ಭ್ರಷ್ಟಾಚಾರ ಆರೋಪ: ನಗರ ಸಭಾಧ್ಯಕ್ಷೆ ವಿರುದ್ಧ ಬಿಜೆಪಿ ಸದಸ್ಯರ ಅಸಮಾಧಾನ

ಮಡಿಕೇರಿ, ನ.3: ಮಡಿಕೇರಿ ನಗರಸಭಾ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ ಈ ಹಿಂದೆ ಭ್ರಷ್ಟಾಚಾರದ ಕುರಿತು ನೀಡಿದ ಪತ್ರಿಕಾ ಹೇಳಿಕೆ ಕುರಿತು ಶುಕ್ರವಾರ ನಡೆದ ನಗರಸಭೆಯ ಸಾಮಾನ್ಯ ಸಭೆಯಲ್ಲಿ ಬಿಜೆಪಿ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಗರಸಭಾ ಸಭಾಂಗಣದಲ್ಲಿ ಕಾವೇರಮ್ಮ ಸೋಮಣ್ಣ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯ ಆರಂಭದಲ್ಲೇ ವಿಷಯ ಪ್ರಸ್ತಾಪಿಸಿದ ಸ್ಥಾಯಿ ಸಮಿತಿಯ ಅಧ್ಯಕ್ಷ ಬಿಜೆಪಿಯ ಕೆ.ಎ್. ರಮೇಶ್ ಹಾಗೂ ಇತರ ಬಿಜೆಪಿ ಸದಸ್ಯರು, ಅಧ್ಯಕ್ಷರನ್ನು ತರಾಟೆಗೆ ತೆಗೆದುಕೊಂಡರು.
ಅಧ್ಯಕ್ಷೆ ಕಾವೇರಮ್ಮ ಸೋಮಣ್ಣಗೆ ಕಾಂಗ್ರೆಸ್ ಸದಸ್ಯರಾದ ಎಚ್.ಎಂ. ನಂದಕುಮಾರ್ ಹಾಗೂ ಪ್ರಕಾಶ್ ಆಚಾರ್ಯ ಬೆಂಬಲ ಸೂಚಿಸಿದರು. ಉಭಯ ಕಡೆಗಳಲ್ಲಿ ಪರಸ್ಪರ ಮಾತಿನ ಚಕಮಕಿ ನಡೆಯಿತು. ನಗರದ ರಸ್ತೆಗಳು ಹದಗೆಟ್ಟಿರುವ ಬಗ್ಗೆ ಬಿಜೆಪಿ ಸದಸ್ಯರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ದಸರಾ ಮುಗಿದರೂ ರಸ್ತೆ ದುರಸ್ತಿ ಆರಂಭಗೊಳ್ಳದಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.
ಈ ಸಂದರ್ಭ ಮಾತನಾಡಿದ ಕಾಂಗ್ರೆಸ್ ಸದಸ್ಯ ನಂದಕುಮಾರ್, ಯುಜಿಡಿ ಯೋಜನೆಯ ಪೈಪ್ ಅಳವಡಿಕೆ ಕಾಮಗಾರಿ ಪೂರ್ಣಗೊಳ್ಳದೆ ರಸ್ತೆ ಡಾಂಬರೀಕರಣ ಅಸಾಧ್ಯ ಎಂದು ಸಮಜಾಯಿಷಿ ನೀಡಿದರು.





