ಕಾರ್ಮಿಕ ಮುಖಂಡ ಸುದತ್ತ ಜೈನ್ ಆರೋಗ್ಯದಲ್ಲಿ ಏರುಪೇರು : ಆಸ್ಪತ್ರೆಗೆ ದಾಖಲು
ಅರಣ್ಯ ಅಧಿಕಾರಿಗಳ ದೌರ್ಜನ್ಯ ವಿರುದ್ಧ ಉಪವಾಸ ಸತ್ಯಾಗ್ರಹ 7ನೇ ದಿನಕ್ಕೆ
ಮೂಡುಬಿದಿರೆ, ಅ.25: ಅರಣ್ಯ ಅಧಿಕಾರಿಗಳ ದೌರ್ಜನ್ಯ ವಿರುದ್ಧ ಕಳೆದ 14 ದಿನಗಳಿಂದ ಧರಣಿ ಕುಳಿತಿರುವ ಕಾರ್ಮಿಕ ಮುಖಂಡ ಸುದತ್ತ ಜೈನ್ 7 ದಿನಗಳಿಂದ ನಡೆಸುತ್ತಿರುವ ಉಪವಾಸ ಸತ್ಯಾಗ್ರಹದಿಂದಾಗಿ ಆರೋಗ್ಯದಲ್ಲಿ ಏರುಪೇರು ಕಾಣಿಸಿಕೊಂಡ ಹಿನ್ನಲೆಯಲ್ಲಿ ಬುಧವಾರ ಅವರನ್ನು ಮೂಡುಬಿದಿರೆ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಯಿತು.
ಮೂಡುಬಿದಿರೆಯ ವೈದ್ಯಾಧಿಕಾರಿ ಡಾ ಶಶಿಕಲಾರ ಸೂಚನೆ ಮೇರೆಗೆ ಸುದತ್ತ ಅವರನ್ನು ಆಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಒಯ್ಯಲಾಯಿತು. ನಂತರ ಅಲ್ಲಿ ವೈದ್ಯರು ಚಿಕಿತ್ಸೆ ನೀಡುತ್ತಿದ್ದು ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ. ಸುದತ್ತ ಜೈನ್ ದೇಹದಲ್ಲಿ ಸಕ್ಕರೆ ಪ್ರಮಾಣ 50ಕ್ಕೆ ಇಳಿಕೆಯಾದ ಪರಿಣಾಮ ವೈದ್ಯರು ಚಿಕಿತ್ಸೆ ಪಡೆಯುವ ಅನಿವಾರ್ಯತೆ ಬಗ್ಗೆ ತಿಳಿಸಿ ಹೇಳಿದ್ದರಿಂದ ಉಪವಾಸ ನಿರತ ಗ್ಲೂಕೋಸ್ ಪಡೆಯುವುದಕ್ಕೆ ಒಪ್ಪಿಕೊಂಡಿದ್ದರೂ ಉಪವಾಸ ಸತ್ಯಾಗ್ರಹವನ್ನು ಅವರು ಆಸ್ಪತ್ರೆಯಲ್ಲೂ ಮುಂದುವರಿಸಿದ್ದಾರೆ.
ಶಿರ್ತಾಡಿಯ ಸುದರ್ಶನ ಶೇರಿಗಾರ್ ಎಂಬವರ ಮೇಲೆ ವೇಣೂರು ವಲಯ ಅರಣ್ಯಾಧಿಕಾರಿ ಕಚೇರಿಯಲ್ಲಿ ದೌರ್ಜನ್ಯ ನಡೆಸಲಾಗಿದೆ ಎಂದು ಆರೋಪಿಸಿ ಸುದತ್ತ ಜೈನ್ 14 ದಿನಗಳ ಹಿಂದೆ ಧರಣಿ ಆರಂಭಿಸಿದ್ದರು.
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಾ ವಾರ್ತಾಭಾರತಿ ಜೊತೆ ಮಾತನಾಡಿದ ಸುದತ್ತ ಜೈನ್ ಬ್ರಿಟಿಷ್ ಆಡಳಿತ ವ್ಯವಸ್ಥೆಯಲ್ಲೂ ಉಪವಾಸ ಸತ್ಯಾಗ್ರಹಕ್ಕೆ ಬೆಲೆಯಿತ್ತು. ದೇಶ ಸ್ವಾತಂತ್ರ್ಯ ಪಡೆದುಕೊಂಡದ್ದೇ ಉಪವಾಸ ಸತ್ಯಾಗ್ರಹಗಳಿಂದ. ಆದರೆ ಇಂದಿನ ಜಿಲ್ಲಾಡಳಿತ ಹಾಗೂ ಅರಣ್ಯ ಇಲಾಖೆ ಹಿರಿಯ ಅಧಿಕಾರಿಗಳು ಉಪವಾಸ ಸತ್ಯಾಗ್ರಹಕ್ಕೆ ಬೆಲೆ ನೀಡದಿರುವುದು ವಿಪರ್ಯಾಸ. ನ್ಯಾಯಾಲಯಗಳ ಆದೇಶವನ್ನು ಧಿಕ್ಕರಿಸಿ ಮೂಡುಬಿದಿರೆ ಆಸುಪಾಸು ಅವ್ಯಾಹತವಾಗಿ ಮರಕಳ್ಳತನ ಹಾಗೂ ಸಾಗಾಟ ನಿರಂತರ ನಡೆಯುತ್ತಿದೆ. ಇದಕ್ಕೆ ಅರಣ್ಯ ಇಲಾಖೆಯ ಕೆಲ ಅಧಿಕಾರಿಗಳೇ ಬೆಂಗಾವಲಾಗಿದ್ದಾರೆ. ದೊಡ್ಡ ದೊಡ್ಡ ಮರದ ಉದ್ಯಮಿಗಳಿಗೆ ರತ್ನಗಂಬಳಿ ಹಾಸುವ ಅರಣ್ಯ ಅಧಿಕಾರಿಗಳು ತಮ್ಮ ಕೇಸುಗಳ ಸಂಖ್ಯೆಯನ್ನು ಪ್ರದರ್ಶಿಸುವುದಕ್ಕಾಗಿ ಕೆಲ ಅಮಾಯಕರನ್ನು ಟಾರ್ಗೆಟ್ ಮಾಡುತ್ತಿದ್ದಾರೆಎಂದರು.