರಿನ ಕಾರ್ಪೊರೇಟರ್ ಅಯಾಝ್ ಅವರು ಮಾತನಾಡುತ್ತಾ, ಎಲ್ಲರೂ ಮಾನವ ಜಾತಿಯವರಾಗಿದ್ದು, ಇಲ್ಲಿ ಸಂಗ್ರಹಿಸಿದ ರಕ್ತ ಯಾವ ಜಾತಿಯವನ ದೇಹ ಸೇರುತ್ತೆ ಎಂದು ಹೇಳಲಿಕ್ಕಾಗುವುದಿಲ್ಲ. ಕೆಲವು ವರ್ಷಗಳ ಹಿಂದೆ ಎರಡು ಯೂನಿಟ್ ರಕ್ತ ಸಿಗಲು ಮಂಗಳೂರಿನ ಎಲ್ಲಾ ಆಸ್ಪತ್ರೆಗಳಲ್ಲಿ ಅಲೆದಾಡುವ ಸನ್ನಿವೇಶ ಇತ್ತು. ಆದರೆ ಈಗ ಬ್ಲಡ್ ಹೆಲ್ಪ್ ಲೈನ್ ಕರ್ನಾಟಕದಂತಹ ಸಂಘಟನೆಗಳ ಮೂಲಕ ಈ ಒಂದು ಕಾರ್ಯ ಸುಲಭವಾಗುತ್ತಿದೆ ಎಂದು ಹೇಳುತ್ತಾ ಇಂತಹ ಸಂಘಟನೆಗಳಿಗೆ ಪ್ರೋತ್ಸಾಹ ನೀಡಿ ರಕ್ತದಾನ ಶಿಬಿರಗಳಂತಹ ಜನಪರ ಕಾರ್ಯಗಳನ್ನು ಮಾಡುತ್ತಿರುವ ಸ್ಪೋರ್ಟಿಂಗ್ ಕ್ಲಬ್ ಅನ್ನು ಅಭಿನಂದಿಸಿದರು.
ಕಾರ್ಯಕ್ರಮದಲ್ಲಿ ಬಿ.ಎಂ.ಅಬೂಬಕರ್, ಬಿ.ಎಂ.ಹುಸೈನ್, ಅಯಾಝ್, ಟಿ.ಎಂ.ಅಬೂಬಕರ್, ಹಕೀಮ್ ಫಾಲ್ಕನ್, ಅಬ್ದುಲ್ ಖಾದರ್ ಬಾಂಬೆ, ಮುಸ್ತಫಾ ಅಡ್ಡೂರು ದೆಮ್ಮಲೆ, ಸಾದಿಕ್, ನಿಝಾಮ್ ತೋಕೂರು, ಸಾದಿಕ್ ಪಾವೂರು ಮುಂತಾದ ಗಣ್ಯರು ಪಾಲ್ಗೊಂಡರು.
ಈ ಸಂದರ್ಭದಲ್ಲಿ ಸ್ಪೋರ್ಟಿಂಗ್ ಕ್ಲಬ್ ಇದರ ಅಧ್ಯಕ್ಷರೂ ಸಮಾಜ ಸೇವಕರೂ ಆದ ಬಿ.ಎಂ.ಅಬೂಬಕರ್ ಅವರನ್ನು ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ ಸಂಸ್ಥೆಯ ಪರವಾಗಿ ಮಂಗಳೂರಿನ ಕಾರ್ಪೊರೇಟರ್ ಅಯಾಝ್ ಹಾಗೂ ಅಡ್ವೊಕೇಟ್ ಮುಹಮ್ಮದ್ ಇಸ್ಮಾಯಿಲ್.ಜಿ ಶಾಲು ಹೊದಿಸಿ, ಹಣ್ಣುಹಂಪಲು ಹಾಗೂ ಸ್ಮರಣಿಕೆ ನೀಡಿ ಸನ್ಮಾನಿಸಿದರು. ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ ಸಂಸ್ಥೆಯ ಸಲಹೆಗಾರರಾಗಿ ಸಂಸ್ಥೆಗೆ ಪ್ರೋತ್ಸಾಹ ನೀಡುತ್ತಿರುವ ಮುಸ್ತಫಾ ಅಡ್ಡೂರು ದೆಮ್ಮಲೆ ಯವರನ್ನೂ ಸ್ಪೋರ್ಟಿಂಗ್ ಕ್ಲಬ್ ಪರವಾಗಿ ಅಬ್ದುಲ್ ಜಲೀಲ್ ಹಾಗೂ ಇಫ್ತಿಕಾರ್ ಕೃಷ್ಣಾಪುರ ಶಾಲು ಹೊದಿಸಿ ಹಣ್ಣುಹಂಪಲು ಹಾಗೂ ಸ್ಮರಣಿಕೆ ನೀಡಿ ಸನ್ಮಾನಿಸಿದರು.
ಇಫ್ತಿಕಾರ್ ಅಹ್ಮದ್ ಕೃಷ್ಣಾಪುರ ಕಾರ್ಯಕ್ರಮವನ್ನು ನಿರೂಪಣೆ ಮಾಡಿದರು. ಸ್ಪೋರ್ಟಿಂಗ್ ಕ್ಲಬ್ ಹಾಗೂ ಬ್ಲಡ್ ಹೆಲ್ಪ್ ಲೈನ್ ಕರ್ನಾಟಕದ ಕಾರ್ಯಕರ್ತರು ಸ್ವಯಂ ಸೇವಕರಾಗಿ ಕಾರ್ಯ ನಿರ್ವಹಿಸಿದರು.