ಕೊರಗ ಸಮುದಾಯದ ಯುವತಿಗೆ ಅನ್ಯಾಯ : ಪಂಚಾಯತ್ ವಿರುದ್ಧ ಪ್ರತಿಭಟನೆ
ಮೂಡುಬಿದಿರೆ, ಅ.25: ಕೊರಗ ಸಮುದಾಯದ ಮಹಿಳೆ ಸುನೀತಾರನ್ನು ಅಟೆಂಡರ್ ಹುದ್ದೆಗೆ ನೇಮಿಸಿಕೊಂಡ ಪಂಚಾಯತ್ ಅವರನ್ನು ಒಂದೂವರೆ ತಿಂಗಳು ಸಂಬಳ ಕೊಡದೆ ದುಡಿಸಿ ನಂತರ ನೇಮಕಾತಿಗೆ ಜಿಲ್ಲಾ ಪಂಚಾಯತ್ನಿಂದ ಅನುಮೋದನೆ ಸಿಕ್ಕಿಲ್ಲ ಎಂಬ ಸಬೂಬು ನೀಡಿ ಕೆಲಸದಿಂದ ವಜಾಗೊಳಿಸಲಾಗಿದೆ. ಇದು ಅನ್ಯಾಯ. ಒಂದೂವರೆ ತಿಂಗಳ ದುಡಿಮೆಗೆ ಸಂಬಳ ಕೊಡಬೇಕು, ಸಂಬಳ ಕೊಡದೆ ದುಡಿಸಿದ ಬೆಳುವಾಯಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕು ಎಂದು ಕೊರಗ ಸುದಾಯದ ಮುಖಂಡ ಬಾಬು ಪಾಂಗಾಳ ಆಗ್ರಹಿಸಿದರು.
ಕೊರಗ ಸಮುದಾಯದ ಯುವತಿಯನ್ನು ಕೆಲಸದಿಂದ ವಜಾಗೊಳಿಸಿದ್ದಾರೆಂದು ಆರೋಪಿಸಿ ಬೆಳುವಾಯಿ ಗ್ರಾಮ ಪಂಚಾಯತ್ ವಿರುದ್ಧ ಮೂಡುಬಿದಿರೆ ಕೊರಗರ ಅಭಿವೃದ್ಧಿ ಸಂಘದ ವತಿಯಿಂದ ಬುಧವಾರ ಆರಂಭಗೊಂಡ ಆಹೋರಾತ್ರಿ ಪ್ರತಿಭಟನೆಯನ್ನುದ್ದೇಶಿಸಿ ಅವರು ಮಾತನಾಡಿದರು.
ಪ್ರತಿಭಟನಕಾರರೊಂದಿಗೆ ಮಾತುಕತೆ ನಡೆಸಿದ ಬೆಳುವಾಯಿ ಗ್ರಾಮ ಪಂಚಾಯತ್ ಅಧ್ಯಕ್ಷ ಭಾಸ್ಕರ ಆಚಾರ್ಯ ಕಾನೂನಿನ ತೊಡಕಿನಿಂದಾಗಿ ಸುನೀತಾರನ್ನು ಅಟೆಂಡರ್ ಹುದ್ದೆಗೆ ನೇಮಕಗೊಳಿಸಲು ಸಾಧ್ಯವಾಗಲಿಲ್ಲ.ಅವರು ಒಂದೂವರೆ ತಿಂಗಳು ಪಂಚಾಯತ್ನಲ್ಲಿ ಕೆಲಸ ಮಾಡಿದಕ್ಕೆ ಗೌರವ ಸಂಭಾವನೆ ನೀಡುತ್ತೇವೆ. ಅದಕ್ಕಾಗಿ 15 ದಿನಗಳ ಕಾಲಾವಕಾಶ ನೀಡುವಂತೆ ಕೇಳಿಕೊಂಡರು.
ಜಿಲ್ಲಾ ಪಂಚಾಯತ್ ಸಿಇಒ ನಮ್ಮ ಬೇಡಿಕೆಗೆ ಸ್ಪಂದಿಸಲಿಲ್ಲ. ಅವರು ಇಲ್ಲಿಗೆ ಬಂದು ನಮ್ಮ ಮನವಿ ಸ್ವೀಕರಿಸಬೇಕೆಂದು ಆಗ್ರಹಿಸಿದ ಅವರು ಬೇಡಿಕೆಗೆ ಸ್ಪಂದಿಸದಿದ್ದರೆ ಆಹೋರಾತ್ರಿ ಪ್ರತಿಭಟನೆಯನ್ನು ಮುಂದುವರೆಸಲಾಗುವುದು ಎಂದು ಪ್ರತಿಭಟನಾನಿರತರು ಎಚ್ಚರಿಸಿದರು.
ಕೊರಗ ಸಮುದಾಯದ ಮುಖಂಡರಾದ ಸಂಜೀವ, ಗೌತಮ್, ದಲಿತ ಸಂಘರ್ಷ ಸಮಿತಿ ಅಧ್ಯಕ್ಷ ಗೋಪಾಲ, ಸದಸ್ಯರಾದ ಶಶಿಕಲಾ ಮತ್ತಿತರರು ಭಾಗವಹಿಸಿದರು.