ಅ. 27: ಮಠಕ್ಕೆ ಮರಳುವ ಪೇಜಾವರ ಶ್ರೀ
ಉಡುಪಿ, ಅ.26: ಹರ್ನಿಯಾ ಆಪರೇಷನ್ ನಂತರದ ಚಿಕ್ಕ ಶಸ್ತ್ರಚಿಕಿತ್ಸೆ ಹಾಗೂ ಆರೋಗ್ಯ ತಪಾಸಣೆಗಾಗಿ ಬುಧವಾರ ಸಂಜೆ ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲಾಗಿದ್ದ ಪರ್ಯಾಯ ಪೇಜಾವರ ಮಠದ ಶ್ರೀವಿಶ್ವೇಶತೀರ್ಥ ಸ್ವಾಮೀಜಿ ಅವರು ರಾತ್ರಿ ನಡೆದ ಹರ್ನಿಯಾ ಫೆಮರಾಲ್ ಶಸ್ತ್ರಚಿಕಿತ್ಸೆಯಿಂದ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದು, ಅ.27ರಂದು ಬೆಳಗ್ಗೆ ಶ್ರೀಕೃಷ್ಣ ಮಠಕ್ಕೆ ಮರಳಲಿದ್ದಾರೆ ಎಂದು ಮಠದ ಮೂಲಗಳು ತಿಳಿಸಿವೆ.
ಪೇಜಾವರ ಶ್ರೀಗಳು ಕಳೆದ ಆ.20ರಂದು ಕೆಎಂಸಿಯಲ್ಲಿ ಹರ್ನಿಯಾ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಅನಂತರ ಅವರಿಗೆ ಆಗಾಗ ಹೊಟ್ಟೆ ನೋವು ಬರುತಿದ್ದು, ಇದಕ್ಕಾಗಿ ಸ್ಕಾನಿಂಗ್ ಹಾಗೂ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳ ಬೇಕಿತ್ತು. ಬುಧವಾರ ಸಂಜೆ ಮತ್ತೆ ನೋವು ಕಾಣಿಸಿಕೊಂಡ ಕಾರಣ, ವೈದ್ಯರ ಸಲಹೆಯಂತೆ ಮತ್ತೆ ಆಸ್ಪತ್ರೆಗೆ ತೆರಳಲು ನಿರ್ಧರಿಸಿದ್ದರು. ಅದರಂತೆ ದಿನದ ಪೂಜಾ ಕಾರ್ಯಗಳನ್ನು ಮುಗಿಸಿ ಸಂಜೆ ಆರು ಗಂಟೆ ಸುಮಾರಿಗೆ ಆಸ್ಪತ್ರೆಗೆ ದಾಖಲಾಗಿದ್ದರು.
ಪೇಜಾವರಶ್ರೀಗಳನ್ನು ಪರೀಕ್ಷಿಸಿದ ವೈದ್ಯರು ತಕ್ಷಣವೇ ಪುಟ್ಟದಾದ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುವಂತೆ ಸೂಚಿಸಿದ್ದು, ಅವರ ಒಪ್ಪಿ ಆಪರೇಷನ್ ಮಾಡಿಸಿ ಕೊಂಡರು. ಸ್ವಲ್ಪವೇ ಹೊತ್ತಿನಲ್ಲಿ ಚೇತರಿಸಿಕೊಂಡ ಅವರು ವೈದ್ಯರು ಹಾಗೂ ಮಠದವರೊಂದಿಗೆ ಮಾತನಾಡಿದ್ದರು. ಇಂದು ಬೆಳಗ್ಗೆ ದೈನಂದಿನ ಪೂಜೆ ನಡೆಸಿದ ಅವರು ಬಳಿಕ ಪತ್ರಿಕೆ ಹಾಗೂ ಪುಸ್ತಕಗಳನ್ನು ಓದಿದರು ಎಂದು ಮಠದ ಮೂಲಗಳು ತಿಳಿಸಿವೆ. ಕಾಣಿಯೂರು ಶ್ರೀಗಳು ಇಂದು ಆಸ್ಪತ್ರೆಯಲ್ಲಿ ಪೇಜಾವರಶ್ರೀಗಳನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿದರು.