ಅ.29:“ಭೂಮಿ ತಾಯಿಯನ್ನು ರಕ್ಷಿಸಿ, ಮುಂದಿನ ಪೀಳಿಗೆಗೆ ವರ್ಗಾಯಿಸಿ” ಅಭಿಯಾನಕ್ಕೆ ಪ್ರಧಾನಿಯಿಂದ ಚಾಲನೆ
ಪ್ರಧಾನಿ ಮೋದಿ ಧರ್ಮಸ್ಥಳ ಭೇಟಿ ಹಿನ್ನೆಲೆಯಲ್ಲಿ ನಡೆಯುತ್ತಿರುವ ಸಿದ್ದತೆಗಳನ್ನು ಡಾ.ಡಿ. ವೀರೇಂದ್ರ ಹೆಗ್ಗಡೆಯವರು ಪರಿಶೀಲಿಸಿದರು.
ಬೆಳ್ತಂಗಡಿ,ಅ.27: ಪ್ರಧಾನಿ ನರೇಂದ್ರ ಮೋದಿಯವರ ಭೇಟಿ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಮುಕ್ತವಾಗಿ ಭಾಗವಹಿಸಲು ಅವಕಾಶವಿದ್ದು ತಾಲೂಕಿಗೆ ಮೊದಲ ಬಾರಿಗೆ ಪ್ರಧಾನಿಯೊಬ್ಬರು ಆಗಮಿಸುತ್ತಿದ್ದು ಗೌರವಾನ್ವಿತ ಪ್ರಧಾನಿಗಳನ್ನು ಎಲ್ಲರೂ ಜೊತೆಯಾಗಿ ಸ್ವಾಗತಿಸೋಣ ಎಂದು ಧ. ಗ್ರಾ. ಯೋಜನೆಯ ಕಾರ್ಯನಿರ್ವಾಹಕ ನಿದೇರ್ಶಕ ಡಾ.ಎಲ್ ಹೆಚ್ ಮಂಜುನಾಥ್ ತಿಳಿಸಿದ್ದಾರೆ.
ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಬೆಳ್ತಂಗಡಿ ಹಾಗೂ ದ.ಕ. ಜಿಲ್ಲೆಯ ಜನತೆಗೆ ಹೆಮ್ಮೆಯ ವಿಚಾರವಾಗಿದ್ದು ಮಾನ್ಯ ಪ್ರಧಾನಿಗಳು ಧರ್ಮಸ್ಥಳದ ಕಾರ್ಯಕ್ರಮವನ್ನು ಮೊದಲನೆಯ ಕಾರ್ಯಕ್ರಮವನ್ನಾಗಿ ಆಯ್ಕೆ ಮಾಡಿ ಎರಡು ಗಂಟೆ ಮೀಸಲಿಟ್ಟಿದ್ದಾರೆ ಉಳಿದಂತೆ ಬೆಂಗಳೂರು ಕಾರ್ಯಕ್ರಮ 1 ಗಂಟೆ, ಬೀದರ್ ಕಾರ್ಯಕ್ರಮಕ್ಕೆ 1.30 ಗಂಟೆಯನ್ನು ಮೀಸಲಿಟ್ಟಿದ್ದಾರೆ ಎಂದರು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸ್ವ-ಸಹಾಯ ಸಂಘಗಳ ಸದಸ್ಯರ ಸಮಾವೇಶದಲ್ಲಿ ಹೆಗ್ಗಡೆಯವರ ನೂತನ ಸಂಕಲ್ಪವಾದ “ಭೂಮಿ ತಾಯಿಯನ್ನು ರಕ್ಷಿಸಿ, ಮುಂದಿನ ಪೀಳಿಗೆಗೆ ವರ್ಗಾಯಿಸಿ” ಅಭಿಯಾನವನ್ನು ಪ್ರಧಾನಿ ಉದ್ಘಾಟಿಸುವರು.
ಸ್ವ-ಸಹಾಯ ಸಂಘಗಳ ಸದಸ್ಯರಿಗೆ ಪ್ರಧಾನ ಮಂತ್ರಿ ಜನ್ ಧನ್ ಯೋಜನೆಯನ್ವಯ ಬ್ಯಾಂಕ್ ಖಾತೆಗಳನ್ನು ತೆರೆಯಲಾಗಿದ್ದು ಅವರಿಗೆ ರುಪೇ ಕಾರ್ಡ್ಗಳನ್ನು ಮೋದಿ ವಿತರಿಸುವರು.
ಸ್ವ-ಸಹಾಯ ಸಂಘಗಳ ವ್ಯವಹಾರಗಳನ್ನು ಸಂಪೂರ್ಣವಾಗಿ ನಗದು ರಹಿತವಾಗಿ ಮಾಡಿ ತಂತ್ರಾಂಶ ಆಧಾರಿತ ವ್ಯವಹಾರಗಳನ್ನು ಪ್ರೇರೆಪಿಸಲು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಜೊತೆ ಒಪ್ಪಂದ ಮಾಡಿಕೊಳ್ಳಲಾಗುತ್ತಿದ್ದು ಪ್ರಧಾನಿಯವರ ಸಮ್ಮುಖದಲ್ಲಿ ಒಪ್ಪಂದಕ್ಕೆ ಅಂಕಿತ ಬೀಳಲಿದೆ.
ಬೆಳಿಗ್ಗೆ 11 ಗಂಟೆಗೆ ಧರ್ಮಸ್ಥಳಕ್ಕೆ ಆಗಮಿಸಲಿದ್ದು 11ರಿಂದ 11.30ರ ತನಕ ಶ್ರೀ ಮಂಜುನಾಥ ಸ್ವಾಮಿಯ ದರ್ಶನ, ನಂತರ 11.45ರಿಂದ 12.45ರ ವರೆಗೆ ಉಜಿರೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಬೆಳಿಗ್ಗೆ 9 ಗಂಟೆಯ ವರೆಗೆ ಎಲ್ಲಾ ಕಡೆಯಿಂದ ವಾಹನಗಳು ಉಜಿರೆಗೆ ಬರಬಹುದಾಗಿದ್ದು 9.30ರ ಒಳಗೆ ಸಾರ್ವಜನಿಕರು ಸಭಾಂಗಣಕ್ಕೆ ಬರಲು ಅವಕಾಶವಿದ್ದು ಬರುವವರು ಯಾವುದಾದರೂ ಒಂದು ಫೋಟೋ ಇರುವ ಗುರುತಿನ ಚೀಟಿಯನ್ನು ತೋರಿಸಿ ಒಳಗೆ ಬರಬಹುದಾಗಿದೆ. ಈಗಾಗಲೇ ಸಭಾಂಗಣದಲ್ಲಿ 70 ಸಾವಿರ ಆಸನದ ವ್ಯವಸ್ಥೆ ಮಾಡಲಾಗಿದ್ದು ಬಿಸಿಲಿನ ಬೇಗೆಯಿಂದ ತಪ್ಪಿಸಲು ಅದಕ್ಕೂ ವ್ಯವಸ್ಥೆ ಮಾಡಲಾಗಿದೆ. ಕ್ರೀಡಾಂಗಣದ ಒಳಗೆ 18 ಟಿವಿ ಅಳವಡಿಸಲಾಗಿದೆ ಎಂದು ತಿಳಿಸಿದರು.
ಸಭಾಂಗಣ ಪ್ರವೇಶಕ್ಕೆ ಸುಮಾರು 5 ಕಡೆ ದ್ವಾರಗಳನ್ನು ಮಾಡಲಾಗಿದ್ದು ತಪಾಸಣೆ ವಿಳಂಭವಾಗದಂತೆ 40 ಕಡೆ ತಪಾಸಣಾ ಕೇಂದ್ರಗಳನ್ನು ಮಾಡಲಾಗಿದೆ. ತಪಾಸಣೆ ಅನುಕೂಲವಾಗಲು ಯಾರೂ ಬ್ಯಾಗ್ ಪರ್ಸ್ಗಳನ್ನು ತರಬಾರದಾಗಿ ವಿನಂತಿಸಿದರು. ನೀರಿನ ಬಾಟಲ್ ತರಲು ಅವಕಶವಿಲ್ಲ. ಸುಮಾರು 1 ಲಕ್ಷ ಮಂದಿಗೆ ಕುಳಿತಲ್ಲೆ ನೀರು ಸರಬರಾಜು ಮಾಡುವ ವ್ಯವಸ್ಥೆಯನ್ನು ಮಾಡಲಾಗಿದ್ದು ಇದನ್ನು ವಿಶೇಷ ಸ್ವಯಂ ಸೇವಕರೊಂದಿಗೆ ಎಸ್ಕೆಎಫ್ ಮೂಡಬಿದ್ರೆಯವರು ಉಚಿತವಾಗಿ ಮಾಡುತ್ತಿದ್ದಾರೆ.
ಜನಾರ್ದನ ಸ್ವಾಮಿ ದೇವಸ್ಥಾನದ ಎದುರು, ಅನುಗ್ರಹ ಶಾಲೆಯ ಬಳಿ, ಅಜ್ಜರಕಾಡು ಪ್ರದೇಶದಲ್ಲಿ, ಇಂಜಿನಿಯರಿಂಗ್ ಕಾಲೇಜಿನ ಸಮೀಪ ವಾಹನಗಳು ನಿಲ್ಲಲು ವ್ಯವಸ್ಥೆ ಮಾಡಲಾಗಿದ್ದು ವಾಹನ ನಿಲ್ಲಿಸುವಲ್ಲಿ ಎಲ್ಲರಿಗೂ ಊಟ ಹಾಗೂ ನೀರಿನ ವ್ಯವಸ್ಥೆ ಮಾಡಲಾಗಿದೆ. ಸುಮಾರು 1 ಲಕ್ಷ ಜನರಿಗೆ ಕೆಎಂಎಫ್ ನವರಿಂದ ಉಚಿತ ಮಜ್ಜಿಗೆ ವ್ಯವಸ್ಥೆ ಮಾಡಿದ್ದಾರೆ ಎಂದು ತಿಳಿಸಿದರು.
ಬೆಳಿಗ್ಗೆ 10.30ರ ಒಳಗೆ ಎಲ್ಲರೂ ಆಸನದಲ್ಲಿ ಕುಳಿತುಕೊಳ್ಳಬೇಕು. ಬಳಿಕ ಬಂದವರಿಗೆ ಅವಕಾಶವಿರುವುದಿಲ್ಲ. ಧ. ಗ್ರಾ. ಯೋಜನೆಯ ಸ್ಥಳಿಯ ಜಿಲ್ಲೆಯ ಸದಸ್ಯರಿಗೆ ಅವಕಾಶ ಕೊಟ್ಟಿದ್ದು ಸುಮಾರು 60000 ಜನ ಸದಸ್ಯರು ಮತ್ತು ಬಿಜೆಪಿ ವತಿಯಿಂದ 25000 ಜನ ಬರುವ ನಿರೀಕ್ಷೆಯಿದೆ. ಗಣ್ಯರಿಗೆ ಕಾಲೇಜಿನ ಎದುರಿನ ಬಾಗದಲ್ಲಿ ಕ್ರೀಡಾಂಗಣಕ್ಕೆ ಪ್ರವೇಶ ನೀಡಲಾಗುತ್ತದೆ, ಯಾರೂ ತಮ್ಮ ವಾಹನಗಳನ್ನು ಬೈಕುಗಳನ್ನು ಉಜಿರೆ ಕಾಲೇಜಿನ ಎದುರು ರಸ್ತೆ ಬದಿಯಲ್ಲಿ ನಿಲ್ಲಿಸುವಂತಿಲ್ಲ. ಸಾರ್ವಜನಿಕರು ಸಹಕರಿಸುವಂತೆ ವಿನಂತಿಸಿದ್ದಾರೆ.