ಸರ್ವ ಸದಸ್ಯರ ರಾಜೀನಾಮೆಗೆ ಜೆಡಿಎಸ್ ಆಗ್ರಹ
ನಗರಸಭೆಯ ಆಡಳಿತ ವ್ಯವಸ್ಥೆ ಕುಸಿತ: ಆರೋಪ
ಮಡಿಕೇರಿ, ಅ.27: ಮಡಿಕೇರಿ ನಗರಸಭೆಯ ಆಡಳಿತ ವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದ್ದು, ನಗರದ ಜನತೆ ಮಾತ್ರವಲ್ಲದೆ ದೇಶ, ವಿದೇಶದಿಂದ ಆಗಮಿಸುತ್ತಿರುವ ಪ್ರವಾಸಿಗರು ಕೂಡ ನರಕಯಾತನೆ ಅನುಭವಿಸುತ್ತಿದ್ದಾರೆ. ನಗರಸಭೆಯಲ್ಲಿರುವ ಆಡಳಿತ ಪಕ್ಷ ಹಾಗೂ ವಿರೋಧ ಪಕ್ಷದ ಸದಸ್ಯರು ಜನರ ಹಿತ ಕಾಪಾಡುವಲ್ಲಿ ಸಂಪೂರ್ಣವಾಗಿ ವಿಫಲರಾಗಿದ್ದಾರೆ ಎಂದು ಆರೋಪಿಸಿರುವ ಜಾತ್ಯತೀತ ಜನತಾದಳದ ಜಿಲ್ಲಾ ವಕ್ತಾರ ಪಿ.ಎಸ್.ಭರತ್ ಕುಮಾರ್ ಸರ್ವ ಸದಸ್ಯರು ಸಾಮೂಹಿಕ ರಾಜಿನಾಮೆ ನೀಡಬೇಕೆಂದು ಒತ್ತಾಯಿಸಿದ್ದಾರೆ.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಧಿಕಾರದ ದಾಹಕ್ಕೆ ಅಂಟಿಕೊಂಡವರು ರಾಜೀನಾಮೆ ನೀಡುವ ನಿರ್ಧಾರವನ್ನು ಕೈಗೊಳ್ಳುವ ಬಗ್ಗೆ ಸಂಶಯವಿದ್ದು, ಸರಕಾರ ನಿಷ್ಪ್ರಯೋಜಕ ನಗರಸಭೆಯನ್ನು ಸೂಪರ್ ಸೀಡ್ ಮಾಡಬೇಕೆಂದು ಆಗ್ರಹಿಸಿದರು.
ಕನಿಷ್ಠ ಮೂಲಭೂತ ಸೌಲಭ್ಯಗಳನ್ನು ನೀಡಲಾಗದ ನಗರಸಭೆ ಕೇವಲ ಕಾಲಹರಣದಲ್ಲಿ ತೊಡಗಿದೆ. ಸರಕಾರದಿಂದ ಕೋಟಿಗಟ್ಟಲೆ ಹಣ ಬಂದರೂ ಆಡಳಿತ ಮತ್ತು ವಿರೋಧ ಪಕ್ಷದ ಸದಸ್ಯರ ನಡುವಿನ ವೈಯಕ್ತಿಕ ಕಾಳಗದಿಂದಾಗಿ ಅನುದಾನ ಸಮರ್ಪಕವಾಗಿ ಬಳಕೆಯಾಗುತ್ತಿಲ್ಲ ಎಂದು ಆರೋಪಿಸಿದರು. ಬಿಜೆಪಿ ಮಂದಿ ಉಪಾಧ್ಯಕ್ಷ ಸ್ಥಾನ ಹಾಗೂ ಸ್ಥಾಯಿ ಸಮಿತಿ ಸ್ಥಾನದಲ್ಲಿ ಅಧಿಕಾರ ಅನುಭವಿಸುತ್ತಿದ್ದರೂ ನಗರಸಭಾ ಅಧ್ಯಕ್ಷರ ರಾಜೀನಾಮೆಗೆ ಆಗ್ರಹಿಸುತ್ತಿದ್ದಾರೆ. ಇದು ನಾಚಿಕೆಗೇಡಿನ ವಿಚಾರವಾಗಿದ್ದು, ಮೊದಲು ಉಪಾಧ್ಯಕ್ಷ ಸ್ಥಾನ ಹಾಗೂ ಸ್ಥಾಯಿ ಸಮಿತಿಯಲ್ಲಿರುವ ಬಿಜೆಪಿ ಪ್ರತಿನಿಧಿಗಳು ತಮ್ಮ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ನಂತರ ಅಧ್ಯಕ್ಷರ ರಾಜಿನಾಮೆಗೆ ಆಗ್ರಹಿಸಲಿ ಎಂದು ಭರತ್ ಕುಮಾರ್ ತಿಳಿಸಿದರು.
ಕನಿಷ್ಠ ಗುಂಡಿ ಮುಚ್ಚಲು ಕೂಡ ಸಾಧ್ಯವಾಗದ ನಗರಸಭೆ ಅಧಿಕಾರದಲ್ಲಿ ಮುಂದುವರಿಯುವ ಅರ್ಹತೆಯನ್ನು ಕಳೆದುಕೊಂಡಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ರಾಜೇಂದ್ರಪ್ರಸಾದ್ ಅವರು ನಗರಸಭೆ ವಿರುದ್ಧ ದೂರು ದಾಖಲಿಸುವ ಕುರಿತು ವಿಷಯ ಪ್ರಸ್ತಾಪಿಸಿರುವುದೇ ಇದಕ್ಕೆ ಸಾಕ್ಷಿಯಾಗಿದೆ ಎಂದು ಆರೋಪಿಸಿದರು.
ಹೊಂಡಗಳಿಗೆ ಸದಸ್ಯರ ಹೆಸರು: ನಗರದ ತುಂಬಾ ರಸ್ತೆಗಳಲ್ಲಿ ಹೊಂಡ ಗುಂಡಿಗಳಿದ್ದು, ಮುಂದಿನ 30 ದಿನಗಳೊಳಗೆ ಹೊಂಡಗಳನ್ನು ಮುಚ್ಚಿ ಡಾಂಬರೀಕರಣ ಮಾಡದಿದ್ದರೆ, ಆ ಹೊಂಡಗಳಿಗೆ ಆಯಾ ವಾರ್ಡ್ನ ನಗರಸಭಾ ಸದಸ್ಯರ ಹೆಸರನ್ನಿಟ್ಟು ನಾಮಫಲಕವನ್ನು ಅಳವಡಿಸುವ ಮೂಲಕ ವಿಭಿನ್ನ ರೀತಿಯಲ್ಲಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗುವುದು ಎಂದು ಅವರು ಎಚ್ಚರಿಕೆಯನ್ನು ನೀಡಿದರು.
ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ನ ಚೆಯ್ಯಂಡಾಣೆ ಘಟಕದ ಪ್ರಮುಖರಾದ ಪಿ.ಪ್ರತಾಪ್, ಕಾಕೋಟುಪರಂಬುವಿನ ಅಮ್ಮಂಡ ವಿವೇಕ್, ಕಕ್ಕಬ್ಬೆಯ ಕೆ.ಶರಣ್, ಕಡಂಗದ ಎಂ.ಮದನ್ ಹಾಗೂ ಮಡಿಕೇರಿ ನಗರ ಕಾರ್ಯದರ್ಶಿ ಮುಹಮ್ಮದ್ ಅಬ್ರಾರ್ ಉಪಸ್ಥಿತರಿದ್ದರು.







