ದ.ಕ. ಜಿ.ಪಂ. ಸಾಮಾನ್ಯ ಸಭೆ ಮುಂದೂಡಿಕೆ
ವಿಪಕ್ಷ ಸದಸ್ಯರ ಬಹಿಷ್ಕಾರ !
ಮಂಗಳೂರು, ಅ.26: ವಿರೋಧ ಪಕ್ಷದ ಸದಸ್ಯರ ಬಹಿಷ್ಕಾರದ ಕಾರಣ ಕೋರಂ ಇಲ್ಲದೆ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ನ ಇತಿಹಾಸದಲ್ಲೇ ಪ್ರಥಮ ಬಾರಿಗೆ ಸಾಮಾನ್ಯ ಸಭೆಯನ್ನು ಮುಂದೂಡಿದ ಪ್ರಸಂಗ ಇಂದು ನಡೆಯಿತು.
ನೇತ್ರಾವತಿ ಸಭಾಂಗಣದಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಅವರ ಅಧ್ಯಕ್ಷತೆಯಲ್ಲಿ ಅಕ್ಟೋಬರ್ 16ರಂದು ನಡೆದ ಸಾಮಾನ್ಯ ಸಭೆಯ ಮುಂದುವರಿದ ಸಭೆ ಇಂದು ನಿಗದಿಪಡಿಸಲಾಗಿತ್ತು. ಆದರೆ ಪ್ರತಿಪಕ್ಷ ಕಾಂಗ್ರೆಸ್ ಸದಸ್ಯರು ಬಹಿಷ್ಕರಿಸಿ ಗೈರು ಹಾಜರಾಗಿದ್ದರು. ನಿಗದಿತ 11 ಗಂಟೆಗೆ ಸಭೆ ಆರಂಭಗೊಂಡು, ಅರ್ಧ ತಾಸು ಕಳೆದರೂ ವಿರೋಧ ಪಕ್ಷದ ಸದಸ್ಯರಾರೂ ಸಭೆಗೆ ಆಗಮಿಸಿದ ಕಾರಣ ಅಧ್ಯಕ್ಷರು ಸಭೆಯನ್ನು ಮುಂದೂಡಿದರು.
ಹಿಂದಿನ ಸಭೆಯಲ್ಲಿ ಐವರ್ನಾಡು ಗ್ರಾಮ ಪಂಚಾಯತ್ ಪಿಡಿಒ ಅವರನ್ನು ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷರ ಒತ್ತಡಕ್ಕೆ ಮಣಿದು, ಜಿಲ್ಲಾ ಉಸ್ತುವಾರಿ ಸಚಿವರ ಸೂಚನೆಯಂತೆ ವರ್ಗಾಯಿಸಲಾಗಿದೆ ಎಂದು ಹೇಳಿ, ಬಿಜೆಪಿ ಸದಸ್ಯರು ಗದ್ದಲ ನಡೆಸಿದ್ದರು.
ಸಭೆಯಲ್ಲಿ ಉಸ್ತುವಾರಿ ಸಚಿವರನ್ನು ಗುರಿ ಮಾಡಲಾಗುತ್ತದೆ ಎಂದು ಕಾಂಗ್ರೆಸಿಗರು ಪ್ರತಿಭಟಿಸಿದ್ದರು. ಎರಡೂ ಕಡೆಯಿಂದ ವಾಗ್ವಾದ ಮುಂದುವರಿಯುತ್ತಿದ್ದಂತೆ, ‘ಇಲ್ಲಿ ಮರಳು ಸಮಸ್ಯೆ ತಲೆದೋರಿದೆ, ನಿಮ್ಮ ಉಸ್ತುವಾರಿ ಸಚಿವರು ಎಲ್ಲಿದ್ದಾರೆ’ ಎಂಬಂತೆ ಅಧ್ಯಕ್ಷರು ಹೇಳಿದ್ದು, ಕಾಂಗ್ರೆಸ್ ಸದಸ್ಯರ ಆಕ್ರೋಶಕ್ಕೆ ಕಾರಣವಾಗಿ, ಸದನದ ಬಾವಿಗಿಳಿದು, ಪ್ರತಿಭಟಿಸಿ, ಅಧ್ಯಕ್ಷರು ಕ್ಷಮೆಯಾಚಿಸುವಂತೆ ಪಟ್ಟು ಹಿಡಿದ್ದರು.
ಪ್ರತಿಭಟನೆ ನಡುವೆ ಪಿಡಿಒ ವರ್ಗಾವಣೆ ಆದೇಶ ರದ್ದುಪಡಿಸುವಂತೆ ನಿರ್ಣಯ ಕೈಗೊಳ್ಳಲಾಗಿತ್ತು. ಗದ್ದಲ ಹೆಚ್ಚಿ, ಸಭೆ ಸಂಜೆಯೂ ಮುಂದುವರಿದು, ನಂತರ ಮುಂದೂಡಲಾಗಿತ್ತು.
ಒಟ್ಟು 36 ಸದಸ್ಯ ಬಲದ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ನಲ್ಲಿ ಸಂಸದರು, ಶಾಸಕರು, ತಾಲೂಕು ಪಂಚಾಯತ್ ಸದಸ್ಯರು ಸೇರಿದಂತೆ ಒಟ್ಟು 52 ಮಂದಿ ಸದಸ್ಯರಿದ್ದಾರೆ. ಸಭೆ ನಡೆಸಲು 26 ಮಂದಿಯ ಕೋರಂ ಇರಬೇಕು. ಆದರೆ, ಬಿಜೆಪಿಯ 21 ಸದಸ್ಯರು ಮತ್ತು ಒಬ್ಬ ತಾಲೂಕು ಪಂ. ಅಧ್ಯಕ್ಷರು ಮಾತ್ರ ಹಾಜರಾಗಿದ್ದರು. ಕೋರಂ ಇಲ್ಲದ ಹಿನ್ನೆಲೆಯಲ್ಲಿ ನಿಯಮಾವಳಿಯಂತೆ, ಅರ್ಧ ಗಂಟೆ ಕಾದು ಸಭೆ ಮುಂದೂಡಲಾಯಿತು.
ನಾನೇಕೆ ಕ್ಷಮೆ ಕೇಳುವುದು?
ಕಳೆದ ಸಭೆಯಲ್ಲಿ ಪಿಡಿಒ ವರ್ಗಾವಣೆ ಕುರಿತ ಚರ್ಚೆ ವೇಳೆ ನಾನು, ಉಸ್ತುವಾರಿ ಸಚಿವರಿಂದ ಮರಳು ಸಮಸ್ಯೆ ಪರಿಹಾರ ಯಾಕೆ ಸಾಧ್ಯವಿಲ್ಲ ಎಂದಷ್ಟೇ ಪ್ರಶ್ನಿಸಿದ್ದೆ. ಅದನ್ನೇ ಹಿಡಿದು ಬಾವಿಗೆ ಇಳಿದು ಪ್ರತಿಭಟಿಸಿದರು. ನಾನು ತಪ್ಪು ಮಾಡದೆ ಕ್ಷಮೆ ಏಕೆ ಕೇಳಲಿ? ಜಿಲ್ಲೆಯಲ್ಲಿ ಹಲವು ಸಮಸ್ಯೆಗಳು ಇರುವಾಗ, ಅದನ್ನು ಬಿಟ್ಟು ಸಣ್ಣ ವಿಷಯಕ್ಕೆ ಬಹಿಷ್ಕಾರ ಹಾಕುವುದಕ್ಕೆ ಅರ್ಥವಿಲ್ಲ ಎಂದು ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.
ಚರ್ಚಿಸುವ ಸೌಜನ್ಯ ಇರಲಿ
ನಾವೆಲ್ಲಾ ಸಮಸ್ಯೆಗಳ ಬಗ್ಗೆ ಮಾತನಾಡಲೆಂದೇ ಬಂದವರು. ಪಿಡಿಒ ವರ್ಗಾವಣೆ ಹಿಡಿದು, ಉಸ್ತುವಾರಿ ಸಚಿವರನ್ನು ಟಾರ್ಗೆಟ್ ಮಾಡಿ ಗಂಟೆಗಟ್ಟಲೆ ಚರ್ಚಿಸುವುದಕ್ಕೂ ಅರ್ಥವಿಲ್ಲ. ಇವರ ಸಚಿವರ ಕಾಲದಲ್ಲೂ ಮರಳು ಸಮಸ್ಯೆ ಇತ್ತು. ಅದನ್ನು ನಮ್ಮ ಈಗಿನ ಸಚಿವರ ತಲೆಗೆ ಕಟ್ಟಲು ಹೊರಟಿದ್ದಾರೆ. ಅಧ್ಯಕ್ಷರಿಗೆ ಸಭೆ ನಡೆಸುವ ಅನುಭವವೂ ಇಲ್ಲ, ಅವರದೇ ಪಕ್ಷದ ಹಿರಿಯರಿಂದ ತಿಳಿದುಕೊಳ್ಳುವ ಕಳಕಳಿಯೂ ಇಲ್ಲ. ನಮ್ಮಲ್ಲಿ ಬಂದು ಕ್ಷಮೆ ಕೇಳಿ ಎನ್ನುತ್ತಿಲ್ಲ, ನಾವು ಇಲ್ಲೇ ಇದ್ದರೂ ಸಭೆಗೆ ಬನ್ನಿ ಎನ್ನುವ ಕನಿಷ್ಠ ಸೌಜನ್ಯ ತೋರಿಸಿಲ್ಲ ಎಂದು ಜಿಲ್ಲಾ ಪಂಚಾಯತ್ನ ಹಿರಿಯ ಸದಸ್ಯ ಎಂ.ಎಸ್.ಮುಹಮ್ಮದ್ ಹೇಳಿದರು.