ಶಾಸಕ ಸುರೇಶ್ಗೌಡ ಅಧಿಕಾರ ದುರುಪಯೋಗ: ಮಾಜಿ ಶಾಸಕ ಗೌರಿಶಂಕರ್ ಆರೋಪ
ಶಾಲಾ ಮಕ್ಕಳಿಂದ ಮತದಾರರಿಗೆ ಬಿಜೆಪಿ ಪ್ರಚಾರಕ್ಕೆ ಕರಪತ್ರ ರವಾನೆ

ತುಮಕೂರು, ನ.2: ಶಾಲೆಯ ಅಭಿವೃದ್ಧಿ ನೆಪದಲ್ಲಿ ತುಮಕೂರು ಗ್ರಾಮಾಂತರ ಶಾಸಕ ಬಿ.ಸುರೇಶ್ಗೌಡ ತಮ್ಮ ಅಧಿಕಾರವನ್ನು ದುರುಪಯೋಗದಿಂದ ಶಾಲಾ ಮಕ್ಕಳನ್ನು ರಾಜಕೀಯ ಪ್ರಚಾರಕ್ಕೆ ಬಳಸಿಕೊಳ್ಳುತ್ತಿದ್ದು, ಜಿಲ್ಲಾಡಳಿತ ಶಾಸಕ ಹಾಗೂ ಶಾಲೆಯ ಶಿಕ್ಷಕರ ವಿರುದ್ಧ ಶಿಸ್ತು ಕ್ರಮ ಜರಗಿಸದಿದ್ದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಜೆಡಿಎಸ್ ಮುಖಂಡ ಮಾಜಿ ಶಾಸಕ ಡಿ.ಸಿ.ಗೌರಿಶಂಕರ್ ಆರೋಪಿಸಿದ್ದಾರೆ.
ತುಮಕೂರು ಗ್ರಾಮಾಂತರ ಕ್ಷೇತ್ರಕ್ಕೆ ಸೇರಿದ ನಾಗವಲ್ಲಿ ಸರಕಾರಿ ಪದವಿ ಪೂರ್ವ ಕಾಲೇಜಿನ ಹೈಸ್ಕೂಲ್ ವಿಭಾಗದ ಮಕ್ಕಳಿಗೆ ಪರೀಕ್ಷೆ ಇದ್ದರೂ ಮಕ್ಕಳ ಕೈಯಿಂದ ಮನೆ ವಿಳಾಸ ಬರೆಸಿದ ಎನವಲ್ಫ್ ಕವರ್ನಲ್ಲ್ಲಿ ಕ್ಷೇತ್ರದ ಮತದಾರರ ವಿಳಾಸಕ್ಕೆ ಬಿಜೆಪಿ ಸಾಧನೆಗಳ ಪ್ರಚಾರಕ್ಕೆ ಕರಪತ್ರವನ್ನು ಕಳುಹಿಸುವ ಮೂಲಕ ಅಧಿಕಾರ ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಮಕ್ಕಳ ಪೋಷಕರೇ ತಮ್ಮ ಬಳಿ ಮಕ್ಕಳಿಗೆ ಆಗುತ್ತಿರುವ ತೊಂದರೆ ಬಗ್ಗೆ ದೂರಿದ ಹಿನ್ನೆಲೆಯಲ್ಲಿ ಗುರುವಾರ ಜೆಡಿಎಸ್ ಕಾರ್ಯಕರ್ತರು ಶಾಲೆಯ ವಿರುದ್ಧ ಪ್ರತಿಭಟನೆ ನಡೆಸಿ ಶಾಲೆಯ ಪ್ರಾಂಶುಪಾಲರು, ಉಪ ಪ್ರಾಂಶುಪಾಲರು ಹಾಗೂ ಶಿಕ್ಷಕ ವೃಂದದ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ, ಜಿಪಂ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ, ಡಿಡಿಪಿಐ ಹಾಗೂ ಇತರ ಅಧಿಕಾರಿಗಳಿಗೆ ಒತ್ತಾಯಿಸಿದ್ದು, ನ.10ರೊಳಗೆ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ತನಿಖೆ ನಡೆಸಿ ಶಿಸ್ತು ಕ್ರಮ ಕೈಗೊಳ್ಳದಿದ್ದಲ್ಲಿ ಕ್ಷೇತ್ರದಾದ್ಯಂತ ಉಗ್ರ ಹೋರಾಟ ನಡೆಸಲಾಗುವುದೆಂದು ಗೌರಿಶಂಕರ್ ಎಂದು ಎಚ್ಚರಿಸಿದರು.
ನಾಗವಲ್ಲಿ ಶಾಲೆಯ 8 ಮತ್ತು 9ನೆ ತರಗತಿಯ ವಿದ್ಯಾರ್ಥಿಗಳಿಗೆ ಪರೀಕ್ಷೆಗಳು ಇದ್ದರೂ ಕಳೆದ ಅ.28ರಂದು ಬೆಳಗ್ಗೆಯಿಂದ ಸಂಜೆಯವರೆಗೆ ಸಾವಿರಾರು ಅಂಚೆ ಕಾರ್ಡ್ಗಳಿಗೆ ಮಕ್ಕಳಿಂದ ಕ್ಷೇತ್ರದ ಮತದಾರರ ಪಟ್ಟಿಯಲ್ಲಿರುವವರ ಹೆಸರು ಬರೆದು ಆ ಕವರೊಳಗೆ ಬಿಜೆಪಿಯ ಸಾಧನೆಗಳನ್ನು ಒಳಗೊಂಡ ಕರಪತ್ರವನ್ನು ತುಂಬಿಸುವ ಕೆಲಸ ಮಾಡಿದ್ದಾರೆ. ಈ ಕೆಲಸ ಮಾಡಿರುವ ಶಿಕ್ಷಕರ ವಿರುದ್ಧ ಮಕ್ಕಳ ಪೋಷಕರು ಹರಿಹಾಯ್ದಾಗ, ಶಾಸಕ ಬಿ.ಸುರೇಶ್ಗೌಡಶಾಲೆಯ ಅಭಿವೃದ್ಧಿಗಾಗಿ ಶ್ರಮಿಸಿದ್ದಾರೆ. ನಾವು ಇಷ್ಟಾದರೂ ಅವರ ಋಣ ತೀರಿಸುವುದು ಬೇಡವೇ ಎಂದು ಶಾಲೆಯ ಉಪ ಪ್ರಾಂಶುಪಾಲರಾದ ಶೈಲಜಾ ಅವರು ಪೋಷಕರಿಗೆ ಉಢಾಪೆಯ ಉತ್ತರ ನೀಡಿದ್ದು, ಇದು ಖಂಡನೀಯ ಕೂಡಲೇ ಉಪ ಪ್ರಾಂಶುಪಾಲರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ನಾಗವಲ್ಲಿ ಶಾಲೆಯ ಉಪ ಪ್ರಾಂಶುಪಾಲರಿಗೆ ಶಾಸಕರಾಗಿ ತಮ್ಮ ಕರ್ತವ್ಯ ನಿಭಾಯಿಸಿರುವ ಬಿ.ಸುರೇಶ್ಗೌಡರ ಋಣ ತೀರಿಸಬೇಕೆಂದಿದ್ದರೆ ತಮ್ಮ ಸರಕಾರಿ ಕೆಲಸಕ್ಕೆ ರಾಜೀನಾಮೆ ನೀಡಿ ಶಾಸಕರ ಮನೆಯ ಕಸ ಗುಡಿಸಲಿ, ಅಡುಗೆ ಮಾಡಲಿ, ಆದರೆ ಮಕ್ಕಳನ್ನು ರಾಜಕೀಯ ಪ್ರಚಾರಕ್ಕೆ ಬಳಸಿಕೊಳ್ಳಲು ಇವರಿಗೆ ಅಧಿಕಾರ ಕೊಟ್ಟವರು ಯಾರು ಎಂದು ಪ್ರಶ್ನಿಸಿದರು.
ಈ ವೇಳೆದ ಗ್ರಾಮಾಂತರ ಕ್ಷೇತ್ರದ ಜೆಡಿಎಸ್ ಮುಖಂಡರು, ಮಹಿಳಾ ಘಟಕದ ಪದಾಧಿಕಾರಿಗಳು ಉಪಸ್ಥಿತರಿದ್ದರು.







