ನ.5-6: ರಾಜ್ಯ ಮಟ್ಟದ ಮುಕ್ತ ರ್ಯಾಪಿಡ್ ಚೆಸ್ ಪಂದ್ಯಾಟ
ಮಂಗಳೂರು, ಅ. 26: ಕಿಂಗ್ಸ್ ಚೆಸ್ ಅಕಾಡಮಿ ಹಾಗೂ ಯುನೈಟೆಡ್ ಕರ್ನಾಟಕ ಚೆಸ್ ಅಸೋಸಿಯೇಶನ್ನ ಸಹಯೋಗದಲ್ಲಿ ‘ಕರಾವಳಿ ಟ್ರೋಫಿ’ ರಾಜ್ಯ ಮಟ್ಟದ ಮುಕ್ತ ರ್ಯಾಪಿಡ್ ಚೆಸ್ ಪಂದ್ಯಾಟವು ನ. 5 ಮತ್ತು 6ರಂದು ಉರ್ವ ಕೆನರಾ ಪ್ರೌಢಶಾಲೆಯಲ್ಲಿ ನಡೆಯಲಿದೆ ಎಂದು ಕಿಂಗ್ಸ್ ಚೆಸ್ ಅಕಾಡಮಿಯ ಅಧ್ಯಕ್ಷ ಪ್ರವೀಣ್ ಕಾಮತ್ ತಿಳಿಸಿದ್ದಾರೆ.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸುಮಾರು 400ಕ್ಕೂ ಅಧಿಕ ಮಂದಿ ಕ್ರೀಡಾಪಟುಗಳು ಇದರಲ್ಲಿ ಭಾಗವಹಿಸಲಿದ್ದಾರೆ. ಒಟ್ಟು 77,777 ರೂ. ನಗದು ಹಾಗೂ 45 ಟ್ರೋಫಿ ಬಹುಮಾನ ನೀಡಲಾಗುವುದು ಎಂದರು.
ಅಂತಾರಾಷ್ಟ್ರೀಯ ಚೆಸ್ ಮಾಸ್ಟರ್ ವಿಯಾನಿ ಆ್ಯಂಟನಿ ಡಿಕುನ್ಹ, ಅಂತಾರಾಷ್ಟ್ರೀಯ ಚೆಸ್ ಪಟುಗಳಾದ ರವಿ ಗೋಪಾಲ್ ಹೆಗ್ಡೆ, ನಿಶಾನಿ ಮೊದಲಾದವರು ಭಾಗವಹಿಸಲಿದ್ದಾರೆ. ಆಸಕ್ತರು ನ. 2ರೊಳಗಾಗಿ ಹೆಸರು ನೋಂದಾಯಿಸಬೇಕು. ಕ್ರೀಡಾಪಟುಗಳು ನ. 5ರ ಬೆಳಗ್ಗೆ 8.30ರ ಮುಂಚಿತವಾಗಿ ವರದಿ ಸಲ್ಲಿಸಬೇಕು ಎಂದು ಪ್ರವೀಣ್ ಕಾಮತ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಅಕಾಡಮಿಯ ಸಲಹೆಗಾರ ಎಂ. ಆರ್. ವಾಸುದೇವ, ಕಾನೂನು ಸಲಹೆಗಾರ ನಾರಾಯಣ್, ಲಿಡಿಯಾ ಡಿಕುನ್ಹಾ ಉಪಸ್ಥಿತರಿದ್ದರು.