ಪೊಲೀಸರಿಂದ ಹಿರಿಯ ವಿದ್ಯಾರ್ಥಿಗಳ ವಿಚಾರಣೆ
ಮೆಡಿಕಲ್ ಕಾಲೇಜ್ ವಿದ್ಯಾರ್ಥಿಯ ಅನುಮಾನಾಸ್ಪದ ಸಾವು ಪ್ರಕರಣ
ಶಿವಮೊಗ್ಗ, ಅ. 28: ನಗರದ ಸರಕಾರಿ ಮೆಡಿಕಲ್ ಕಾಲೇಜ್ನ ಎಂಬಿಬಿಎಸ್ ಪ್ರಥಮ ವರ್ಷದ ವಿದ್ಯಾರ್ಥಿ ಎಸ್.ಜಿ.ರಘು (20) ಹಾಸ್ಟೆಲ್ನಲ್ಲಿಯೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಪ್ರಕರಣದ ತನಿಖೆಯನ್ನು ಪೊಲೀಸರು ಚುರುಕುಗೊಳಿಸಿದ್ದಾರೆ. ಕಾಲೇಜ್ನ ಕೆಲ ಹಿರಿಯ ವಿದ್ಯಾರ್ಥಿಗಳನ್ನು ಪೊಲೀಸರು ವಿಚಾರಣೆಗೊಳಪಡಿಸಿದ್ದಾರೆ ಎಂದು ತಿಳಿದು ಬಂದಿದೆ.
ಇನ್ ಸ್ಪೆಕ್ಟರ್ ಹರೀಶ್ ಕೆ. ಪಾಟೀಲ್ ನೇತೃತ್ವದ ಪೊಲೀಸ್ ತಂಡವು ಕೆಲ ಹಿರಿಯ ವಿದ್ಯಾರ್ಥಿಗಳ ಜೊತೆಗೆ ಎಸ್.ಜಿ. ರಘು ಸಹಪಾಠಿಗಳಿಂದಲೂ ಮಾಹಿತಿ ಕಲೆ ಹಾಕಿದೆ. ಹಾಸ್ಟೆಲ್ ಹೊರಭಾಗದಲ್ಲಿರುವ ಸಿಸಿ ಕ್ಯಾಮರಾದ ದೃಶ್ಯಾವಳಿಗಳ ಪರಿಶೀಲನೆ ಕೂಡ ನಡೆಸಿದೆ ಎನ್ನಲಾಗಿದೆ.
ಇನ್ನೊಂದೆಡೆ ಮೃತದೇಹದ ಮರಣೋತ್ತರ ವರದಿ ಇನ್ನೂ ಪೊಲೀಸರ ಕೈಸೇರಿಲ್ಲ ಎನ್ನಲಾಗಿದ್ದು, ವೈದ್ಯಕೀಯ ವರದಿ ಬಂದ ನಂತರ ವಿದ್ಯಾರ್ಥಿಯ ಸಾವಿನ ಬಗ್ಗೆ ಮಾಹಿತಿ ಸಿಗಲಿದೆ. ಎಸ್.ಜಿ.ರಘು ಆತ್ಮಹತ್ಯೆ ಮಾಡಿಕೊಳ್ಳಲು ಹಿರಿಯ ವಿದ್ಯಾರ್ಥಿಗಳು ನೀಡುತ್ತಿದ್ದ ಕಿರುಕುಳವೇ ಮುಖ್ಯ ಕಾರಣವಾಗಿದೆ ಎಂದು ಹೇಳಲಾಗುತ್ತಿದೆ.
ಈ ನಿಟ್ಟಿನಲ್ಲಿ ಪೊಲೀಸರು ತನಿಖೆ ನಡೆಸಲಾರಂಭಿಸಿದ್ದಾರೆ. ಈ ಶಂಕೆಯ ಆಧಾರದ ಮೇಲೆ ಆಪಾದಿತ ಹಿರಿಯ ವಿದ್ಯಾರ್ಥಿಗಳನ್ನು ವಿಚಾರಣೆ ಗೊಳಪಡಿಸಿದ್ದು, ಕಾಲೇಜ್ ಹಾಗೂ ಹಾಸ್ಟೆಲ್ನಲ್ಲಿ ನಡೆಯುತ್ತಿದ್ದ ರ್ಯಾಂಗಿಂಗ್ಗೆ ಸಂಬಂಧಿಸಿದ ಕೆಲ ಮಹತ್ವದ ಮಾಹಿತಿಗಳು ಪೊಲೀಸರಿಗೆ ಲಭ್ಯವಾಗಿದೆ ಎಂದು ಹೇಳಲಾಗುತ್ತಿದೆ.
ಮಾಹಿತಿ ನೀಡಿರಲಿಲ್ಲ: ಮೂಲತಃ ಶಿಕಾರಿಪುರ ತಾಲೂಕು ಬೇಗೂರು ಗ್ರಾಮದ ನಿವಾಸಿಯಾದ ಎಸ್.ಜಿ.ರಘು ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದ. ದೀಪಾವಳಿ ಹಬ್ಬಕ್ಕೆಂದು ಕಾಲೇಜ್ನಿಂದ ಊರಿಗೆ ತೆರಳಿದ್ದ. ಅ. 22ರಂದು ಕಾಲೇಜ್ನ ಹಾಸ್ಟೆಲ್ಗೆ ಹಿಂದಿರುಗಿದ್ದ. ಅಂದು ಸಂಜೆಯೇ ಕೊಠಡಿಯಲ್ಲಿ ಫ್ಯಾನ್ಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದ. ಈ ವಿಷಯವನ್ನು ಪೊಲೀಸರ ಗಮನಕ್ಕೆ ತರದ ಹಿರಿಯ ವಿದ್ಯಾರ್ಥಿಗಳು, ರಘುವಿದ್ದ ಕೊಠಡಿಯ ಬಾಗಿಲು ಮುರಿದು ಆತನ ಶವವನ್ನು ಸರಕಾರಿ ಮೆಗ್ಗಾನ್ ಆಸ್ಪತ್ರೆಗೆ ಸಾಗಿಸಿದ್ದರು.
ಮತ್ತೊಂದೆಡೆ ಕಾಲೇಜ್ ಆಡಳಿತ ಮಂಡಳಿಯವರು ಕೂಡ ರಘು ಸಾವಿನ ಬಗ್ಗೆ ಪೋಷಕರಿಗೆ ಸಕಾಲದಲ್ಲಿ ಮಾಹಿತಿ ರವಾನಿಸಿರಲಿಲ್ಲ ಎನ್ನಲಾಗಿದ್ದು, ಇದು ಸಾಕಷ್ಟು ಅನುಮಾನಕ್ಕೆ ಎಡೆ ಮಾಡಿಕೊಟ್ಟಿತ್ತು. ಹಲವು ರೀತಿಯ ಊಹಾಪೋಹ ಗಳಿಗೂ ಕಾರಣವಾಗಿತ್ತು. ಈ ನಡುವೆ ಮೃತ ವಿದ್ಯಾರ್ಥಿಯ ತಂದೆಯೂ ಪೊಲೀಸರಿಗೆ ನೀಡಿದ ದೂರಿನಲ್ಲಿ, ತಮ್ಮ ಪುತ್ರನ ಸಾವಿನ ಬಗ್ಗೆ ಅನುಮಾನವಿದೆ. ರ್ಯಾಂಗಿಂಗ್ ಶಂಕೆ ವ್ಯಕ್ತವಾಗುತ್ತಿದೆ. ಉನ್ನತ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಬೇಕು ಎಂದು ತಿಳಿಸಿದ್ದರು. ದೊಡ್ಡಪೇಟೆ ಠಾಣೆ ಪೊಲೀಸರು ಅನುಮಾನಾಸ್ಪದ ಸಾವು ಪ್ರಕರಣದಡಿ ಎಫ್ಐಆರ್ ದಾಖಲಿಸಿಕೊಂಡಿದ್ದರು.
ನಿಗೂಢ: ರಘು ಆತ್ಮಹತ್ಯೆ ಪ್ರಕರಣ ದಿನದಿಂದ ದಿನಕ್ಕೆ ನಿಗೂಢವಾಗಿ ಪರಿಣಮಿಸುತ್ತಿದೆ. ಸಾಕಷ್ಟು ಅನುಮಾನಗಳಿಗೆ ಎಡೆ ಮಾಡಿಕೊಡುತ್ತಿದೆ. ವ್ಯವಸ್ಥಿತವಾಗಿ ಪ್ರಕರಣದ ಸಾಕ್ಷ್ಯಾಧಾರಗಳನ್ನು ಮುಚ್ಚಿ ಹಾಕುವ ಹುನ್ನಾರವನ್ನು ಕೆಲವರು ನಡೆಸಿದ್ದಾರೆಂಬ ಮಾಹಿತಿ ಹರಿದಾಡುತ್ತಿದೆ. ಒಟ್ಟಾರೆ ಪೊಲೀಸರ ತನಿಖೆಯಿಂದ ಸತ್ಯಾಂಶ ಹೊರಬರಬೇಕಾಗಿದೆ.







