ಹಳಿಯಲ್ಲಿ ಬಿರುಕು: ರೈಲು ಸಂಚಾರ ವಿಳಂಬ
ಸ್ಟೇಷನ್ ಮಾಸ್ಟರ್ ವಿರುದ್ಧ ಪ್ರಯಾಣಿಕರ ಆಕ್ರೋಶ

ಮಂಡ್ಯ, ಅ.28: ಮದ್ದೂರು ರೈಲ್ವೆ ನಿಲ್ದಾಣದ ಸಮೀಪ ಹಳಿಯಲ್ಲಿ ಬಿರುಕು ಬಿಟ್ಟ ಪರಿಣಾಮ ಶನಿವಾರ ಬೆಂಗಳೂರು-ಮೈಸೂರು ನಡುವಿನ ರೈಲ್ವೆ ಸಂಚಾರ ಅಸ್ತವ್ಯಸ್ತಗೊಂಡಿತ್ತು.
ಮಧ್ಯಾಹ್ನ ರೈಲ್ವೆ ಟ್ರ್ಯಾಕ್ಮನ್ ನೀಡಿದ ಮಾಹಿತಿ ಮೇರೆಗೆ ನಿಲ್ದಾಣದ ಸ್ವಲ್ಪ ದೂರದಲ್ಲಿ ಬಿರುಕುಬಿಟ್ಟಿದ್ದ ರೈಲ್ವೆ ಹಳಿಯನ್ನು ಸರಿಪಡಿಸುವ ಉದ್ದೇಶದಿಂದ ಸುಮಾರು ಎರಡು ಗಂಟೆ ರೈಲ್ವೆ ಸಂಚಾರ ಅಸ್ತವ್ಯಸ್ತಗೊಂಡಿತು.
ಬೆಂಗಳೂರಿನಿಂದ ಮೈಸೂರಿಗೆ ತೆರಳುತ್ತಿದ್ದ ಮಾಲ್ಗುಡಿ ಎಕ್ಸ್ ಪ್ರೆಸ್ ರೈಲು ಎರಡು ಗಂಟೆ ಮತ್ತು ಅದರ ಹಿಂದೆ ಆಗಮಿಸಿದ ಟಿಪ್ಪು ಎಕ್ಸ್ ಪ್ರೆಸ್ ಅರ್ಧಗಂಟೆ ಮದ್ದೂರು ನಿಲ್ದಾಣದಲ್ಲಿ ಪ್ರಯಾಣ ಸ್ಥಗಿತಗೊಳಿಸಿದ್ದರಿಂದ ಪ್ರಯಾಣಿಕರು ಪರದಾಡಿದರು.
ಗಂಟೆಗಟ್ಟಲೇ ನಿಲ್ದಾಣದಲ್ಲಿ ಕಾಯುವಂತಾದ ಪ್ರಯಾಣಿಕರು ಸಿಟ್ಟಿಗೆದ್ದು ಸ್ಟೇಷನ್ ಮಾಸ್ಟರ್ನ್ನು ತರಾಟೆಗೆ ತೆಗೆದುಕೊಂಡರು.
ಪ್ರಯಾಣಿಕರನ್ನು ಸಮಾಧಾನಪಡಿಸಲು ಯತ್ನಿಸಿದರಾದರೂ ಪ್ರಯಾಣಿಕರ ಆಕ್ರೋಶ ಕಡಿಮೆಯಾಗಲಿಲ್ಲ. ಹಳಿ ದುರಸ್ತಿಯಾದ ನಂತರ, ರೈಲು ಸಂಚಾರ ಪುನಾರಂಭಗೊಂಡ ನಂತರವಷ್ಟೇ ಪ್ರಯಾಣಿಕರು ಸಮಾಧಾನಗೊಂಡರು.





