ಚಾರ್ಜ್ಶೀಟ್ನಲ್ಲಿ ದಲಿತ ದೌರ್ಜನ್ಯ ಸೆಕ್ಷನ್ ಸೇರಿಸಲು ಎಸ್ಪಿ ಒಪ್ಪಿಗೆ
ಶಿರಿಯಾರ ಗ್ರಾಪಂ ಮಾಜಿ ಅಧ್ಯಕ್ಷೆಗೆ ಪಿಡಿಒ ವಂಚನೆ ಪ್ರಕರಣ

ಉಡುಪಿ, ನ.3: ಶಿರಿಯಾರ ಗ್ರಾಪಂ ಮಾಜಿ ಅಧ್ಯಕ್ಷೆ ಜ್ಯೋತಿ ಅವರಿಗೆ ವಂಚನೆ ಎಸಗಿರುವ ದಲಿತ ದೌರ್ಜನ್ಯ ಪ್ರಕರಣದಲ್ಲಿ ಪಿಡಿಒ ವಿರುದ್ಧದ ಚಾರ್ಜ್ ಶೀಟ್ನಲ್ಲಿ ದಲಿತ ದೌರ್ಜನ್ಯ ಸೆಕ್ಷನ್ನ್ನು ಕೈಬಿಟ್ಟಿರುವ ಬಗ್ಗೆ ಉಡುಪಿ ಜಿಲ್ಲಾ ಪೊಲೀಸ್ ಕಚೇರಿ ಸಭಾಂಗಣದಲ್ಲಿ ಇಂದು ನಡೆದ ದಲಿತ ಕುಂದು ಕೊರತೆ ಸಭೆಯಲ್ಲಿ ದಲಿತ ಮುಖಂಡರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.
ಇದೊಂದು ವಂಚನೆ ಪ್ರಕರಣವಾಗಿದ್ದು ಇದರಲ್ಲಿ ಯಾವುದೇ ದಲಿತ ದೌರ್ಜನ್ಯ ವಿಚಾರ ಕಂಡುಬಾರದ ಹಿನ್ನೆಲೆಯಲ್ಲಿ ಕೈಬಿಡಲಾಗಿದೆ ಎಂದು ಎಸ್ಪಿ ಹೇಳಿದರು. ಇದಕ್ಕೆ ಒಪ್ಪದ ದಲಿತ ಮುಖಂಡರು, ಪಿಡಿಒ ಅಧ್ಯಕ್ಷರ ನಕಲಿ ಸಹಿ ಬಳಸಿ ವಂಚಿಸುವ ಮೂಲಕ ಮಾನಸಿಕವಾಗಿ ನೋವು ಉಂಟು ಮಾಡಿ ದ್ದಾರೆ. ಆದುದರಿಂದ ಇದು ಕೂಡ ದಲಿತ ದೌರ್ಜನ್ಯವೇ ಆಗಿದೆ ಎಂದು ತಿಳಿಸಿದರು. ಬಳಿಕ ಎಸ್ಪಿ ಮಾತನಾಡಿ, ಪಿಡಿಒ ವಿರುದ್ಧದ ಚಾರ್ಜ್ಶೀಟ್ಗೆ ದಲಿತ ದೌರ್ಜನ್ಯ ಸೆಕ್ಷನ್ ಸೇರಿಸಲಾಗುವುದು ಎಂದರು.
ಮರಳುಗಾರಿಕೆಯಲ್ಲಿ ಎಸ್ಸಿ/ಎಸ್ಟಿಗಳಿಗಿರುವ ಮೀಸಲಾತಿಯನ್ನು ದುರು ಪಯೋಗ ಪಡಿಸಿಕೊಂಡು ದಲಿತರ ಹೆಸರಿನಲ್ಲಿ ಬೇರೆಯವರು ಪರವಾನಿಗೆ ಪಡೆಯುತ್ತಿರುವ ಬಗ್ಗೆ ದಲಿತ ಮುಖಂಡರು ಆರೋಪಿಸಿದರು. ಯಾರಿಗೆಲ್ಲ ಪರವಾನಿಗೆ ಸಿಕ್ಕಿದೆ ಎಂಬುದರ ಬಗ್ಗೆ ಬುಧವಾರದೊಳಗೆ ಮಾಹಿತಿ ಪಡೆದು ಪರಿಶೀಲನೆ ನಡೆಸಲಾಗುವುದು ಎಂದು ಎಸ್ಪಿ ತಿಳಿಸಿದರು.
ಕರ್ಕುಂಜೆಯ ಪೋಸ್ಟ್ಮೆನ್ ರತ್ನಾಕರ್ ಎಂಬವರು ಬೋವಿ ಪ್ರಮಾಣಪತ್ರ ನೀಡುವಂತೆ ಅಲ್ಲಿನ ಗ್ರಾಪಂ ಗ್ರಾಮ ಲೆಕ್ಕಿಗರಿಗೆ ಬೆದರಿಕೆ ಹಾಕುತ್ತಿದ್ದಾರೆ ಎಂದು ಸಭೆಯಲ್ಲಿ ದೂರಲಾಯಿತು. ಬೆದರಿಕೆ ಹಾಕುವವರ ವಿರುದ್ಧ ಗ್ರಾಮ ಲೆಕ್ಕಿಗಗರು ದೂರು ನೀಡಿದರೆ ಕ್ರಮ ಜರಗಿಸಲಾಗುವುದು ಎಂದು ಎಸ್ಪಿ ಹೇಳಿದರು. ಕುಂದಾಪುರ ಹಾಗೂ ಕಾರ್ಕಳ ತಾಲೂಕು ಮಟ್ಟದ ದಲಿತರ ಕುಂದು ಕೊರತೆ ಸಭೆಯನ್ನು ನಡೆಸಲಾಗುವುದು. ಇದರಲ್ಲಿ ಖುದ್ದು ನಾನೆ ಭಾಗವಹಿಸುವುದಾಗಿ ಎಸ್ಪಿ ಹೇಳಿದರು.
ದಲಿತರ ಕಾಲೋನಿಯಲ್ಲಿ ಗ್ಯಾಸ್ ಗೋಡೌನ್ ಬಗ್ಗೆ ಪರಿಶೀಲನೆ ನಡೆಸು ವಂತೆ ಜಿಪಂ ಮುಖ್ಯಕಾರ್ಯನಿರ್ವಹಣಾಧಿಕಾರಿಗಳು ಸೂಚಿಸಿದರೂ ಕೂಡ ಈವರೆಗೆ ಯಾವ ಅಧಿಕಾರಿಗಳು ಕೂಡ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿಲ್ಲ ಎಂಬ ದೂರಿಗೆ ಸ್ಪಂದಿಸಿದ ಎಸ್ಪಿ, ಸಭೆಯಲ್ಲಿದ್ದ ಅಧಿಕಾರಿಗೆ ಸೂಚಿಸಿ ನ.6 ರೊಳಗೆ ಈ ಬಗ್ಗೆ ಪರಿಶೀಲಿಸಿ ವರದಿ ನೀಡುವಂತೆ ಸೂಚನೆ ನೀಡಿದರು.
ಕಲ್ಲು ಮತ್ತು ಮರಳುಗಳನ್ನು ಟರ್ಪಲ್ ಹಾಕದೆ ತೆರೆದುಕೊಂಡು ಸಾಗಿಸುವ ವಾಹನಗಳ ವಿರುದ್ಧ ಕ್ರಮಕ್ಕೆ ದಲಿತ ಮುಖಂಡರು ಒತ್ತಾಯಿಸಿದರು. ಅಂತಹ ವಾಹನಗಳನ್ನು ವಶಪಡಿಸಿಕೊಂಡು ಕ್ರಮ ಜರಗಿಸುವಂತೆ ಎಸ್ಪಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಅಮಾಸೆಬೈಲು ಸಮೀಪದ ಹೆಂಗವಳ್ಳಿ ಎಂಬಲ್ಲಿ ಮಹಿಳೆಯೊಬ್ಬರು ಕೇರಳದ ಜ್ಯೋತಿಷಿಗಳನ್ನು ಕರೆಸಿ ಗ್ರಾಮಸ್ಥರಿಗೆ ವಾಮಾಚಾರ ಮಾಡುವ ಬಗ್ಗೆ ಹೆದರಿ ಸುತ್ತಿದ್ದು, ಅವರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಸಭೆಯಲ್ಲಿ ಆಗ್ರಹಿಸಿದರು. ನೊಂದವರು ಆ ಮಹಿಳೆಯ ವಿರುದ್ಧ ದೂರು ನೀಡಿದರೆ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು. ವಾಮಚಾರವನ್ನು ಯಾರು ಕೂಡ ನಂಬಬಾರದು. ಈ ಬಗ್ಗೆ ಮುಖಂಡರು ಗ್ರಾಮಸ್ಥರಿಗೆ ತಿಳುವಳಿಕೆ ನೀಡುವ ಕೆಲಸ ಮಾಡಬೇಕು ಎಂದು ಎಸ್ಪಿ ತಿಳಿಸಿದರು.
ಬಾಡಿಗೆ ಮನೆ ಖಾಲಿ ಮಾಡಬೇಕೆಂಬ ಉದ್ದೇಶಕ್ಕಾಗಿ ಮನೆ ಮಾಲಿಕ ದಲಿತ ಮಹಿಳೆಯ ವಿರುದ್ಧ ಕಳ್ಳತನದ ಸುಳ್ಳು ದೂರು ನೀಡಿರುವ ಬಗ್ಗೆ ಸಭೆಯಲ್ಲಿ ದೂರಲಾಯಿತು. ಆತ ಮನೆ ಖಾಲಿ ಮಾಡಿದರೆ ಕೇಸು ವಾಪಾಸ್ಸು ತೆಗೆದು ಕೊಳ್ಳುವುದಾಗಿ ಹೇಳಿದ ಆಡಿಯೋ ರೆಕಾರ್ಡ್ ಮಹಿಳೆಯ ಬಳಿ ಇದೆ ಎಂದು ಮುಖಂಡರು ಹೇಳಿದರು. ಆ ಆಡಿಯೋ ಜೊತೆ ದೂರು ನೀಡಿದರೆ ಸುಳ್ಳು ಕೇಸು ದಾಖಲಿಸಿದ ಮಾಲಕನ ವಿರುದ್ಧವೇ ಪ್ರಕರಣ ದಾಖಲಿಸಲು ಅವಕಾಶ ಇದೆ ಎಂದು ಎಸ್ಪಿ ಹೇಳಿದರು.
ಪಡುಬಿದ್ರೆಯ ಕಂಪೆನಿಗಳಿಗೆ ಕೆಲಸಕ್ಕೆ ಬರುವ ಉತ್ತರ ಭಾರತದವರಿಗೆ ಕಂಚಿ ನಡ್ಕದಲ್ಲಿ ಮನೆ ಬಾಡಿಗೆ ನೀಡುತ್ತಿದ್ದು, ಒಂದೇ ಮನೆಯಲ್ಲಿ 30 ಮಂದಿ ವಾಸ ಮಾಡುತ್ತಿದ್ದಾರೆ. ಈ ರೀತಿ ಮನೆ ಬಾಡಿಗೆ ನೀಡುವವರ ವಿರುದ್ಧ ಕ್ರಮ ತೆಗೆದು ಕೊಳ್ಳಬೇಕು ಎಂದು ದಲಿತ ಮುಖಂಡರೊಬ್ಬರು ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಎಸ್ಪಿ, ಕಂಪೆನಿಯ ಅಧಿಕಾರಿಗಳು, ಮನೆ ಮಾಲಕರು ಹಾಗೂ ಕೆಲಸಗಾರರ ಸಭೆ ಕರೆದು ಅವರ ಗುರುತಿನ ಚೀಟಿಯನ್ನು ಪರಿಶೀಲನೆ ಮಾಡಿ, ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.
ಸಭೆಯಲ್ಲಿ ಹೆಚ್ಚುವರಿ ಜಿಲ್ಲಾ ಪೊಲೀಸ್ ಅಧೀಕ್ಷಕ ಕುಮಾರ ಚಂದ್ರ, ಕಾರ್ಕಳ ಸಹಾಯಕ ಎಸ್ಪಿ ಹೃಷಿಕೇಶ್ ಸೋನಾವನೆ, ದಲಿತ ಮುಖಂಡರಾದ ಉದಯ ಕುಮಾರ್ ತಲ್ಲೂರು, ಶ್ಯಾಮರಾಜ್ ಬಿರ್ತಿ, ವಿಶ್ವನಾಥ ಪೇತ್ರಿ, ವಾಸುದೇವ ಮುದ್ದೂರು, ವಕೀಲ ಮಹಾಬಲ ಮೊದಲಾದವರು ಉಪಸ್ಥಿತರಿದ್ದರು.







