ಪ್ರತ್ಯೇಕ ಕ್ರೈಸ್ತರ ಅಭಿವೃದ್ಧಿ ನಿಗಮ ಸ್ಥಾಪನೆಗೆ ಒತ್ತಾಯ
ಮಂಗಳೂರು, ನ. 5: ಕೈಸ್ತರಿಗೆ ಪ್ರತ್ಯೇಕ ಅಭಿವೃದ್ಧಿ ನಿಗಮವನ್ನು ಸರಕಾರ ಸ್ಥಾಪಿಸಬೇಕೆಂದು ಕೆಸಿಎಸ್ಡಬ್ಲುಎಯ ಅಧ್ಯಕ್ಷ ಹ್ಯಾರಿ ಡಿಸೋಜ ಒತ್ತಾಯಿಸಿದ್ದಾರೆ.
ಕ್ಯಾಥಲಿಕ್ ಸಭಾ ಮಂಗಳೂರು ಪ್ರದೇಶ್ ಮತ್ತು ಕರ್ನಾಟಕ ಕ್ರಿಸ್ಚಿಯನ್ ಸೋಶಿಯಲ್ ವೇಲ್ಫೇರ್ ಅಸೋಸಿಯೇಶನ್ ವತಿಯಿಂದ ನಗರದ ಲೊಯಲೊ ಸಭಾಂಗಣದಲ್ಲಿ ನಡೆದ ‘ನಮ್ಮ ಪಾಲು-ನಮ್ಮ ಹಕ್ಕು’ ಕೈಸ್ತ ಸಮುದಾಯದ ಸಮಾವೇಶದಲ್ಲಿ ಅವರು ಮಾತನಾಡಿದರು.
ಅಲ್ಪಸಂಖ್ಯಾತ ಇಲಾಖೆಯಲ್ಲಿ 8 ವಿಭಾಗಗಳಿದ್ದು, ಈ ಇಲಾಖೆಗೆ ಸರಕಾರ ಬಿಡುಗಡೆಗೊಳಿಸಿದ ಅನುದಾನದಲ್ಲಿ ಐದು ವಿಭಾಗಗಳ ಅನುದಾನವು ಒಂದೇ ವರ್ಗದ ಪಾಲಾಗುತ್ತಿರುವುದರಿಂದ ಕ್ರೈಸ್ತ ವರ್ಗಕ್ಕೆ ಅನ್ಯಾಯವಾಗುತ್ತಿದೆ. ಈ ನಿಟ್ಟಿನಲ್ಲಿ ಕ್ರೈಸ್ತರಿಗೆ ಪ್ರತೇಯಕ ಅಭಿವೃದ್ಧಿ ನಿಗಮದ ಸಹಿತ ಅವರ ಸ್ಥಿತಿಗತಿಯನ್ನು ಅರಿಯಲು ಪ್ರತ್ಯೇಕ ಆಯೋಗವನ್ನು ರಚಿಸಬೇಕೆಂದೂ ಹ್ಯಾರಿ ಡಿಸೋಜ ಒತ್ತಾಯಿಸಿದರು.
ಕ್ರೈಸ್ತ ಸಮುದಾಯದ ಬಗ್ಗೆ ಅಲ್ಪಸಂಖ್ಯಾತ ಇಲಾಖೆ ವಹಿಸುತ್ತಿರುವ ನಿರ್ಲಕ್ಷದ ಬಗ್ಗೆ ಎಲ್ಲ ಕ್ರೈಸ್ತರು ಧ್ವನಿ ಎತ್ತುವಂತಾಗಬೇಕು. ನಮ್ಮ ಪಾಲಿನ ಹಕ್ಕನ್ನು ಪಡೆಯುವಂತಾಗಬೇಕು. ಅಲ್ಪಸಂಖ್ಯಾತ ಇಲಾಖೆಯಲ್ಲಿ ಕ್ರೈಸ್ತರಿಗೆ ಇವರು ವಿವಿಧ ಯೋಜನೆಗಳ ಬಗ್ಗೆ ಸಮುದಾಯ ತಿಳಿದುಕೊಳ್ಳಬೇಕು. ಆ ಯೋಜನೆಗಳನ್ನು ಪಡೆಯಲು ಅನುಸರಿಸಬೇಕಾದ ವಿಧಾನದ ಬಗ್ಗೆ ಅರಿತುಕೊಳ್ಳಬೇಕು ಎಂದವರು ಕರೆ ನೀಡಿದರು.
ಪುತ್ತೂರು ಡಯಾಸಿಸ್ ಚಾನ್ಸಲರ್ ರೆ.ಫಾ.ಫಿಲಿಪ್ನೆಲಿವಿಲ ಸಮಾವೇಶದ ಅಧ್ಯಕ್ಷತೆ ವಹಿಸಿದ್ದರು. ಮಂಗಳೂರು ಕ್ಯಾಥಲಿಕ್ ಸಭಾದ ಆಧ್ಯಾತ್ಮಿಕ ನಿರ್ದೇಶಕ ರೆ.ಫಾ,ಮ್ಯಾಥಿವ್ ವಾಝ್, ಮಿಲಾಗ್ರಿಸ್ನ ಪ್ಯಾರಿಶ್ ಪ್ರೀಸ್ಟ್ ರೆ.ಫಾ.ವೆಲೇರಿಯನ್ ಡಿಸೋಜ, ಸೈಂಟ್ ಅಲೋಶಿಯಸ್ ಪಿಯು ಕಾಲೇಜಿನ ಪ್ರಾಂಶುಪಾಲ ರೆ.ಫಾ.ಮೆಲ್ವಿನ್ ಮೆಂಡೊನ್ಸಾ ಎಸ್.ಜೆ., ಸಿಆರ್ಐ ಮಂಗಳೂರು ಇದರ ಕಾರ್ಯದರ್ಶಿ ಸಿಸ್ಟರ್ ಎಡ್ನ ಫುರ್ಟಾಡೊ ಎ.ಸಿ., ಬೆಂಗಳೂರಿನ ಎಫ್ಕೆಸಿಎ ಅಧ್ಯಕ್ಷ ಎಡ್ವರ್ಡ್ ಡಿಸೋಜ, ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ರಾಜ್ಯ ಪ್ರಧಾನ ಕಾರ್ಯದರ್ಶಿ ರಶ್ಮಿ ಡಿಸೋಜ, ಜೆಡಿಎಸ್ ಮುಖಂಡ ಸುಶೀಲ್ ನರೋನ್ಹಾ, ಸಮಾಜವಾದಿ ಪಕ್ಷದ ರಾಜ್ಯಾಧ್ಯಕ್ಷ ರಾಬಿನ್ ಮ್ಯಾಥ್ಯು, ಆಪ್ ಜಿಲ್ಲಾ ಮುಖಂಡ ಜೆರಾಲ್ಡ್ ಟವರ್ಸ್, ಪ್ರಕಾಶ್ ಜತ್ತಣ್ಣ ಮೊದಲಾದವರು ಉಪಸ್ಥಿತರಿದ್ದರು.
ಕ್ಯಾಥಲಿಕ್ ಸಭಾದ ಅಧ್ಯಕ್ಷ ಅನಿಲ್ ಲೋಬೊ ಸ್ವಾಗತಿಸಿದರು.







