ಅನ್ಯಭಾಷೆಯ ಅಧಿಪತ್ಯ ಭಾಷಾವಾರು ನೀತಿಗೆ ವಿರುದ್ಧ: ಮುಖ್ಯಮಂತ್ರಿ
ರಾಜ್ಯೋತ್ಸವದ ಪ್ರಯುಕ್ತ ಆಕಾಶವಾಣಿಯಲ್ಲಿ ಸಿಎಂ ಸಂದೇಶ

ಬೆಂಗಳೂರು, ನ.1: ಪ್ರತಿಯೊಂದು ರಾಜ್ಯದ ರಾಜ್ಯಭಾಷೆಯು ಆ ನೆಲದ ಸಾರ್ವಭೌಮ ಭಾಷೆ. ಇದನ್ನು ಸಂವಿಧಾನ ಅಂಗೀಕರಿಸಿದೆ. ಮಾನ್ಯ ಮಾಡಿದೆ. ಮತ್ತೊಂದು ಭಾಷೆ ಆ ನೆಲದ ಬದುಕಿನ ಮೇಲೆ ಆಧಿಪತ್ಯವನ್ನು ಮೆರೆಯುವುದು ಭಾಷಾವಾರು ಪ್ರಾಂತ್ಯ ರಚನೆಯ ನೀತಿಗೆ ವಿರುದ್ಧವಾದುದು. ಸಂವಿಧಾನವೂ ಇದನ್ನು ಒಪ್ಪುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಬುಧವಾರ 62ನೆ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಆಕಾಶವಾಣಿಯಲ್ಲಿ ರಾಜ್ಯದ ಜನತೆಯನ್ನುದ್ದೇಶಿಸಿ ಸಂದೇಶ ನೀಡಿದ ಮುಖ್ಯಮಂತ್ರಿ, ಸ್ಥಳೀಯ ಭಾಷೆಯ ಸ್ವಾಯತ್ತತೆಯನ್ನು ಉಳಿಸಿಕೊಂಡೆ ಅನ್ಯಭಾಷೆಗಳನ್ನು ಕಲಿಯುವುದಕ್ಕೆ ಅವಕಾಶ ಕೊಡಬೇಕಾದ್ದು ಒಕ್ಕೂಟ ವ್ಯವಸ್ಥೆಯೊಳಗಿನ ನೀತಿ ಸಂಹಿತೆ ಎಂದರು.
ಇಂಗ್ಲೀಷ್ ಇಲ್ಲವೆ ಹಿಂದಿ ಭಾಷೆಗೆ ನಮ್ಮ ವಿರೋಧ ಖಂಡಿತ ಇಲ್ಲ. ಆದರೆ, ಕನ್ನಡದ ಬೆಲೆ ತೆತ್ತು ಬೇರೆ ಭಾಷೆಗಳ ಹೇರಿಕೆಯನ್ನು ನಾವು ಒಪ್ಪುವುದಿಲ್ಲ. ಮೆಟ್ರೋ ರೈಲ್ವೆ ನಿಲ್ದಾಣಗಳಲ್ಲಿ ಹಿಂದಿ ಭಾಷೆ ಹೇರಿಕೆ ವಿರುದ್ಧ ಕನ್ನಡ ಸಂಘಟನೆಗಳು ಧ್ವನಿ ಎತ್ತಿದಾಗ ಸ್ಪಂದಿಸಿದ ರಾಜ್ಯ ಸರಕಾರ, ಕೇಂದ್ರ ಸರಕಾರದ ಜತೆ ವ್ಯವಹರಿಸಿ ಅಲ್ಲಿ ಕನ್ನಡ ಮತ್ತು ಇಂಗ್ಲಿಷ್ಗಳ ದ್ವಿ-ಭಾಷಾ ನೀತಿ ಜಾರಿಗೊಳಿಸಿತು ಎಂದು ಅವರು ಹೇಳಿದರು.
ಭಾರತಕ್ಕೆ ಸ್ವಾತಂತ್ರ್ಯ ದೊರೆತಿದ್ದು 1947 ರಲ್ಲಿ. ಭಾರತವು ಗಣರಾಜ್ಯವಾದದ್ದು 1950 ರಲ್ಲಿ. ಅಂತೆಯೇ, ಭಾಷಾವಾರು ಪ್ರಾಂತ್ಯಗಳ ರಚನೆಯಾದದ್ದು 1956ರಲ್ಲಿ. ಕನ್ನಡಿಗರೆಲ್ಲರೂ ಸಾಂಸ್ಕೃತಿಕವಾಗಿ ಹಾಗೂ ಭಾವನಾತ್ಮಕವಾಗಿ ಸಂಪೂರ್ಣವಾಗಿ ಒಂದಾಗಿ 61 ವರ್ಷಗಳು ಪೂರ್ಣಗೊಂಡಿವೆ ಎಂದು ಸಿದ್ದರಾಮಯ್ಯ ತಿಳಿಸಿದರು. ಕನ್ನಡ ಎಂದರೆ ಕೇವಲ ವರ್ಣಮಾಲೆಯಲ್ಲ, ಅದು ಕನ್ನಡದ ಜನ, ನೆಲ, ಜಲ, ಬದುಕು, ಸಾಹಿತ್ಯ, ಸಂಸ್ಕೃತಿ, ಕಲೆ, ಸಂಗೀತ ಎಲ್ಲವನ್ನೂ ಒಳಗೊಂಡ ಕನ್ನಡತನ. ಕರ್ನಾಟಕದ ನೆಲದಲ್ಲಿ ವಾಸಿಸುತ್ತಿರುವವರೆಲ್ಲರೂ ಕನ್ನಡಿಗರು. ಇದಕ್ಕಾಗಿಯೇ ಇದು ಕನ್ನಡ ರಾಜ್ಯದ ಉತ್ಸವ. ಕನ್ನಡಿಗರ ಉತ್ಸವ ಎಂದು ಮುಖ್ಯಮಂತ್ರಿ ಹೇಳಿದರು.
ಕನ್ನಡ ಎನ್ನುವುದು ನನಗೆ ರಾಜಕೀಯ ಅಲ್ಲ. ನಾನು ಹುಟ್ಟು ಕನ್ನಡ ಪ್ರೇಮಿ. ಕನ್ನಡ ಕಾವಲು ಸಮಿತಿ ಅಧ್ಯಕ್ಷನಾಗಿ ರಾಜಕೀಯ ಜೀವನ ಪ್ರಾರಂಭಿಸಿದ್ದ ನಾನು ಅಲ್ಲಿಂದ ಇಲ್ಲಿಯವರೆಗೆ ನಾಡು-ನುಡಿ ಬಗ್ಗೆ ರಾಜಿ ಮಾಡಿಕೊಂಡಿಲ್ಲ. ಭಾಷೆ, ನೆಲ, ಜಲಕ್ಕೆ ಸಂಬಂಧಿಸಿದ ಪ್ರಶ್ನೆ ಎದುರಾದಾಗ ನಮ್ಮೆಲ್ಲರದ್ದು ಒಂದೇ ಪಕ್ಷ ಎಂದು ಅವರು ಹೇಳಿದರು.
ಕನ್ನಡ ಅಭಿಜಾತ ಭಾಷೆ. ಜಗತ್ತಿನಲ್ಲಿ ಅತ್ಯುತ್ತಮ ಸಾಹಿತ್ಯ ಸಂಪತ್ತನ್ನು ಹೊಂದಿರುವ ಕೆಲವೆ ಭಾಷೆಗಳಲ್ಲಿ ಕನ್ನಡವೂ ಒಂದು. ಇದಕ್ಕೆ ಎರಡು ಸಾವಿರ ವರ್ಷಗಳಿಗೂ ಹೆಚ್ಚಿನ ಇತಿಹಾಸದೆ. ನಮ್ಮ ಪಕ್ಷ ಅಧಿಕಾರಕ್ಕೆ ಬಂದ ಮೇಲೆ ಕನ್ನಡಕ್ಕೆ ಸಂಬಂಧಿಸಿದಂತೆ ನಾನು ರಾಜಕೀಯ ಲಾಭ-ನಷ್ಟದ ಕಡೆ ಯೋಚನೆ ಮಾಡದೆ ಕನ್ನಡ ಪ್ರೇಮಿಯಾಗಿಯೇ ನಿರ್ಧಾರ ಕೈಗೊಂಡಿದ್ದೇನೆ ಎಂದು ಅವರು ತಿಳಿಸಿದರು.
ರಾಜ್ಯ ಲೋಕಸೇವಾ ಆಯೋಗದ ಪರೀಕ್ಷೆಗಳಲ್ಲಿ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ಶೇ. ಐದರಷ್ಟು ಮೀಸಲಾತಿ, ಖಾಸಗಿ ಕ್ಷೇತ್ರದ ಉದ್ಯಮಗಳಲ್ಲಿಯೂ ಸಿ ಮತ್ತು ಡಿ ವರ್ಗದ ನೌಕರರ ನೇಮಕಾತಿಯಲ್ಲಿ ಕನ್ನಡಿಗರಿಗೆ ನೂರಕ್ಕೆ ನೂರರಷ್ಟು ಉದ್ಯೋಗ ಮೀಸಲಾತಿ, ಸಿಬಿಎಸ್ಇ, ಐಸಿಎಸ್ಇ ಶಾಲೆಗಳು ಸೇರಿದಂತೆ ಎಲ್ಲ ಇಂಗ್ಲಿಷ್ ಮಾಧ್ಯಮದ ಶಾಲೆಗಳಲ್ಲಿ ಒಂದನೆ ತರಗತಿಯಿಂದಲೆ ಕನ್ನಡ ಭಾಷೆ ಕಲಿಕೆ ಕಡ್ಡಾಯಗೊಳಿಸುವ ಭಾಷಾ ನೀತಿ ಜಾರಿ, ಗ್ರಾಮೀಣ ಬ್ಯಾಂಕುಗಳ ನೇಮಕಾತಿ ಪರೀಕ್ಷೆಗಳನ್ನು ಕನ್ನಡದಲ್ಲಿಯೇ ನಡೆಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಸಿದ್ದರಾಮಯ್ಯ ಹೇಳಿದರು.
ವೈಜ್ಞಾನಿಕ-ಜನಪರವಾದ ಭಾಷಾ ನೀತಿ ಅಗತ್ಯ
ಈವರೆಗಿನ ಕನ್ನಡದ ಅಭಿವೃದ್ಧಿ ಎದುರಿಸಿದ ತೊಡಕುಗಳು, ಮುಂದಿರುವ ಸವಾಲುಗಳು ಹಾಗೂ ಮುಂದೆ ಆಗಬೇಕಾಗಿರುವ ಕೆಲಸಗಳನ್ನು ಗಮನದಲ್ಲಿಟ್ಟುಕೊಂಡು ವೈಜ್ಞಾನಿಕವಾದ ಮತ್ತು ಜನಪರವಾದ ಭಾಷಾ ನೀತಿಯೊಂದನ್ನು ರೂಪಿಸುವ ಅಗತ್ಯ ಇದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಪಾದಿಸಿದ್ದಾರೆ.
ಬುಧವಾರ 62ನೆ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಆಕಾಶವಾಣಿಯಲ್ಲಿ ರಾಜ್ಯದ ಜನತೆಯನ್ನುದ್ದೇಶಿಸಿ ಸಂದೇಶ ನೀಡಿದ ಮುಖ್ಯಮಂತ್ರಿ, ಬದಲಾಗುತ್ತಿರುವ ಕಾಲಮಾನ ಹಾಗೂ ಬದಲಾಗುತ್ತಿರುವ ಅಗತ್ಯಗಳನ್ನು ನೆನಪಲ್ಲಿಟ್ಟುಕೊಂಡು ಈ ನೀತಿಯನ್ನು ರೂಪಿಸಬೇಕಾಗುತ್ತದೆ ಎಂದರು.
ರಾಜ್ಯ ಸರಕಾರ ತನ್ನ ಆಡಳಿತದಲ್ಲಿ ಕನ್ನಡವನ್ನು ಬಳಸುವುದಕ್ಕೆ ಬದ್ಧವಾಗಿದೆ. ಮಂತ್ರಿಮಂಡಲದ ನಿರ್ಣಯಗಳು, ಮಂತ್ರಿಗಳ ಟಿಪ್ಪಣಿಗಳು, ವಿಧಾನಸಭೆಯ ಮುಂದೆ ಬರುವ ವಿಧೇಯಕಗಳು ಕನ್ನಡದಲ್ಲೆ ಇದ್ದುಬಿಟ್ಟರೆ ಕನ್ನಡ ಅನಿವಾರ್ಯವಾಗಿ ಆಡಳಿತದಲ್ಲಿ ನೆಲೆಗೊಳ್ಳುವಂತಾಗುತ್ತದೆ ಎಂದು ಮುಖ್ಯಮಂತ್ರಿ ಹೇಳಿದರು.
ಕನ್ನಡವನ್ನು ಉಳಿಸಿ ಬೆಳೆಸುವುದು ಚುನಾಯಿತ ಸರಕಾರದ ಕರ್ತವ್ಯ. ಇದು ಸಾಧ್ಯವಾಗಬೇಕಾದರೆ ಕನ್ನಡಿಗರ ಸಹಕಾರ ಅಗತ್ಯ. ಭಾಷೆ ಬೆಳೆಯಬೇಕಾದರೆ ಅದನ್ನು ಬಳಸಬೇಕಾಗುತ್ತದೆ. ಕನ್ನಡಿಗರೆಲ್ಲರೂ ದಿನನಿತ್ಯದ ವ್ಯವಹಾರದಲ್ಲಿ ಕನ್ನಡವನ್ನು ಕಡ್ಡಾಯವಾಗಿ ಬಳಸುತ್ತೇವೆ ಎಂದು ಸಂಕಲ್ಪಮಾಡಿದರೆ ಕನ್ನಡದ ಸ್ಥಾನಮಾನ ಅಜರಾಮರವಾಗಿ ಉಳಿಯಲಿದೆ ಎಂದು ಮುಖ್ಯಮಂತ್ರಿ ವಿಶ್ವಾಸ ವ್ಯಕ್ತಪಡಿಸಿದರು.
ನಮ್ಮ ಸರಕಾರವು ರಾಜ್ಯ ಧ್ವಜ(ಕನ್ನಡ ಧ್ವಜ) ಬೇಕೆಂಬ ಜನಾಭಿಪ್ರಾಯದ ಪರವಾಗಿ ಇದೆ. ಈ ಬೇಡಿಕೆಯನ್ನು ಮನ್ನಿಸಿ ಅದರ ಪರಿಶೀಲನೆಗಾಗಿ ತಜ್ಞರ ಸಮಿತಿಯನ್ನು ರಚಿಸಿದೆ. ಶೀಘ್ರದಲ್ಲಿಯೆ ಆ ಬಗ್ಗೆ ಅಧಿಕೃತ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸಿದ್ದರಾಮಯ್ಯ ತಿಳಿಸಿದರು.
ಪ್ರಾದೇಶಿಕ ಭಾಷೆಗಳಿಗೆ ಆತಂಕ: ಇಂದು ಕನ್ನಡ ಭಾಷೆ ಅಷ್ಟೇ ಅಲ್ಲ, ಎಲ್ಲ ಪ್ರಾದೇಶಿಕ ಭಾಷೆಗಳು ಬಹುದೊಡ್ಡ ಆತಂಕಗಳನ್ನು ಎದುರಿಸುತ್ತಿವೆ. ಇತ್ತೀಚೆಗೆ ಸುಪ್ರೀಂ ಕೋರ್ಟ್ ಮಗು ಯಾವ ಭಾಷೆಯಲ್ಲಿ ಕಲಿಯಬೇಕೆಂಬ ತೀರ್ಮಾನ ಪಾಲಕರಿಗೆ ಸೇರಿದ್ದು ಎಂಬ ತೀರ್ಪು ನೀಡಿದೆ. ಇದು ಕೇವಲ ಕನ್ನಡ ಭಾಷೆಗೆ ಮಾತ್ರವಲ್ಲ ನಮ್ಮ ಇಡೀ ಸಮಾಜದ ರಚನೆಗೆ ಬಂದಿರುವ ಕುತ್ತು ಎನ್ನುವುದನ್ನು ನಾವು ತಿಳಿದುಕೊಳ್ಳಬೇಕು ಎಂದು ಅವರು ಹೇಳಿದರು.
ಸಂವಿಧಾನದ ಆಶಯದಂತೆ ಆರು ವರ್ಷದಿಂದ 14 ವರ್ಷ ವಯೋಮಾನದ ಮಕ್ಕಳಿಗೆ ಆ ಮಕ್ಕಳ ಒಳಿತಿಗಾಗಿ ಅಗತ್ಯವಾದ ಎಲ್ಲ ವಿವೇಚನಾಪೂರ್ವಕ ಕ್ರಮಗಳನ್ನು ಕೈಗೊಳ್ಳುವ ನಿಟ್ಟಿನಲ್ಲಿ ಸೂಕ್ತ ಕಾನೂನು ರೂಪಿಸಿ ಉಚಿತ ಹಾಗೂ ಕಡ್ಡಾಯ ಶಿಕ್ಷಣವನ್ನು ನೀಡಬೇಕಾಗಿರುವುದು ರಾಜ್ಯದ ಜವಾಬ್ದಾರಿಯಾಗಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.
ಮಾತೃ ಭಾಷೆಯಲ್ಲಿಯೆ ಪ್ರಾಥಮಿಕ ಶಿಕ್ಷಣವನ್ನು ಜಾರಿಗೊಳಿಸಲು ರಾಷ್ಟ್ರವ್ಯಾಪಿ ಅಭಿಪ್ರಾಯ ರೂಪಿಸಿ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ತರಬೇಕೆಂದು ಕೇಂದ್ರ ಸರಕಾರಕ್ಕೆ ನಮ್ಮ ಸರಕಾರದ ಒತ್ತಾಯವಾಗಿದೆ. ಈ ನಿಟ್ಟಿನಲ್ಲಿ ಶಿಕ್ಷಣ ತಜ್ಞರು, ಬುದ್ಧಿಜೀವಿಗಳು, ಸಾಹಿತಿಗಳು ಹಾಗೂ ಕಾನೂನು ಪಂಡಿತರಿಂದ ಅಭಿಪ್ರಾಯ ಸಂಗ್ರಹಿಸಲಾಗಿದೆ. ಈ ಹಿನ್ನೆಲೆಯಲ್ಲಿ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳ ಸಭೆಯನ್ನು ಆಯೋಜಿಸಿ ಸಂವಿಧಾನಕ್ಕೆ ಸೂಕ್ತ ತಿದ್ದುಪಡಿ ತರಲು ಪ್ರಧಾನಮಂತ್ರಿಗೆ ಎರಡು ಬಾರಿ ಪತ್ರ ಬರೆದಿದ್ದೇನೆ. ಆದರೆ, ಈವರೆಗೂ ಅವರಿಂದ ಯಾವುದೇ ಸ್ಪಂದನೆ ದೊರೆತಿಲ್ಲ ಎಂದು ಸಿದ್ದರಾಮಯ್ಯ ಬೇಸರ ವ್ಯಕ್ತಪಡಿಸಿದರು.
ಕಲಿಕೆ ಎಂಬುದು ಕಲಿಯುವ ಮಕ್ಕಳ ಆಯ್ಕೆಯಾಗಿಲ್ಲ. ಬದಲಾಗಿ ಪಾಲಕ- ಪೋಷಕರ ಆಯ್ಕೆಯಾಗಿದೆ. ಆಂಗ್ಲ ಭಾಷಾ ಶಾಲೆಗಳಲ್ಲಿ ಕಲಿತರೆ ಮಾತ್ರ ಬದುಕು ಮತ್ತು ಭವಿಷ್ಯ ಎಂಬ ಹುಸಿ ನಂಬಿಕೆ ಪಾಲಕ-ಪೋಷಕರಲ್ಲಿ ಮನೆ ಮಾಡಿರುವುದು ಭಾಷಾ ಮಾಧ್ಯಮದ ಅನುಷ್ಠಾನಕ್ಕೆ ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದು ಅವರು ಹೇಳಿದರು.
ನಮ್ಮ ಸರಕಾರ ಪ್ರಾಥಮಿಕ ಶಾಲೆಗಳಲ್ಲಿ ಆಂಗ್ಲ ಭಾಷೆಯನ್ನು ಒಂದು ವಿಷಯವನ್ನಾಗಿ ಬೋಧಿಸಲು ಐದು ಸಾವಿರ ಶಿಕ್ಷಕರಿಗೆ ದೀರ್ಘಾವಧಿ ತರಬೇತಿ ನೀಡಿ ಸರಕಾರಿ ಶಾಲೆಗಳಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣವನ್ನು ನೀಡಲು ಈಗಾಗಲೇ ಕ್ರಮ ಕೈಗೊಂಡಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.
ಮಧ್ಯಾಹ್ನದ ಬಿಸಿಯೂಟ ಯೋಜನೆಯೊಂದಿಗೆ 40 ಲಕ್ಷಕ್ಕೂ ಹೆಚ್ಚು ಅಂಗನವಾಡಿ ಮಕ್ಕಳೂ ಸೇರಿದಂತೆ 1-10ನೆ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ರಾಜ್ಯದ ಒಂದು ಕೋಟಿಗೂ ಹೆಚ್ಚು ಮಕ್ಕಳಿಗೆ ವಾರಕ್ಕೆ ಐದು ಬಾರಿ ಕುಡಿಯಲು ಹಾಲು ಕೊಡುವ ಕ್ಷೀರ ಭಾಗ್ಯ ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆಯ ಪರಿಣಾಮಕಾರಿ ಅನುಷ್ಠಾನದಿಂದ ಮಕ್ಕಳಲ್ಲಿನ ಪೌಷ್ಠಿಕತೆ ವೃದ್ಧಿಸಿದೆ. ಹಾಜರಾತಿ ಪ್ರಮಾಣದಲ್ಲೂ ಗಣನೀಯ ಏರಿಕೆ ಉಂಟಾಗಿದೆ ಎಂದು ಅವರು ತಿಳಿಸಿದರು.
ಒಂದರಿಂದ ಹತ್ತನೆ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಎಲ್ಲ ಮಕ್ಕಳಿಗೂ ವಿದ್ಯಾ ವಿಕಾಸ ಯೋಜನೆಯಡಿಯಲ್ಲಿ ಕಾಲು ಚೀಲ ಮತ್ತು ಬೂಟುಗಳನ್ನು ಒಳಗೊಂಡಂತೆ ಉಚಿತ ಸಮವಸ್ತ್ರ, ಮಧ್ಯಾಹ್ನದ ಬಿಸಿಯೂಟ, ಪಠ್ಯ ಪುಸ್ತಕಗಳ ವಿತರಣೆ ಮಾಡಲಾಗುತ್ತಿೆ ಎಂದು ಸಿದ್ದರಾಮಯ್ಯ ಹೇಳಿದರು.
ಆಧುನಿಕ ವಿಜ್ಞಾನವನ್ನು ನಮ್ಮ ಭಾಷೆಯಲ್ಲಿ ಕಲಿಸುವುದು ಹಾಗೂ ಕಲಿಯುವುದು ಸಾಧ್ಯ ಇಲ್ಲ ಎನ್ನುವುದು ಅವೈಜ್ಞಾನಿಕ ಅಭಿಪ್ರಾಯ. ಕನ್ನಡ ಭಾಷೆ ಬೆಳೆಯಬೇಕಾದರೆ ಬೇರೆ ಬೇರೆ ಜ್ಞಾನ ಶಿಸ್ತುಗಳಲ್ಲಿ ತೊಡಗಿಸಿಕೊಂಡ ಪಂಡಿತರು, ವಿದ್ವಾಂಸರು ಕನ್ನಡ ಭಾಷೆಯ ಬಗ್ಗೆ ಇಚ್ಛಾಶಕ್ತಿಯನ್ನು ಬೆಳೆಸಿಕೊಳ್ಳಬೇಕು. ಜ್ಞಾನಕ್ಷೇತ್ರಕ್ಕೆ ಸಂಬಂಧಿಸಿದ ಹೊರ ಪರಿಭಾಷೆಯನ್ನು ಕಂಡು ಕೊಳ್ಳಬೇಕು. ಕನ್ನಡದ ಜ್ಞಾನ ಸಂಪತ್ತು, ಕನ್ನಡ ಶಬ್ದ ಸಂಪತ್ತು ಮತ್ತಷ್ಟು ಬೆಳೆಯಬೇಕು ಎಂದು ಅವರು ಆಶಿಸಿದರು.
ವೈದ್ಯಕೀಯ ಕ್ಷೇತ್ರದಲ್ಲಿ ತೊಡಗಿರುವ ಅನೇಕ ವೈದ್ಯರು ಕನ್ನಡದಲ್ಲಿ ಬರೆಯುತ್ತಿದ್ದಾರೆ. ಆದರೆ ತಂತ್ರಜ್ಞರು, ಎಂಜಿನಿಯರ್ಗಳು, ವಕೀಲರು ಈ ವಿಷಯದಲ್ಲಿ ಹೆಚ್ಚಿನ ಆಸಕ್ತಿ ತೋರುತ್ತಿಲ್ಲ. ಕನ್ನಡದಲ್ಲಿ ತಂತ್ರಜ್ಞಾನವನ್ನು ಹೇಳಲಿಕ್ಕೆ ಬರುವುದಿಲ್ಲ ಎನ್ನುವ ಪೂರ್ವ ನಿರ್ಧರಿತ ಅಭಿಪ್ರಾಯದಿಂದ ಅವರು ಹೊರಬರಬೇಕು ಎಂದು ಮುಖ್ಯಮಂತ್ರಿ ಕರೆ ನೀಡಿದರು.







