ಪ್ರಧಾನಿ ಮೋದಿಯವರ ಅಭೌತ ಚಿಂತನೆಗಳು ಸಮಾಜಕ್ಕೆ ಮಾರಕ: ಅರವಿಂದ ಮಾಲಗತ್ತಿ
ಕನ್ನಡ ಸಾಹಿತ್ಯ ಸಂಸ್ಕೃತಿ ಸಮಾವೇಶ
ಬೆಂಗಳೂರು, ಅ.29: ಪ್ರಧಾನಿ ನರೇಂದ್ರ ಮೋದಿಯವರ ಅಭೌತ ಚಿಂತನೆಗಳನ್ನು ಕಾರ್ಪೊರೇಟ್ ವಲಯದ ಲೇಖಕರು ಪ್ರಯೋಗ ಮಾಡುವ ಮೂಲಕ ಸಮಾಜದ ಸ್ವಾಸ್ತ್ಯವನ್ನು ಹದಗೆಸುತ್ತಿದ್ದಾರೆ ಎಂದು ಕನ್ನಡ ಸಾಹಿತ್ಯ ಅಕಾಡಮಿಯ ಅಧ್ಯಕ್ಷ ಡಾ.ಅರವಿಂದ ಮಾಲಗತ್ತಿ ಕಳವಳ ವ್ಯಕ್ತಪಡಿಸಿದ್ದಾರೆ.
ರವಿವಾರ ನಗರದ ಕಸಾಪದಲ್ಲಿ ಬುದ್ಧ ಬಸವ ಗಾಂಧಿ ಸಾಂಸ್ಕೃತಿಕ ಟ್ರಸ್ಟ್ ಆಯೋಜಿಸಿದ್ದ 8ನೆ ಕನ್ನಡ ಸಾಹಿತ್ಯ ಸಂಸ್ಕೃತಿ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದ ಅವರು, ತಮ್ಮ ಅಭೌತ ಚಿಂತನೆಗಳನ್ನು ಬಿತ್ತರಿಸಲು ಪ್ರಧಾನಿ ಮೋದಿಯವರು ಮೇಗಾ ಮಾರ್ಕೆಟ್ ನಿರ್ಮಾಣ ಮಾಡಿದ್ದಾರೆ. ಕಾರ್ಪೊರೇಟ್ ವಲಯದ ಲೇಖಕರು ಈ ಚಿಂತನೆಗಳನ್ನು ಸಮಾಜದ ಮೇಲೆ ಪ್ರಯೋಗ ಮಾಡಲಾಗುತ್ತಿದೆ. ಅಂಧತೆಯ ಪರಿಕಲ್ಪನೆಗೆ ಈ ವಿಚಾರಗಳು ಅತೀತವಾಗುತ್ತಿವೆ. ಜಾತಿ, ಧರ್ಮ, ಮತದ ವಿಚಾರಗಳನ್ನು ಕೆದುಕುವ ಮೂಲಕ ಸಮಾಜದ ಸ್ವಾಸ್ಥವನ್ನು ಹಾಳು ಮಾಡಲಾಗುತ್ತಿದೆ. ಈ ವಿಚಾರಗಳನ್ನೇ ರಾಜಕೀಯಕ್ಕೂ ಬಳಕೆಯಾಗುತ್ತಿವೆ ಎಂದು ಟೀಕಿಸಿದರು.
ಗ್ರಾಹಕರು ಬಯಸುವುದನ್ನೇ ನೀಡಿ ಸಂತೃಪ್ತಿಗೊಳಿಸಲಾಗುತ್ತಿದೆ ಎಂದು ಕಾರ್ಪೋರೇಟ್ ವಲಯದ ಲೇಖಕರು ಹೇಳುತ್ತಿದ್ದಾರೆ. ಇಂತಹ ವಿಚಾರಗಳಿಗೂ ಬಹುತೇಕ ಮಾಧ್ಯಮಗಳು ಹೆಚ್ಚಿನ ಪ್ರೋತ್ಸಾಹ ನೀಡುತ್ತಿರುವುದು ವಿಪರ್ಯಾಸ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ಸಾಹಿತಿಗಳಿಗೆ ಹೊಸ ಪರಿಕಲ್ಪನೆ: ಇತ್ತೀಚಿನ ದಿನಗಳ ಸಾಹಿತ್ಯದಲ್ಲಿ ಆರು ಬೆರಳಿರುವ, ಇನ್ನೂ ಕೆಲವರು ಐದು, ಒಂದಷ್ಟು ಮಂದಿ ನಾಲ್ಕು ಬೆರಳಿರುವ ಸಾಹಿತಿಗಳಿದ್ದಾರೆ. ನಾಡಿನ ಸಂಸ್ಕೃತಿ, ಸಾಹಿತ್ಯದ ತೇರನ್ನು ಆರನೆ ಬೆರಳಿನವರು ಎಳೆಯಲು ಪ್ರಯತ್ನಿಸುತ್ತಿದ್ದಾರೆ. ನಾಲ್ಕು ಬೆರಳು ಇರುವ ಸಾಹಿತಿಗಳು ಹಿಂದಕ್ಕೆ ಎಳೆಯುತ್ತಿದ್ದಾರೆ. ಐದು ಬೆರಳಿರುವ ಸಾಹಿತಿಗಳು ತೇರನ್ನು ಮುಂದಕ್ಕೂ ಎಳೆಯದೇ, ಹಿಂದಕ್ಕೂ ಬೀಡದೆ ಅಲ್ಲೆ ಹಿಡಿದುಟ್ಟಿಕೊಂಡಿದ್ದಾರೆ. ನಾಲ್ಕು ಹಾಗೂ ಆರು ಬೆರಳು ಇರುವ ಸಾಹಿತಿಗಳಿಗಿಂತ ಐದು ಬೆರಳಿರುವ ಸಾಹಿತಿಗಳು ಸಮಾಜಕ್ಕೆ ತುಂಬಾ ಅಪಾಯಕಾರಿ ಎಂದು ಅವರು ತಮ್ಮದೇ ದಾಟಿಯಲ್ಲಿ ವಿಶ್ಲೇಷಿಸಿದರು.
ಬಸವಣ್ಣ ತತ್ವಗಳನ್ನು ಕಾರ್ಯರೂಪಕ್ಕೆ ತರಲಿ: ಬ್ರಾಹ್ಮಣ ಧರ್ಮದಲ್ಲಿ ಜಾತಿ ನಿರಾಕರಣೆ, ಅಂತರ್ಜಾತಿ ವಿವಾಹಕ್ಕೆ ಬೆಂಬಲ ನೀಡಲಾಗುವುದು ಎಂಬ ವಿಚಾರಗಳಿದ್ದಿದ್ದರೆ ಲಿಂಗಾಯತರು ನಾವು ಹಿಂದೂಧರ್ಮದಿಂದ ಪ್ರತ್ಯೇಕ ಎಂಬ ಭಾವನೆ ಬರುತ್ತಿರಲಿಲ್ಲ. ಹಿಂದೂ ಧರ್ಮದ ಈ ಆಲೋಚನೆ ಕ್ರಮಗಳಿಂದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕ. ಸ್ವತಂತ್ರ ಲಿಂಗಾಯತ ಧರ್ಮ ಘೋಷಣೆಯಾದರೆ ಬಸವಣ್ಣನವರ ಜಾತಿ ರಹಿತ ತತ್ವಗಳನ್ನು ಪ್ರಮಾಣಿಕವಾಗಿ ಕಾರ್ಯರೂಪಕ್ಕೆ ತರಲಿ ಎಂದು ಮಾಲಗತ್ತಿ ಸವಾಲು ಹಾಕಿದರು.
ಈ ವೇಳೆ ರೇಣುಕಾ ನಾಗಪ್ರಿಯ ದತ್ತಿ ಪ್ರಶಸ್ತಿಯನ್ನು ಸಾಹಿತಿ ಕೆ. ಮಹಾ ಲಿಂಗಯ್ಯ, ಪ್ರಕಾಶಕ ಸ್ಪಾನ್ ಕೃಷ್ಣಮೂರ್ತಿ ಅವರಿಗೆ ಪ್ರದಾನಿಸಲಾಯಿತು.
ಕಾರ್ಯಕ್ರಮದಲ್ಲಿ ಕಸಾಪ ಮಾಜಿ ಅಧ್ಯಕ್ಷ ಡಾ.ಆರ್.ಕೆ.ನಲ್ಲೂರು ಪ್ರಸಾದ್, ಕವಿ ಪ್ರೊ. ನಾರಾಯಣಘಟ್ಟ, ಸಹಕಾರ ಮಹಾಮಂಡಳದ ಅಧ್ಯಕ್ಷ ಡಾ.ಶೇಖರಗೌಡ ಮಾಲಿ ಪಾಟೀಲ್, ಟ್ರಸ್ಟ್ನ ಅಧ್ಯಕ್ಷ ಸಿಸಿರಾ ಹಾಜರಿದ್ದರು.







