ನ.4-5: ರಾಷ್ಟ್ರ ಮಟ್ಟದ ಮುಕ್ತ ಕರಾಟೆ ಚಾಂಪಿಯನ್: ಉದ್ಘಾಟನೆಗೆ ಸಿಎಂ ಸಿದ್ದರಾಮಯ್ಯ
ಮಂಗಳೂರು, ಅ.31: ನಗರದ ಸೆಲ್ಫ್ ಡಿಫೆನ್ಸ್ ಸ್ಕೂಲ್ ಆಫ್ ಇಂಡಿಯನ್ ಕರಾಟೆ ಡೋಜೋ(ರಿ)ಇದರ ವತಿಯಿಂದ ನವೆಂಬರ್ 4ಮತ್ತು 5ರಂದು ರಾಷ್ಟಮಟ್ಟದ ಮುಕ್ತ ಕರಾಟೆ ಪಂದ್ಯ ‘ಇಂಡಿಯನ್ ಕರಾಟೆ ಚಾಂಪಿಯನ್ಶಿಪ್ -2017’ ನೆಹರೂ ಮೈದಾನದಲ್ಲಿ ನಡೆಯಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಪಂದ್ಯವನ್ನು ಉದ್ಘಾಟಿಸಲಿದ್ದಾರೆ ಎಂದು ಸಂಸ್ಥೆಯ ಸ್ಥಾಪಕಾಧ್ಯಕ್ಷ ಎ. ಸದಾನಂದ ಶೆಟ್ಟಿ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.
ರಾಜ್ಯದಲ್ಲಿಯೇ ಪ್ರಥಮ ಬಾರಿಗೆ ಈ ರೀತಿಯ ನಾಲ್ಕು ರಿಂಗ್ಗಳನ್ನೊಳಗೊಂಡ ಹೊರಾಂಗಣದಲ್ಲಿ ನಡೆಯುವ ರಾಷ್ಟ್ರಮಟ್ಟದ ಮುಕ್ತ ಕರಾಟೆ ಕ್ರೀಡಾಕೂಟವಾಗಿದೆ. ಈ ಕ್ರೀಡಾ ಕೂಟದಲ್ಲಿ ಹನ್ನೆರಡಕ್ಕೂ ಹೆಚ್ಚು ರಾಜ್ಯಗಳಿಂದ 1200ಕ್ಕೂ ಅಧಿಕ ಕರಾಟೆ ಪಟುಗಳು ಭಾಗವಹಿಸಲಿದ್ದಾರೆ. ಡಿಜಿಟಲ್ ಸ್ಕೋರ್ ಬೋರ್ಡ್ ಬಳಕೆ ಹಾಗೂ ಅಂತರಾಷ್ಟ್ರೀಯ ದರ್ಜೆಯ ಕರಾಟೆ ರಿಂಗನ್ನು ನಿರ್ಮಿಸಿ ಸ್ಫರ್ಧೆ ನಡೆಸಲಾಗುವುದು . ರಾಷ್ಟ್ರಮಟ್ಟದ ಈ ಕ್ರೀಡಾ ಕೂಟದಲ್ಲಿ ದೆಹಲಿ ಮತ್ತು ಮಲೇಶಿಯಾ ಮೂಲದ ತೀರ್ಪುಗಾರರು ಭಾಗವಹಿಸಲಿದ್ದಾರೆ ಎಂದು ಸದಾನಂದ ಶೆಟ್ಟಿ ತಿಳಿಸಿದ್ದಾರೆ.
ಮಲೇಶಿಯಾದ ವಸಂತನ್ ತಾಂತ್ರಿಕ ಸಲಹೆಗಾರರಾಗಿ ಹಾಗೂ ಶ್ರೀನಿವಾಸ್ ಎಂ ಪಂದ್ಯದ ಪ್ರಧಾನ ತೀರ್ಪುಗಾರರಾಗಿ ಭಾಗವಹಿಸಲಿದ್ದಾರೆ. 104 ವಿವಿಧ ವಿಭಾಗಗಳಲ್ಲಿ ನಡೆಯುವ ಸ್ಫರ್ಧೆಯಲ್ಲಿ ಕಟಾ ಮತ್ತು ಕುಮಿಟೆ ವಿಭಾಗಗಳಲ್ಲಿ ವೈಯಕ್ತಿಕ ಹಾಗೂ ಗುಂಪುಗಳ ನಡುವೆ ಸ್ಫರ್ಧೆ ನಡೆಯಲಿದೆ. ಸ್ಥಳದಲ್ಲಿ ಹಾಗೂ ಆನ್ ಲೈನ್ ಮೂಲಕ ನೋಂದಣಿ ನಡೆಯಲಿದೆ ಎಂದು ಸಂಘಟಕರಾದ ಮನೀಶ್ ಆಚಾರ್ಯ ತಿಳಿಸಿದ್ದಾರೆ.
ಸುದ್ದಿ ಗೋಷ್ಠಿಯಲ್ಲಿ ಸಂಘಟನೆಯ ಅಧ್ಯಕ್ಷ ಬಿ.ಸುರೇಂದ್ರ, ಕಾರ್ಯದರ್ಶಿ ಮನಿಶ್, ತಾಂತ್ರಿಕ ನಿರ್ದೇಶಕ ಸುರೇಶ್ ಶೆಟ್ಟಿ , ಸಂಘಟಕರು ಮತ್ತು ಮನಪಾ ಮೇಯರ್ ಕವಿತಾ ಸನಿಲ್ ಉಪಸ್ಥಿತರಿದ್ದರು.







