ಮಾನಸಿಕ ಯುದ್ಧದ ವಿರುದ್ಧ ಸಂವಿಧಾನದ ಸಿಪಾಯಿಗಳಾಗಬೇಕಿದೆ: ತೀಸ್ತಾ ಸೆಟಲ್ವಾಡ್
‘ದ್ವೇಷದ ಕಾಲದಲ್ಲಿ ಶಾಂತಿಯ ಮಾತು’ ಸಂವಾದ ಕಾರ್ಯಕ್ರಮ
ಮಂಗಳೂರು, ಅ.25: ದೇಶದಲ್ಲಿ ದ್ವೇಷದ ಮೂಲಕ ಮಾನಸಿಕ ಯುದ್ಧವನ್ನು ಸಾರುತ್ತಿರುವವರ ವಿರುದ್ಧ ಶಾಂತಿ ಬಯಸುವವರು ಸಂವಿಧಾನದ ಸಿಪಾಯಿ ಗಳಾಗಿ ಸಂಘಟಿತರಾಗುವ ಅಗತ್ಯವಿದೆ ಎಂದು ಮಾನವ ಹಕ್ಕುಗಳ ಹೋರಾಟಗಾರ್ತಿ ತೀಸ್ತಾ ಸೆಟಲ್ವಾಡ್ ಕರೆ ನೀಡಿದರು.
ನಗರದ ಸಹೋಯದ ಹಾಲ್ ಸಮೀಪದ ಬಿಷಪ್ ಜತ್ತಣ್ಣ ಸಭಾಂಗಣದಲ್ಲಿ ಸಮರಸ ಮಂಗಳೂರು ಆಯೋಜಿಸಿದ ‘ದ್ವೇಷದ ಕಾಲದಲ್ಲಿ ಶಾಂತಿಯ ಮಾತು’ ಸಂವಾದ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು.
ಭಾರತವನ್ನು ಹಿಂದುತ್ವ ರಾಷ್ಟ್ರವನ್ನಾಗಿಸಬೇಕೆಂಬ ಕಲ್ಪನೆಯಲ್ಲಿ ಸಂವಿಧಾನದ ಆಶಯ, ಮೌಲ್ಯಗಳಿಗೆ ವಿರುದ್ಧವಾಗಿ ಕಾರ್ಯಾಚರಿಸುತ್ತಿರುವವರ ಸಂಖ್ಯೆ ಕಡಿಮೆಯಾಗಿದ್ದರೂ ಅವರು ಸಂಘಟಿತರಾಗಿದ್ದಾರೆ. ರಾಮಸೇನೆ, ಹಿಂದೂ ಜಾಗೃತಿ ಸಮಿತಿ, ಬಜರಂಗದಳ, ವಿಎಚ್ಪಿ ಮೊದಲಾದ ವಿವಿಧ ಸಂಘಟನೆಗಳ ಮೂಲಕ ಅವರು ಸಂವಿಧಾನ ವಿರೋಧಿ ಕೃತ್ಯಗಳನ್ನು ಸಂಘಟಿತ ಧ್ಯೇಯದೊಂದಿಗೆ ಮುನ್ನಡೆಸುತ್ತಿದ್ದಾರೆ. ಅದೇ ಶಾಂತಿಯನ್ನು ಬಯಸುವವರ ಸಂಖ್ಯೆ ಅಧಿಕವಾಗಿದ್ದರೂ ಸಂಘಟಿತರಾಗದ ಕಾರಣ, ಮತೀಯ ಶಕ್ತಿಗಳ ಮಾನಸಿಕ ಯುದ್ಧವು ಶಾಂತಿ ಬಯಸುವವರನ್ನು ಮೌನವಾಗಿಸಿದೆ. ಸಮಾಜದಲ್ಲಿ ಹರಡಲಾಗುತ್ತಿರುವ ದ್ವೇಷವನ್ನು ಸಂಘಟಿತರಾಗಿ ಸಂವಿಧಾನದ ಸಿಪಾಯಿಗಳಾಗಿ ಹೋರಾಡುವ ನಿಟ್ಟಿನಲ್ಲಿ ಸ್ಥಳೀಯವಾಗಿ ನಾಗರಿಕರು ಮೊಹಲ್ಲಾ ಸಮಿತಿಗಳನ್ನು ರಚಿಸಿಕೊಳ್ಳುವ ಅಗತ್ಯವಿದೆ. ಆ ಸಮಿತಿಯು ಸ್ಥಳೀಯ ನಾಗರಿಕರು ಮತ್ತು ಆಡಳಿತದ ನಡುವೆ ಸಂಪರ್ಕವನ್ನು ಕಲ್ಪಿಸುವ ಮೂಲಕ ಸಮಾಜದ ನೈಜ ವಿಷಯಗಳತ್ತ ಬೆಳಕು ಹರಿಸುವ ಕೆಲಸ ಮಾಡಬೇಕು ಎಂದು ಅವರು ಸಲಹೆ ನೀಡಿದರು.
ಪ್ರಜಾಪ್ರಭುತ್ವ, ಸಂವಿಧಾನಬದ್ಧ ರಾಷ್ಟ್ರದಲ್ಲಿ ಹಿಂದೂ ರಾಷ್ಟ್ರ ಎಂದು ಹೇಳುವುದು ಕೂಡಾ ಅಸಂವಿಧಾನಿಕ. ನಮ್ಮ ಸಂವಿಧಾನವು ದೇಶದ ಎಲ್ಲಾ ಪ್ರಜೆಗಳಿಗೂ ಸಮಾನತೆಯನ್ನು ನೀಡುತ್ತದೆ. ಆದರೆ ನಮ್ಮನ್ನಾಳುತ್ತಿರುವವರು ಸಂವಿಧಾನದ ಬಗ್ಗೆ ಮಾನ್ಯತೆಯನ್ನೇ ಹೊಂದಿಲ್ಲದವರಾಗಿದ್ದಾರೆ. ಇದು ನಾವಿಂದು ಎದುರಿಸುತ್ತಿರುವ ಬಹುದೊಡ್ಡ ಆತಂಕ. ರಾಷ್ಟ್ರೀಯತೆ ಅಥವಾ ರಾಷ್ಟ್ರಭಕ್ತಿಯನ್ನು ಯಾವ ನೆಲೆಯಲ್ಲಿ ಇಂದು ಪರಿಗಣಿಸಲಾಗುತ್ತಿದೆಯೆಂದರೆ, ಬಡವರ ಹಕ್ಕು, ನಿರುದ್ಯೋಗ ಸಮಸ್ಯೆ, ಆಡಳಿತ ವ್ಯವಸ್ಥೆಯಲ್ಲಿನ ಲೋಪಗಳ ವಿರುದ್ಧ ಧ್ವನಿ ಎತ್ತಿದಾಗ ದೇಶ ದ್ರೋಹದ ಪಟ್ಟ ನೀಡಲಾಗುತ್ತದೆ. ಇದಕ್ಕೆ ವಿರುದ್ಧವಾಗಿ ವ್ಯವಸ್ಥಿತವಾಗಿ ಧರ್ಮ, ರಾಜಕೀಯದ ಹೆಸರಿನಲ್ಲಿ ದ್ವೇಷವನ್ನು ಬಿತ್ತಲಾಗುತ್ತದೆ. ಇದಕ್ಕೆ ಪ್ರತಿಯಾಗಿ ಸಂವಿಧಾನದ ಆಶಯ, ವಿಚಾರಧಾರೆಗಳನ್ನು ಪ್ರಚಾರ ಪಡಿಸಬೇಕು ಎಂದು ತೀಸ್ತಾ ಸೆಟಲ್ವಾಡ್ ಹೇಳಿದರು.
2015-17ರ ಅವಧಿಯಲ್ಲಿ ದೇಶದಲ್ಲಿ ಯುಜಿಸಿಯಡಿ 25,000 ವಿದ್ಯಾರ್ಥಿ ವೇತನವನ್ನು ಕಡಿತ ಮಾಡಲಾಗಿದೆ. ಇದರಿಂದಾಗಿ ತಳ ಸಮುದಾಯದ ಯುವ ಜನಾಂಗದ ಪಿಎಚ್ಡಿ, ಎಂಫಿಲ್ನಂತಹ ಶಿಕ್ಷಣದ ಕನಸು ನುಚ್ಚು ನೂರಾಗುತ್ತಿದೆ. ಈ ವ್ಯವಸ್ಥೆಯ ವಿರುದ್ಧ ಧ್ವನಿ ಎತ್ತಿದರೆ ದೇಶದ್ರೋಹದ ಪಟ್ಟ ನೀಡಲಾಗುತ್ತದೆ. ಸ್ವಾತಂತ್ರ್ಯ ಬಂದು ಸುಮಾರು 60 ವರ್ಷಗಳ ಬಳಿಕ ನಮ್ಮಲ್ಲಿ ನರೇಗಾ ಯೋಜನೆ ಜಾರಿಗೆ ಬಂತು. ಅರಣ್ಯ ಆದಿವಾಸಿ ಕಾಯಿದೆ, ಆಹಾರದ ಹಕ್ಕಿನ ಕಾಯಿದೆ, ಭೂಸ್ವಾಧೀನ ಪರಿಹಾರ ಕಾಯ್ದೆಗಳು ರಚನೆಗೊಂಡವು. ಇದರ ನಡುವೆಯ ಏರ್ ಇಂಡಿಯಾ, ಭಾರತೀಯ ರೈಲ್ವೇ ಮೊದಲಾದ ಸಾರ್ವಜನಿಕ ವಲಯಗಳನ್ನು ಖಾಸಗಿ ನೀಡುವ ಹುನ್ನಾರವೂ ಸದ್ದಿಲ್ಲದೆ ನಡೆಯುತ್ತಿದೆ. ಕಳೆದ ಮೂರೂವರೆ ವರ್ಷಗಳ ಅವಧಿಯಲ್ಲಿ 50 ವರ್ಷಗಳಷ್ಟು ಹಿಂದಕ್ಕೆ ಸಾಗಿದಂದಾಗಿದೆ. ಹಾಗೆಂದು ಆಡಳಿತದ ಅವ್ಯವಸ್ಥೆಯ ವಿರುದ್ಧ ಧ್ವನಿ ಎತ್ತಲಾಗುತ್ತಿಲ್ಲ ಎಂದರ್ಥವಲ್ಲ. ನಮ್ಮ ಭೂಮಿ, ಆರ್ಟಿಐ, ಆಹಾರ, ಅರಣ್ಯ ಹಕ್ಕು ಮೊದಲಾದವುಗಳಿಗಾಗಿ ತಮ್ಮದೇ ನೆಲೆಯಲ್ಲಿ ಪ್ರತ್ಯೇಕ ಹೋರಾಟಗಳು ನಡೆಯುತ್ತಿವೆ. ಈ ಹೋರಾಟಗಳು ಸಂಘಟಿತವಾಗಿ ರಾಷ್ಟ್ರೀಯ ನೆಲೆಯಲ್ಲಿ ಆಗಬೇಕು. ನಮ್ಮ ಚುನಾವಣೆಗಳು ದೇವರು, ಧರ್ಮದ, ಜಾತಿಯ ಹೆಸರಿನಲ್ಲಿ ನಡೆಯದೆ ಹಸಿವು, ಬಡತನ, ನಿರುದ್ಯೋಗ ಸಮಸ್ಯೆಗಳತ್ತ ಬೆಳಕು ಚೆಲ್ಲಬೇಕಾಗಿದೆ. ದ್ವೇಷದ ಮಾತುಗಳಿಗೆ ಪ್ರತಿಯಾಗಿ ಶಾಂತಿಯ ಭಾಷೆಯನ್ನು ನಮ್ಮದಾಗಿಸಿಕೊಂಡು ಧ್ವೇಷವನ್ನು ನಾವೆಂದೂ ಬಯಸುವುದಿಲ್ಲ ಎಂಬ ದೃಢತೆಯೊಂದಿಗೆ ಮುನ್ನಡೆಯಬೇಕು ಎಂದು ಅವರು ಹೇಳಿದರು.
ತಮ್ಮ ಶಾಂತಿಯ ಮಾತಿನ ಬಳಿಕ ಸಂವಾದ ವೇಳೆ ಸಭಿಕರೊಬ್ಬರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ತೀಸ್ತಾ, ಇಂದು ದೇಶದ ಬಹುತೇಕ ಟಿವಿ ಚಾನೆಲ್ಗಳು ವಾಣಿಜ್ಯೀಕರಣಗೊಂಡಿರುವುದು ಮಾತ್ರವಲ್ಲದೆ, ರಾಜಕಾರಣಿಗಳ ಕಪಿಮುಷ್ಠಿಯಲ್ಲಿರುವುದರಿಂದ ನೈಜ ವಿಷಯಗಳು ಸುದ್ದಿಗಳಾಗುತ್ತಿಲ್ಲ ಎಂದರು. ದೇಶದ 545 ಲೋಕಸಭಾ ಸದಸ್ಯರಲ್ಲಿ 283 ಮಂದಿ ಕೋಟ್ಯಾಧಿಪತಿಗಳು. ಇವರಲ್ಲಿ ಮೂರರಲ್ಲಿ ಎರಡು ಭಾಗದಷ್ಟು ಮಂದಿ ಟೆಲಿಕಾಂ, ಗಣಿ ಹಾಗೂ ಇತರ ಉದ್ಯಮಗಳಲ್ಲಿ ತೊಡಗಿರುವವರು. ಸುಳ್ಳು ಸುದ್ದಿಗಳನ್ನು ವ್ಯವಸ್ಥಿತವಾಗಿ ಬಿತ್ತರಿಸುವ ಒಂದು ಶಕ್ತಿಯೇ ಈ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಈ ವಿಷಯವನ್ನು ಪ್ರೆಸ್ ಕೌನ್ಸಿಲ್ ಎದುರು ತರಬೇಕಾಗಿದೆ. ಸಮರ್ಪಕ ದಾಖಲೆಗಳೊಂದಿಗೆ ದೂರು ಸಲ್ಲಿಸುವ ಮೂಲಕ ಧ್ವನಿ ಎತ್ತುವ ಅಗತ್ಯವಿದೆ.
ಸ್ನಾತಕೋತ್ತರ ಪದವೀಧರೆಯೊಬ್ಬರು ಮಾತನಾಡುತ್ತಾ, ತಮ್ಮ ಅಧ್ಯಯನದ ನಿಮಿತ್ತ ಅನ್ಯ ಧರ್ಮದ ತನ್ನ ಸಹಪಾಠಿ ಜತೆ ನಗರದ ಬೀಚ್ ಬಳಿ ಪ್ರಯಾಣಿಸುತ್ತಿದ್ದಾಗ ಆದ ಘಟನೆಯೊಂದನ್ನು ಪ್ರಸ್ತಾಪಿಸಿದರು. ಬೀಚ್ಗೆ ಬಂದಿದ್ದ ಹೈಸ್ಕೂಲ್ ವಿದ್ಯಾರ್ಥಿ- ವಿದ್ಯಾರ್ಥಿನಿಯರ ಜತೆ ಸ್ಥಳೀಯ ಪೊಲೀಸರು ಅನುಚಿತವಾಗಿ ವರ್ತಿಸುತ್ತಿದ್ದನ್ನು ಕಂಡು ಭಯದಲ್ಲಿದ್ದ ವಿದ್ಯಾರ್ಥಿನಿಯರಿಗೆ ಧೈರ್ಯ ತುಂಬಿ ರಕ್ಷಣೆ ನೀಡಲು ಮುಂದಾದ ತನ್ನನ್ನೇ ಠಾಣೆಗೆ ಕರೆಯಿಸಿ, ತನ್ನ ಪೋಷಕರನ್ನೂ ಕರೆಯಿಸಿ ತಾನು ಬೀಚ್ನಲ್ಲಿ ಏನು ಮಾಡುತ್ತಿದ್ದೆ ಎಂದು ತನ್ನನ್ನೇ ಗುರಿಯಾಗಿಸಿದ ಸನ್ನಿವೇಶಗಳನ್ನು ತಿಳಿಸಿದರು.
ಇಂತಹ ಪ್ರಕರಣದಲ್ಲಿ ನಿರ್ದಿಷ್ಟ ಪೊಲೀಸ್ ಸಿಬ್ಬಂದಿಗಳ ವಿರುದ್ಧ ಹಿರಿಯ ಅಧಿಕಾರಿಗಳಿಗೆ ದೂರು ನೀಡಿ ಸೂಕ್ತ ಕ್ರಮ ಆಗಬೇಕು. ಇಂತಹ ಪ್ರಕರಣಗಳು ನಡೆಯಬಾರದು. ರಕ್ಷಣೆ ಒದಗಿಸಬೇಕಾದ ವ್ಯವಸ್ಥೆ ಭಯದ ವಾತಾವರಣ ಸೃಷ್ಟಿಸುವಂತಾಗಬಾರದು ಎಂದು ತೀಸ್ತಾ ಪ್ರತಿಕ್ರಿಯಿಸಿದರು.
ವಿದ್ಯಾ ದಿನಕರ್ ಕಾರ್ಯಕ್ರಮ ಸಂಯೋಜಿಸಿದರು.
ಪತ್ರಕರ್ತೆ ಗೌರಿಯನ್ನು ನೆನಪಿಸಿಕೊಂಡ ತೀಸ್ತಾ
ಕಾರ್ಯಕ್ರಮದಲ್ಲಿ ಶಾಂತಿಯ ಮಾತುಗಳನ್ನು ಆರಂಭಿಸುವ ಮೊದಲು ತೀಸ್ತಾ ಸೆಟಲ್ವಾಡ್ ಅವರು ಪತ್ರಕರ್ತೆ ಗೌರಿ ಲಂಕೇಶ್ರನ್ನು ನೆನಪಿಸಿಕೊಳ್ಳುತ್ತಾ ಒಂದು ನಿಮಿಷ ಮೌನ ಆಚರಿಸುವ ಮೂಲಕ ಗೌರವ ಸಲ್ಲಿಸಿದರು.