ಮೂಡುಬಿದಿರೆ : ತಾತ್ಕಾಲಿಕ ಮಾರುಕಟ್ಟೆಯ ತಡೆಯಾಜ್ಞೆ ತೆರವು
ಮೂಡುಬಿದಿರೆ, ಅ. 26: ಮೂಡುಬಿದಿರೆ ಸ್ವರಾಜ್ಯ ಮೈದಾನದಲ್ಲಿ ಇಲ್ಲಿನ ಪುರಸಭೆ ನಿರ್ಮಿಸುತ್ತಿದ್ದ ತಾತ್ಕಾಲಿಕ ಮಾರುಕಟ್ಟೆಯ ಕಾಮಗಾರಿಯ ಮೇಲಿನ ಹೈಕೋರ್ಟ್ ತಡೆಯಾಜ್ಞೆ ಬುಧವಾರ ತೆರವಾಗಿದ್ದು ಹೈಕೋರ್ಟ್ನಲ್ಲಿ ದಾಖಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯ ಹಿನ್ನಲೆಯಲ್ಲಿ ಸ್ಥಗಿತಗೊಂಡಿದ್ದ ಕಾಮಗಾರಿಗೆ ಮತ್ತೆ ಚಾಲನೆ ದೊರಕಿದೆ.
ಭಾರತೀಯ ಸೇನೆಯ ವಶದಲ್ಲಿದ್ದ ಮೂಡುಬಿದಿರೆ ಸ್ವರಾಜ್ಯ ಮೈದಾನವನ್ನು 2010ರಲ್ಲಿ ಜಿಲ್ಲಾಧಿಕಾರಿಗಳು ಕರ್ನಾಟಕ ಸರಕಾರದ ಕ್ರೀಡಾ ಇಲಾಖೆಗೆ ಪರಾಭಾರೆ ಮಾಡಿದ್ದನ್ನು ಪ್ರಶ್ನಿಸಿ ಹೈಕೋರ್ಟ್ನಲ್ಲಿ ಪಿಐಎಲ್ ದಾಖಲು ಮಾಡಿದ್ದರು. ಸೇನೆಗೆ ಸೇರಿದ್ದು ಎನ್ನಲಾಗಿದ್ದ ಸ್ವರಾಜ್ಯ ಮೈದಾನದ 23 ಎಕರೆ ಜಾಗದಲ್ಲಿ ನಡೆಯುತ್ತಿರುವ ಕಾಮಗಾರಿಗಳಿಗೆ ಹಾಗೂ ಮೂಡುಬಿದಿರೆ ಪುರಸಭೆ ನಿರ್ಮಿಸುತ್ತಿದ್ದ ತಾತ್ಕಾಲಿಕ ಮಾರುಕಟ್ಟೆ ನಿರ್ಮಾಣ ಪ್ರಕ್ರಿಯೆಗೆ ತಡೆಯೊಡ್ಡಿದ್ದ ಹೈಕೋರ್ಟ್ ಆದೇಶದಂತೆ ಕಾಮಗಾರಿ ನಿಲ್ಲಿಸಲಾಗಿತ್ತು.
ಭಾರತೀಯ ಸೇನೆಯ ಮೂಲ ಸ್ವಾಮ್ಯದಲ್ಲಿದ್ದ ಸ್ವರಾಜ್ಯ ಮೈದಾನವು ಇದೀಗ ಕರ್ನಾಟಕ ಸರಕಾರದ ಕ್ರೀಡಾ ಇಲಾಖೆಯ ವಶದಲ್ಲಿದೆ. ಸಾರ್ವಜನಿಕ ಹಿತಾಸಕ್ತಿಯ ಅರ್ಜಿ ಹಿನ್ನಲೆಯಲ್ಲಿ ಕರ್ನಾಟಕ ಉಚ್ಛನ್ಯಾಯಾಲಯವು ಕಾಮಗಾರಿಯನ್ನು ನಿಲ್ಲಿಸುವಂತೆ ದ.ಕ. ಜಿಲ್ಲಾಡಳಿತ, ಕ್ರೀಡಾ ಇಲಾಖೆಗೆ ಸೂಚಿಸಿತ್ತು. ಕೋರ್ಟ್ ಆದೇಶದಂತೆ ಮೂಡುಬಿದಿರೆ ತಹಸೀಲ್ದಾರ್ ಕಾಮಗಾರಿಯನ್ನು ಸ್ಥಳಕ್ಕೆ ತೆರಳಿ ನಿಲ್ಲಿಸಿದ್ದರು.
ತಡೆಯಾಜ್ಞೆಯನ್ನು ತೆರವುಗೊಳಿಸುವಂತೆ ಮೂಡುಬಿದಿರೆ ಪುರಸಭೆಯು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ದೂರುದಾರರ ಅರ್ಜಿಯನ್ನು ವಜಾಗೊಳಿಸಿ ತಡೆಯಾಜ್ಞೆಯನ್ನು ತೆರವುಗೊಳಿಸಿದೆ. ಈ ಹಿನ್ನಲೆಯಲ್ಲಿ ಗುರುವಾರ ತಾತ್ಕಾಲಿಕ ಮಾರುಕಟ್ಟೆಯ ಕಾಮಗಾರಿಗೆ ಮತ್ತೆ ಚಾಲನೆ ಸಿಕ್ಕಿದೆ.
ಮೂಡುಬಿದಿರೆಯಲ್ಲಿ ಈಗಿರುವ ಹಳೆಯ ಮಾರುಕಟ್ಟೆಯನ್ನು ಸುಸಜ್ಜಿತವಾಗಿ ನಿರ್ಮಿಸುವ ಉದ್ದೇಶದಿಂದ ಖಾಸಗಿ ಸಹಭಾಗಿತ್ವದಲ್ಲಿ ಯೋಜನೆ ರೂಪಿಸಲಾಗಿದ್ದು, ತಾತ್ಕಾಲಿಕ ಮಾರುಕಟ್ಟೆಯ ನಿರ್ಮಾಣ ಮುಗಿದ ಕೂಡಲೇ ಮಾರುಕಟ್ಟೆಯು ಸ್ವರಾಜ್ಯ ಮೈದಾನಕ್ಕೆ ಸ್ಥಳಾಂತರಗೊಳ್ಳಲಿದೆ.