ಬರೀ ಮಾತುಗಳಲ್ಲಿ ಜನರ ದಿಕ್ಕು ತಪ್ಪಿಸುವದನ್ನು ಬಿಟ್ಟು ಕ್ಷೇತ್ರ ಅಭಿವೃದ್ದಿ ಮಾಡಲಿ: ಶಾಸಕ ವೈದ್ಯ

ಭಟ್ಕಳ, ನ. 4: ಕೇವಲ ಬಣ್ಣ ಬಣ್ಣದ ಮಾತುಗಳ ಮೂಲಕ ಜನರ ದಿಕ್ಕು ತಪ್ಪಿಸುತ್ತಿರುವವರು ಕ್ಷೇತ್ರದ ಅಭಿವೃದ್ಧಿ ಮಾಡಲಿ ತೋರಿಸಲಿ ಎಂದು ಭಟ್ಕಳ-ಹೊನ್ನಾವರ ವಿಧಾನಸಭಾ ಕ್ಷೇತ್ರದ ಶಾಸಕ ಮಾಂಕಾಳ್ ಎಸ್. ವೈದ್ಯ ಹೇಳಿದರು.
ಅವರು ಭಟ್ಕಳ ಹೊನ್ನಾವರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು. ನನ್ನ ವಿರುದ್ದ ಹೇಳಿಕೆಗಳನ್ನು ಹಾಗೂ ಭಾಷಣ ಮಾಡುವಾಗ ನನ್ನನ್ನು ಟೀಕಿಸಿ ಭಾಷಣ ಮಾಡುವ ಕೇಂದ್ರ ಸಚಿವರು ಹಾಗೂ ಅವರ ಪಕ್ಷ ಹೊನ್ನಾವರ ತಾಳಗುಪ್ಪ ಹಾಗೂ ಅಂಕೋಲ ಹುಬ್ಬಳ್ಳಿ ರೈಲು ಮಾರ್ಗ ಮಾಡಲಿ ಬರಿ ಮಾತುಗಳಲ್ಲಿ ಜನರ ದಿಕ್ಕು ತಪ್ಪಿಸುವ ಬದಲು ಈ ಎರಡು ಕೆಲಸ ಮಾಡಿ ತೋರಿಸಲಿ ಅವರಿಂದ ಮಾಡಲು ಸಾಧ್ಯವಾಗುವುದಿಲ್ಲ ಎಂದು ಒಪ್ಪಿಕೊಂಡರೆ ನಾನೇ ಆ ಎರಡು ಕೆಲಸ ಮಾಡಿ ತೋರಿಸುತ್ತೇನೆ ಎಂದು ಸವಾಲು ಹಾಕಿದ ಅವರು ಕ್ಷೇತ್ರದ ಅಭಿವೃದ್ಧಿ ಮಾಡಿ ಎಂದು ಸಲಹೆ ನೀಡಿದರು.
ರಾಜ್ಯ ಉಪಾಧ್ಯಕ್ಷರು ನಮ್ಮ ಪಕ್ಷದ ಸಂಘಟನೆಗೆ ನಾವು ಎಷ್ಟರ ಮಟ್ಟಿಗೆ ಕೆಲಸ ಮಾಡುತ್ತಿದ್ದೇವೆ ಎಂದು ಪರಿಶೀಲನೆಗೆ ಬಂದಿದ್ದಾರೆ. ನಾವು ಕೇವಲ ಪಕ್ಷ ಅಂತ ಕುಳಿತು ಕೊಳ್ಳದೇ ಅಥವಾ ಚುನಾವಣೆ ಸಂದರ್ಭದಲ್ಲಿ ಮಾತ್ರ ಪ್ರಚಾರಕ್ಕೆ ಹೋಗುವವರಲ್ಲ. ನಾವು ಹಾಗೂ ನಮ್ಮ ನಾಯಕರು ಕಾರ್ಯಕರ್ತರು ಪಕ್ಷದ ಕೆಲಸಕ್ಕಾಗಿ ಪ್ರತಿದಿನ ದುಡಿಯುತ್ತೇವೆ. ಕಳೆದ ನಾಲ್ಕು ವರ್ಷಗಳಲ್ಲಿ ತಾಲೂಕ್ ಪಂಚಾಯತ್, ಗ್ರಾಮ ಪಂಚಾಯತ್, ಜಿಲ್ಲಾ ಪಂಚಾಯತ್ ಗಳಲ್ಲಿ ನಮ್ಮ ಪಕ್ಷದ ಮುಖಂಡರ ಹಾಗೂ ಕಾರ್ಯಕರ್ತರ ಪರಿಶ್ರಮದಿಂದ ನಾವು ಜಯ ಸಾಧಿಸಿದ್ದೇವೆ. ಅದರಿಂದ ನಾವು ಸಾಮಾನ್ಯ ಜನರ ಕೆಲಸ ಮಾಡಲು ಅನುಕೂಲವಾಗಿದೆ. ಅಷ್ಟೆ ಅಲ್ಲದೇ ಸಂಘ ಸಂಸ್ಥೆ, ಹಾಗೂ ಬ್ಯಾಂಕ್ಗಳಲ್ಲಿ ಕೂಡ ನಾವು ಬೆರೆ ಪಕ್ಷದವರಿಗೆ ಅಧಿಕಾರ ಬಿಟ್ಟುಕೊಟ್ಟಿಲ್ಲ. ನನ್ನ ಕ್ಷೇತ್ರಕ್ಕೆ 1 ಲಕ್ಷದ ಕಾಮಗಾರಿಯಿಂದ 200 ಕೋಟಿಯ ಕಾಮಗಾರಿಯ ಕೆಲಸಗಳನ್ನು ನನ್ನ ಕ್ಷೇತ್ರದಲ್ಲಿ ತಂದಿದ್ದೇನೆ ಇದಕ್ಕೆ ನನಗೆ ಜಿಲ್ಲಾ ಉಸ್ತುವಾರಿ ಸಚಿವರಾದ ಆ.ವಿ.ದೇಶಪಾಂಡೆಯವರು ಸಹಕಾರ ನೀಡಿದ್ದಾರೆ. ಅದರ ಜೊತೆಯಲ್ಲಿ ಎಲ್ಲಾ ಸಚಿವರೂ ಇಡೀ ಸರ್ಕಾರ ನನಗೆ ಸಹಕಾರ ನೀಡಿದೆ. ಮುಖ್ಯಮಂತ್ರಿಗಳ ಬಳಿ ಯಾವುದಾದರೂ ಪತ್ರ ತೆಗೆದುಕೊಂಡು ಹೋದರೂ ಕೂಡ ಕೆಲಸ ಆಗದೇ ವಾಪಾಸ ಬಂದಿರುವ ಉದಾಹರಣೆಗಳಿಲ್ಲ. ನಾನು ಯಾವ ಕೆಲಸ ಮಾಡಿಸಿಕೊಂಡು ಬರಲು ತಯಾರಿದ್ದೇನೆ. ನನ್ನ ಅವಧಿಯಲ್ಲಿ ನಾನು ಒಂದು ದಿನವೂ ಹಾಳು ಮಾಡದೇ ಈ ಕ್ಷೇತ್ರಕ್ಕೆ ಏನು ಕೆಲಸ ಮಾಡಲು ಸಾಧ್ಯವಾಗುತ್ತದೆಯೋ ಅದನ್ನೆಲ್ಲ ನಾನು ಮಾಡಿದ್ದೇನೆ. ಒಂದು ವಾರದಿಂದ ನನ್ನ ಬಗ್ಗೆ ತುಂಬಾ ಬರೆಯುತ್ತಿದ್ದು ನನಗೆ ಒಂದು ಕಡೆಯಿಂದ ಖುಶಿಯೂ ಆಗುತ್ತಿದೆ. ನಾನು ನಮ್ಮ ಕಾರ್ಯಕರ್ತರು ತುಂಬಾ ಶ್ರಮವಹಿಸಿದರೂ ಕೂಡ ಇಷ್ಟೆಲ್ಲ ಪ್ರಚಾರ ಸಿಗುತ್ತಿರಲಿಲ್ಲ. ಅಷ್ಟು ಪ್ರಚಾರ ನೀಡಿದ್ದಾರೆ. ನಾನು ಸುಳ್ಳು ಹೇಳುತ್ತಿದ್ದೇನೆ ಸಾವಿರ ಕೋಟಿ ಅನುದಾನ ನನ್ನ ಕ್ಷೇತ್ರಕ್ಕೆ ತರಲಿಲ್ಲ ಎಂದು ಪತ್ರಿಕೆಯಲ್ಲಿ ಪ್ರಚಾರ ಮಾಡಿದ್ದಾರೆ. ನಾನು ನೇರವಾಗಿ ಹೇಳುತ್ತೇನೆ ನನ್ನ ಅವಧಿಯಲ್ಲಿ ಸಾವಿರ ಕೋಟಿ ಅನುದಾನ ನನ್ನ ಕ್ಷೇತ್ರಕ್ಕೆ ಬಂದಿಲ್ಲವಾದಲ್ಲಿ ನಾನು ರಾಜಕೀಯಕ್ಕೆ ನಿವೃತ್ತಿ ನೀಡುತ್ತೇನೆ, ಅದಕ್ಕೆ ಅವರು ಉತ್ತರಿಸಬೇಕು ಎಂದರು.
ನಾನು ಸಾವಿರ ಕೋಟಿ ಅನುದಾನದ ಮಾಹಿತಿಯನ್ನು ನೀಡುತ್ತೇನೆ. ಅದಕ್ಕೆ ವೇದಿಕೆ ಅವರು ಸಿದ್ದಪಡಿಸ ಬೇಕು ಅವರಿಂದ ವೇದಿಕೆ ಸಿದ್ದಪಡಿಸಲು ಸಾಧ್ಯವಿಲ್ಲ ಎಂದಾದಲ್ಲಿ ನಾನು ವೇದಿಕೆ ಸಿದ್ದಪಡಿಸಿ ಅಂಕಿ ಅಂಶ ನೀಡುತ್ತೇನೆ. ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯಲ್ಲಿ ಇಡೀ 224 ಶಾಸಕರಲ್ಲಿ ನನ್ನ ಕ್ಷೇತ್ರಕ್ಕೆ 130 ಕೋಟಿ ಕೇವಲ ಒಂದು ಇಲಾಖೆಯಿಂದ ಬಂದಿದೆ. ಇನ್ನೂ 20 ಕೋಟಿ ತಂದು 150 ಕೋಟಿ ಮಾಡುತ್ತೇನೆ, ನಾನು ಒಂದು ಕೆಲಸ ಹಿಡಿದುಕೊಂಡರೆ ಬೆಳಿಗ್ಗೆ, ಮದ್ಯಾಹ್ನ, ಸಂಜೆ ಅಂತ ನೋಡದೇ ಕೆಲಸ ಮಾಡಿಸಿಕೊಂಡೆ ಬರುತ್ತೆನೆ. ಬಡ ಅನಾರೋಗ್ಯ ಪೀಡಿತರಿಗೆ ನೀಡುವ ಮುಖ್ಯ ಮಂತ್ರಿ ಪರಿಹಾರ ನಿಧಿ ಸರಿ ಸುಮಾರು 3 ಕೋಟಿ ರೂಪಾಯಿ ನನ್ನ ಕ್ಷೇತ್ರಕ್ಕೆ ನೀಡಿದ್ದು ರಾಜ್ಯದಲ್ಲೇ 2 ನೇ ಸ್ಥಾನದಲ್ಲಿದ್ದೇನೆ. ಪ್ರತಿ ತಿಂಗಳು ಕಡಿಮೆ ಅಂದರೂ 25 ಜನರಿಗೆ ಪರಿಹಾರ ನಿಧಿ ಚೆಕ್ ವಿತರಣೆ ಮಾಡುತ್ತೇನೆ ಎಂದರು.
ಈ ಸಂದರ್ಭದಲ್ಲಿ ಕೆ.ಪಿ.ಸಿ.ಸಿ ಪ್ರಧಾನ ಕಾರ್ಯದರ್ಶಿ ಎಲ್.ಎಂ ಮೂರ್ತಿ, ಕಾರ್ಯದರ್ಶಿ ರಾಜನಂದಿನಿ, ಜಯಶ್ರೀ ಮೊಗೇರ, ಉಲ್ಲಾಸ ನಾಯ್ಕ, ಚಂದ್ರು ಗೌಡ ಉಪಸ್ಥಿತರಿದ್ದರು.







