ಕಾರಿಗೆ ಲಾರಿ ಢಿಕ್ಕಿ: ಶ್ರೀ ದಿಂಗಾಲೇಶ್ವರ ಸ್ವಾಮಿ ಸೇರಿ ಚಾಲಕ ಗಾಯ
ಜಗಳೂರು, ನ.4: ಗದಗ ಜಿಲ್ಲೆ ಬಾಲೆಹೂಸೂರಿನ ಶ್ರೀ ದಿಂಗಾಲೇಶ್ವರ ಮಠದ ಶ್ರೀ ದಿಂಗಾಲೇಶ್ವರ ಸ್ವಾಮಿ ಪ್ರಯಾಣಿಸುತ್ತಿದ್ದ ವಾಹನಕ್ಕೆ ಹಿಂದಿನಿಂದ ಲಾರಿಯೊಂದು ಢಿಕ್ಕಿ ಹೊಡೆದ ಪರಿಣಾಮ ಸ್ವಾಮೀಜಿ, ಚಾಲಕ ಗಾಯಗೊಂಡ ಘಟನೆ ಜಗಳೂರು ತಾಲೂಕಿನ ರಾಷ್ಟ್ರೀಯ ಹೆದ್ದಾರಿ-13ರಲ್ಲಿ ಶನಿವಾರ ಬೆಳಗಿನ ಜಾವಾ ನಡೆದಿದೆ.
ಶ್ರೀ ದಿಂಗಾಲೇಶ್ವರ ಸ್ವಾಮೀಜಿ ಬಾಗಲಕೋಟೆಯಿಂದ ತುಮಕೂರಿನಲ್ಲಿ ಶನಿವಾರ ನಡೆಯಲಿದ್ದ ಧರ್ಮ ಸಭೆಯಲ್ಲಿ ಪಾಲ್ಗೊಳ್ಳಲೆಂದು ತೆರಳುತ್ತಿದ್ದಾಗ ಜಗಳೂರು ತಾ. ದೊಣೆಹಳ್ಳಿ- ಕಲ್ಲೇದೇವರಪುರ ಮಧ್ಯೆ ರಾಷ್ಟ್ರೀಯ ಹೆದ್ದಾರಿ-13ರಲ್ಲಿ ಈ ಅಪಘಾತ ಸಂಭವಿಸಿದೆ ಎಂದು ತಿಳಿದು ಬಂದಿದೆ.
ಸ್ವಾಮೀಜಿ ಪ್ರಯಾಣಿಸುತ್ತಿದ್ದ ವಾಹನಕ್ಕೆ ಚಾಲಕನ ಅತೀ ವೇಗ, ಅಜಾಗರೂಕತೆಯ ಚಾಲನೆಯಿಂದ ನುಗ್ಗಿ ಬಂದ ಹರಿಯಾಣ ರಾಜ್ಯದ ಲಾರಿ ಢಿಕ್ಕಿ ಹೊಡೆದಿದ್ದರಿಂದ ಕಾರು ಜಖಂಗೊಂಡಿತದಲ್ಲದೇ, ಅದರಲ್ಲಿದ್ದ ಸ್ವಾಮೀಜಿ, ಚಾಲಕ ಶಿವಪ್ಪ ಪರಸಪ್ಪ ಕಬ್ಬೇರ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಗಾಯಗೊಂಡ ಶ್ರೀ ದಿಂಗಾಲೇಶ್ವರ ಸ್ವಾಮೀಜಿಗೆ ತಕ್ಷಣವೇ ಚಿತ್ರದುರ್ಗದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಈ ಕುರಿತು ಜಗಳೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.