ಮಗು ಸಾವು ಪ್ರಕರಣ: ಅಧಿಕಾರಿ ಅಮಾನತಿಗೆ ಪುಷ್ಪಲತಾ ಆಗ್ರಹ
ಮಡಿಕೇರಿ, ಅ. 27: ಬಸವನಹಳ್ಳಿಯಲ್ಲಿರುವ ನಿರಾಶ್ರಿತರ ಶಿಬಿರದಲ್ಲಿ ಮೂರು ವರ್ಷ ಪ್ರಾಯದ ಲಕ್ಷ್ಮೀ ಎಂಬ ಮಗು ಮೃತಪಟ್ಟ ಪ್ರಕರಣಕ್ಕೆ ಜಿಲ್ಲಾ ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆಯ ಸಮನ್ವಯಾಧಿಕಾರಿ ಬಿ.ಎಂ.ಪ್ರಕಾಶ್ ಅವರ ಬೇಜವ್ದಾರಿತನವೇ ಕಾರಣವೆಂದು ಮಹಿಳಾ ಕಾಂಗ್ರೆಸ್ನ ಜಿಲ್ಲಾಧ್ಯಕ್ಷೆ ಜಿ.ಆರ್.ಪುಷ್ಪಲತಾ ಆರೋಪಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಸ್ಥಳಕ್ಕೆ ಆ್ಯಂಬ್ಯುಲೆನ್ಸ್ ಕಳುಹಿಸುವಂತೆ ದೂರವಾಣಿ ಮೂಲಕ 2 ದಿನಗಳಿಂದ ಮನವಿ ಮಾಡಿದರೂ ಅಧಿಕಾರಿ ಅಮಾನವೀಯ ರೀತಿಯಲ್ಲಿ ವರ್ತಿಸಿದ್ದಾರೆ ಎಂದು ಟೀಕಿಸಿದ್ದಾರೆ. ಈಅಧಿಕಾರಿ ಕಾರ್ಯನಿ ರ್ವಹಿಸಿದ ಸ್ಥಳಗಳಲ್ಲಿ ಕರ್ತವ್ಯಲೋಪ ಎಸಗಿ ವಿಚಾರಣೆಯನ್ನು ಕೂಡ ಎದುರಿಸುತ್ತಿದ್ದಾರೆ. ಇವರಿಂದಾಗಿ ಇಲಾಖೆಗೆ ಮಾತ್ರವಲ್ಲದೆ ಆಡಳಿತ ವ್ಯವಸ್ಥೆಗೂ ಕೆಟ್ಟ ಹೆಸರು ಬರುತ್ತಿದೆ ಎಂದು ಆರೋಪಿಸಿರುವ ಪುಷ್ಪಲತಾ, ಅಧಿಕಾರಿ ಬಿ.ಎಂ.ಪ್ರಕಾಶ್ ಅವರನ್ನು ತಕ್ಷಣ ಅಮಾನತುಗೊಳಿಸಬೇಕೆಂದು ಆಗ್ರಹಿಸಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಅವರ ಬಳಿ ಮನವಿ ಮಾಡಿ ಅಧಿಕಾರಿ ವಿರುದ್ಧ ಕ್ರಮಕ್ಕಾಗಿ ಒತ್ತಾಯಿಸಲಾಗುವುದೆಂದು ತಿಳಿಸಿದ್ದಾರೆ.





