ವಿಕಾಸ್ ಪದವಿಪೂರ್ವ, ಫಿಸಿಯೋಥೆರಪಿ ಕಾಲೇಜಿನ ಕ್ರೀಡೋತ್ಸವ
ಮಂಗಳೂರು, ಅ. 25: ವಿಕಾಸ್ ಪದವಿಪೂರ್ವ ಕಾಲೇಜು ಹಾಗೂ ವಿಕಾಸ್ ಫಿಸಿಯೋಥೆರಪಿ ಕಾಲೇಜಿನ ಕ್ರೀಡೋತ್ಸವವು ಮಂಗಳ ಕ್ರೀಡಾಂಗಣದಲ್ಲಿ ಇಂದು ನಡೆಯಿತು.ಮುಖ್ಯ ಅತಿಥಿಗಳಾಗಿ ಮಂಗಳೂರು ವಿಶ್ವವಿದ್ಯಾನಿಲಯದ ಕ್ರೀಡೆ ಮತ್ತು ದೈಹಿಕ ಶಿಕ್ಷಣ ವಿಭಾಗದ ಉಪನಿರ್ದೇಶಕ ರಮೇಶ್ ಎಚ್. ಎನ್. ಧ್ವಜಾರೋಹಣಗೈದು ಕ್ರೀಡಾಕೂಟವನ್ನು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳ ಪ್ರತಿಭೆಯನ್ನು ಗುರುತಿಸಲು ಇರುವ ದಿನ ಇದಾಗಿದೆ. ಕ್ರೀಡೆಯಿಂದ ಸ್ವಸ್ಥ ಮನಸ್ಸು ಮತ್ತು ಆರೋಗ್ಯವನ್ನು ಹೊಂದಬಹುದು. ದಿನದ ಒಂದು ಗಂಟೆಯಾದರೂ ಕ್ರೀಡೆಗೋಸ್ಕರ ಮೀಸಲಿಡಬೇಕು. ಕ್ರೀಡಾಸ್ಪೂರ್ತಿಯಿಂದ ಭಾಗವಹಿಸಿ ಹೆತ್ತವರಿಗೂ, ಹಿರಿಯರಿಗೂ ಗೌರವವನ್ನು ತಂದುಕೊಡಿ ಎಂದು ಕ್ರೀಡಾಳುಗಳನ್ನು ಪ್ರೋತ್ಸಾಹಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕಾಲೇಜಿನ ಸ್ಥಾಪಕ ಹಾಗೂ ಮಾಜಿ ಸಚಿವ ಕೃಷ್ಣ ಜೆ. ಪಾಲೆಮಾರ್ ಮಾತನಾಡಿ, ದೇಶದ ಕ್ರೀಡಾಪಟುಗಳನ್ನು ನಿರ್ಮಾಣ ಮಾಡುವ ಉದ್ದೇಶದಿಂದ ಈ ಕ್ರೀಡೋತ್ಸವವನ್ನು ಹಮ್ಮಿಕೊಂಡಿದ್ದೇವೆ. ಕ್ರೀಡೆ ಬಹಳ ಪುರಾತನ ಕಾಲದಿಂದಲೂ ನಮ್ಮಿಂದಿಗೆ ಇದೆ. ಇದು ಶಿಸ್ತುಬದ್ಧ ಜೀವನವನ್ನು ನೀಡುತ್ತದೆ. ಮುಂದಿನ ದಿನಗಳಲ್ಲಿ ನಮ್ಮ ವಿದ್ಯಾರ್ಥಿಗಳು ಅಂತಾರಾಷ್ಟ್ರೀಯ ಮಟ್ಟದವರೆಗೂ ಮುಂದುವರಿಯುವಂತಾಗಲಿ ಎಂದು ಶುಭ ಹಾರೈಸಿದರು.
ಕಾಲೇಜಿನ ಸಂಚಾಲಕ ಡಾ. ಡಿ. ಶ್ರೀಪತಿರಾವ್ ಸ್ವಾಗತಿಸಿದರು. ಪ್ರಾಂಶುಪಾಲ ಪ್ರೊ. ಟಿ. ರಾಜರಾಮ್ರಾವ್ ವಂದಿಸಿದರು. ಟ್ರಸ್ಟಿಗಳಾದ ಜೆ. ಕೊರಗಪ್ಪ, ಸೂರಜ್ ಕುಮಾರ್ ಕಲ್ಯ, ಸಲಹೆಗಾರ ಡಾ.ಅನಂತಪ್ರಭು ಜಿ., ವಿಕಾಸ್ ವಿದ್ಯಾಸಂಸ್ಥೆಯ ಸಮನ್ವಯಾಧಿಕಾರಿ ಪಾರ್ಥಸಾರಥಿ ಪಾಲೆಮಾರ್, ವಿಕಾಸ್ ಫಿಸಿಯೋಥೆರಪಿ ಕಾಲೇಜಿನ ಪ್ರಾಂಶುಪಾಲ ಡಾ. ರಮೇಶ್ ಕೆ. ಉಪಸ್ಥಿತರಿದ್ದರು. ಉಪನ್ಯಾಸಕಿ ಶೃತಿ ಭಂಡಾರಿ ಕಾರ್ಯಕ್ರಮ ನಿರೂಪಿಸಿದರು.