ಅರಿವಿನ ಪರಿಧಿಯನ್ನು ವಿಸ್ತರಿಸಿ ಮುನ್ನಡೆಯಬೇಕು: ಡಾ.ನಾ.ಮೊಗಸಾಲೆ
ಕೊಣಾಜೆ,ಅ.27: ಜ್ಞಾನವನ್ನು ನಾವು ಪುಸ್ತಕದಿಂದ ಪಡೆದುಕೊಳ್ಳಬಹುದು. ಹಾಗೆಯೇ ಅರಿವಿನ ಪರಿಧಿಯನ್ನು ವಿಸ್ತರಿಸಿಕೊಳ್ಳಲು ನಮಗೆ ಬಹಳಷ್ಟು ಅವಕಾಶಗಳಿವೆ. ಅರಿವಿನೊಳಗಿನ ಮರವನ್ನು ಫೋಷಿಸಿ ಮುನ್ನಡೆದರೆ ಯಾವುದೇ ಕ್ಷೇತ್ರದಲ್ಲಾದರೂ ಪರಿಪೂರ್ಣತೆಯನ್ನು ಕಂಡುಕೊಳ್ಳಲು ಸಾಧ್ಯವಿದೆ ಎಂದು ಕನ್ನಡದ ಪ್ರಮುಖ ಕವಿ, ಕಾದಂಬರಿಕಾರ, ಸಂಘಟಕ ಡಾ.ನಾ.ಮೊಗಸಾಲೆ ಅವರು ಅಭಿಪ್ರಾಯ ಪಟ್ಟರು.
ಅವರು ಎಸ್ವಿಪಿ ಕನ್ನಡ ಅಧ್ಯಯನ ಸಂಸ್ಥೆ ಹಾಗೂ ಕೇಂದ್ರ ಸಾಹಿತ್ಯ ಅಕಾಡೆಮಿ ದೆಹಲಿ ಇದರ ಸಹಯೋಗದೊಂದಿಗೆ ಮಂಗಳೂರು ವಿಶ್ವವಿದ್ಯಾಲಯದ ಎಸ್ವಿಪಿ ಕನ್ನಡ ಅಧ್ಯಯನ ಸಂಸ್ಥೆಯ ಸಭಾಂಗಣದಲ್ಲಿ ಶುಕ್ರವಾರ ನಡೆದ ಲೇಖಕರೊಂದಿಗೆ ಭೇಟಿ, ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಸಾಹಿತ್ಯ ಎಂಬುದು ಒಂದು ಮನೋಧರ್ಮ. ಈ ಮನೋಧರ್ಮವು ಬಾಲ್ಯದಲ್ಲಿಯೇ ನಮ್ಮೊಂದಿಗೆ ಸೇರಿಕೊಂಡರೆ ಸಾಹಿತ್ಯದ ಪರಿಪೂರ್ಣತೆಯೆಡೆಗೆ ಸಾಗಲು ಸಾಧ್ಯವಾಗುತ್ತದೆ.
ವಿದ್ಯಾರ್ಥಿಗಳು ತರಗತಿಯ ಪಠ್ಯಗಳಿಗೆ ಮಾತ್ರ ಸೀಮಿತವಾಗಿರದೆ ಸಾಹಿತ್ಯ ಸೇರಿದಂತೆ ಎಲ್ಲಾ ವಿಚಾರಗಳನ್ನೂ ತೆರದ ಮನಸ್ಸಿನಿಂದ ಮನನ ಮಾಡಿಕೊಂಡು ತಮ್ಮ ಅರಿವನ್ನು ಇನ್ನಷ್ಟು ವಿಸ್ತರಿಸುವ ಕೆಲಸ ಮಾಡಬೇಕು ಎಂದು ಹೇಳಿದರು.
ನಾವು ಎಂಬುವ ಬದಲು ನಾನು ಎಂಬುದು ನಮ್ಮ ಎದುರು ಬಂದು ಇಂದು ಅದೆಷ್ಟೋ ತಲ್ಲಣಗಳನ್ನು ಸೃಷ್ಟಿ ಮಾಡುತ್ತಿದೆ. ಇಂತಹ ಮನೋಭಾವನೆಯಿಂದ ಇಂದು ರಾಜಕೀಯ ಸೇರಿದಂತೆ ಎಲ್ಲ ರಂಗಗಲೂ ಕುಲಗೆಟ್ಟು ಹೋಗುತ್ತಿವೆ. ಅದೇ ರೀತಿಯಲ್ಲಿ ಪ್ರಶಸ್ತಿಗಳು ಕೂಡಾ ಮೌಲ್ಯಗಳನ್ನು ಕಳೆದುಕೊಂಡು ಕುಲಗೆಡುತ್ತಿದೆ. ಯಾವತ್ತು ನಾನು ಎಂಬುವ ಮನೋಭಾವ ಜಗತ್ತಿನಲ್ಲಿ ಮರೆಯಾಗುತ್ತದೋ ಆಗ ಉತ್ತಮ ಸಮಾಜವನ್ನು ಕಂಡುಕೊಳ್ಳಲು ಸಾಧ್ಯ ಎಂದು ಹೇಳಿದರು.
ಮೊಗಸಾಲೆ ಅವರು ಸಂವಾದ ಕಾರ್ಯಕ್ರಮದಲ್ಲಿ ತಮ್ಮ ಬಾಲ್ಯ, ಬಡತನ ಹಾಗೂ ತಾವು ಜೀವನದಲ್ಲಿ ಸಾಗಿ ಬಂದ ಪಯಣವನ್ನು ವಿವರಿಸುತ್ತಾ, ` ನಾನು ಬ್ರಾಹ್ಮಣನಾಗಿದ್ದರೂ ಬಾಲ್ಯದಲ್ಲಿ ಅದೆಷ್ಟೋ ಶೋಷಣೆಗಳನ್ನು ಎದುರಿಸುತ್ತಾ ಬಂದಿದ್ದೆ. ಆದರೆ ಆಗಿನ ಕಾಲಪರಿಸ್ಥಿತಿಯಲ್ಲಿ ದಲಿತರ, ಹಿಂದುಳಿದ ವರ್ಗದವರ ಸ್ಥಿತಿ ಹೇಗಿರಬಹುದು ಎಂದು ನೀವೇ ಊಹಿಸಿ. ಬಾಲ್ಯದಲ್ಲಿಯೇ ಕಂಡುಕೊಂಡ ಇಂತಹ ಮನೋಭಾವನೆಯಿಂದ ನನಲ್ಲಿ ಪ್ರಗತಿಪರ ಚಿಂತನೆಗಳು ಬೆಳೆಯುವಂತೆ ಮಾಡಿತು. ಇಂದಿಗೂ ನನ್ನ ಮನೆಗೆ ನಾನು ಯಾವ ಜಾತಿಯನ್ನು ನೋಡದೆ ಎಲ್ಲರನ್ನೂ ಮುಕ್ತವಾಗಿ ಸ್ವಾಗತಿಸುತ್ತೇನೆ ' ಎಂದರು.
ಇದಕ್ಕಿಂದ ಮುನ್ನ ನಡೆದ ಮೊಗಸಾಲೆ ಸಾಹಿತ್ಯ ಚಿಂತನ ಕಾರ್ಯಕ್ರಮದಲ್ಲಿ ವಿಭಾಗದ ಅಧ್ಯಕ್ಷರಾದ ಪ್ರೊ. ಸೋಮಣ್ಣ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮೊಗಸಾಲೆಯವರ ಸಣ್ಣಕತೆಗಳು ಎಂಬ ವಿಷಯದಲ್ಲಿ ವಿಶ್ವನಾಥ ಎನ್ ನೇರಳೆಕಟ್ಟೆ, ಮೊಗಸಾಲೆಯವರ ಸಂಘಟನೆಯ ಕುರಿತು ಡಾ. ಮಾಧವ ಮೂಡುಕೊಣಾಜೆ ಮಾತನಾಡಿದರು. ಬಳಿಕ ಮೊಗಸಾಲೆಯವರ ಕವಿತೆಗಳ ಪ್ರಸ್ತುತಿಯನ್ನು ಪ್ರಾಧ್ಯಾಪಕ ಡಾ. ಧನಂಜಯ ಕುಂಬ್ಳೆ ಮಾಡಿದರು ಕಾರ್ಯಕ್ರಮದಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿಯ ಬೆಂಗಳೂರು ಪ್ರಾದೇಶಿಕ ಕಾರ್ಯದರ್ಶಿ ಡಾ. ಎನ್. ಕೆ ಮಹಾಲಿಂಗೇಶ್ವರ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಸಂಶೋಧನಾ ವಿದ್ಯಾರ್ಥಿ ಶಿವರಾಜ್ ಕಾರ್ಯಕ್ರಮ ನಿರೂಪಿಸಿದರು.