ಮರಣ ಪ್ರಮಾಣ ಪತ್ರ ಪಡೆಯಲು ಆಧಾರ್ ಸಲ್ಲಿಸಿ
ಉಡುಪಿ, ಅ.31: ಜನನ ಮರಣಗಳ ಅಧಿನಿಯಮ 1969 ಮತ್ತು ಕರ್ನಾಟಕ ಜನನ ಮರಣ ನೋಂದಣಿ ನಿಯಮಗಳು 1999, ನಿಯಮ ಗಳನ್ವಯ, ರಾಜ್ಯದಲ್ಲಿ ಜನನ ಮರಣ ನೋಂದಣಿಯನ್ನು ನಿರ್ವಹಿಸಲಾ ಗುತ್ತಿದ್ದು, ಮೃತ ವ್ಯಕ್ತಿಯ ಗುರುತನ್ನು ಖಾತರಿ ಪಡಿಸಿಕೊಂಡು ಮರಣ ನೋಂದಣಿ ಮಾಡಲು ಮರಣ ಪ್ರಮಾಣ ಪತ್ರ ಕೋರಲು ಅರ್ಜಿದಾರರ, ಮೃತ ವ್ಯಕ್ತಿಯ ಮತ್ತು ಸಂಬಂಧಿಕರ ಆಧಾರ್ ಸಂಖ್ಯೆಯನ್ನು ಸಂಗ್ರಹಿಸಲು ಭಾರತದ ಮಹಾ ನೋಂದಣಾಧಿಕಾರಿಗಳು ಸೂಚಿಸಿದ್ದಾರೆ.
ಆದ್ದರಿಂದ ಉಡುಪಿ ನಗರಸಭಾ ವ್ಯಾಪ್ತಿಯ ಮರಣ ಪ್ರಮಾಣ ಪತ್ರ ಕೋರುವ ಅರ್ಜಿದಾರರು ಮರಣ ಅರ್ಜಿ ನಮೂನೆಯೊಂದಿಗೆ, ಮೃತ ವ್ಯಕ್ತಿಯ ಗುರುತನ್ನು ಖಾತರಿಪಡಿಸುವ ಸಲುವಾಗಿ ಮೃತರ ಆಧಾರ್ ಸಂಖ್ಯೆ/ಇಐಡಿ ಸಂಖ್ಯೆಯನ್ನು ನೀಡಬೇಕು. ಮರಣ ಪ್ರಮಾಣ ಪತ್ರಕ್ಕೆ ಸಂಬಂದಪಟ್ಟ ಮಾಹಿತಿ, ಮೃತರ ಆಧಾರ್ ಸಂಖ್ಯೆ ಇಲ್ಲದಿದ್ದ ಪಕ್ಷದಲ್ಲಿ, ಅರ್ಜಿದಾರರು ಮೃತ ವ್ಯಕ್ತಿಯು ಆಧಾರ್ ಸಂಖ್ಯೆ ಹೊಂದಿರುವುದಿಲ್ಲವೆಂದು ಹಾಗೂ ಒದಗಿಸಿದ ಮಾಹಿತಿಯು ತಪ್ಪಾಗಿದ್ದಲ್ಲಿ ಆಧಾರ್ ಕಾಯ್ದೆ 2016 ಮತ್ತು ಜನನ ಮರಣ ಕಾಯ್ದೆ 1969ರ ಪ್ರಕಾರ ಅಪರಾಧ ಎಂದು ಪರಿಗಣಿಸುವಂತೆ ದೃಢೀಕರಣ ಮತ್ತು ಅರ್ಜಿದಾರರ ಆಧಾರ್ ಸಂಖ್ಯೆ ಜೊತೆಗೆ ಹೆಂಡತಿ/ಗಂಡನ ಅಥವಾ ಪೋಷಕರ ಆಧಾರ್ ಸಂಖ್ಯೆಯನ್ನು ನೀಡಿ ಸಹಕರಿಸುವಂತೆ ಉಡುಪಿ ನಗರಸಭೆಯ ಪೌರಾಯುಕ್ತ ಡಿ.ಮಂಜುನಾಥಯ್ಯ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.





