ಇಟ್ಟಿಗೆ ಕಾರ್ಖಾನೆಯಿಂದ ಇಬ್ಬರು ಬಾಲ ಕಾರ್ಮಿಕರ ರಕ್ಷಣೆ
ಕೋಲಾರ, ನ.05: (ಕರ್ನಾಟಕ ವಾರ್ತೆ) :ಮಾಲೂರು ತಾಲ್ಲೂಕಿನ ಟೇಕಲ್ ಹೋಬಳಿಯ ಕೊಂಡಶೆಟ್ಟಹಳ್ಳಿ, ಗ್ರಾಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಂ.ಟಿ.ಬಿ ಬ್ರಿಕ್ಸ್ ಘಟಕದಲ್ಲಿ ದಿನಾಂಕ 03-11-2017ರಂದು ಕಾರ್ಮಿಕ ಇಲಾಖೆಯಿಂದ ಹಠಾತ್ ಭೇಟಿ ನೀಡಿ ಇಬ್ಬರು ಬಾಲ ಕಾರ್ಮಿಕರನ್ನು ರಕ್ಷಿಸಲಾಗಿದೆ.
ಮಾನ್ಯ ಜಿಲ್ಲಾಧಿಕಾರಿಗಳ ನಿರ್ದೇಶನದಂತೆ, ಅಂದು ಮಧ್ಯಾಹ್ನ 2.00 ಗಂಟೆಗೆ ಸ್ಥಳಕ್ಕೆ ಭೇಟಿ ನೀಡಿದ ಶ್ರೀ.ಹೆಚ್.ವಿ.ಗಿರೀಷ್, ತಹಶಿಲ್ದಾರ್ ಮಾಲೂರು ತಾಲ್ಲೂಕು, ಶ್ರೀ.ಲಕ್ಷ್ಮೀನಾರಾಯಣ, ಯೋಜನಾ ನಿರ್ದೇಶಕರು ಕೋಲಾರ ಜಿಲ್ಲಾ, ಬಾಲಕಾರ್ಮಿಕರ ಯೋಜನಾ ಸಂಘ, ಕೋಲಾರ, ಶ್ರಿ.ಲೋಕೇಶ್, ಕಾರ್ಮಿಕ ನಿರೀಕ್ಷಕರು, ಮಾಲೂರು, ಶ್ರೀ.ಶ್ರೀನಿವಾಸ್ ಕಂದಾಯ ನಿರೀಕ್ಷಕರು ಟೇಕಲ್, ಹಾಗೂ ಸ್ಥಳೀಯ ಗ್ರಾಮ ಲೆಕ್ಕಾಧಿಕಾರಿ, ಡಿ.ಕೆ.ಅಶ್ವತ್ಥಗೌಡ ಅರಕ್ಷಕ ಸಿಬ್ಬಂದಿ, ಇವರುಗಳ ಸಹಯೋಗದೊಂದಿಗೆ ಘಟಕದ ತಪಾಸಣೆ ನಡೆಸಿ ಮಾಲತಿ ಬಲೈರ್ಸಿಂಗ್ (15) ಮತ್ತು ಹೆರದ್ ಬಲೈರ್ಸಿಂಗ್ (13) ಎಂಬ ಇಬ್ಬರು ಮಕ್ಕಳು ಇಟ್ಟಿಗೆ ತಯಾರಿಕೆಯ ಸಹಾಯಕರಾಗಿ ಕಾರ್ಯನಿರ್ವಹಿಸುತ್ತಿದ್ದು ಕಂಡುಬಂದಿದ್ದು, ಈ ಇಬ್ಬರನ್ನೂ ದುಡಿಮೆಯಿಂದ ಬಿಡುಗಡೆಗೊಳಿಸಿ, ಮಾಲೀಕರ ವಿರುದ್ದ ಬಾಲಕಾರ್ಮಿಕ ಕಾಯ್ದೆ ಉಲ್ಲಂಘನೆಯಡಿ ಎಫ್.ಐ.ಆರ್ ದಾಖಲಿಸಲು ಕ್ರಮವಹಿಸಲಾಗಿದೆ.
ಈ ಮಕ್ಕಳು ಮತ್ತು ಅವರ ತಾಯಿಯನ್ನು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಮುಂದೆ ಹಾಜರು ಪಡಿಸಿ ಅವರ ನಿರ್ದೇಶನದಂತೆ, ಈ ಕುಟುಂಬದವರನ್ನು ಅವರ ಸ್ವಂತ ಸ್ಥಳ ಓಡಿಶಾ ರಾಜ್ಯದ ಕಂದಮಲ್ ಜಿಲ್ಲೆಯ ಕೊಂಡಿಯ ಗುಡಿ ಗ್ರಾಮಕ್ಕೆ ದಿ:04-11-2017 ರಂದು ಬೆಳಗ್ಗೆ 9.00 ಗಂಟೆಗೆ ರೈಲ್ವೆ ಮುಖಾಂತರ ಕಳುಹಿಸಕೊಡಲಾಗಿದೆ ಎಂದು ಜಿ.ಟಿ.ನಿರಂಜನ, ಕೋಲಾರ ಜಿಲ್ಲಾ ಕಾರ್ಮಿಕ ಅಧಿಕಾರಿ, ತಿಳಿಸಿದ್ದಾರೆ.