ಹಾದಿಯಾಳ ಮಾನವಹಕ್ಕುಗಳಿಗೆ ರಕ್ಷಣೆಯಿದೆಯೇ ಎನ್ನುವುದನ್ನು ದೃಢಪಡಿಸಿ: ಮಾನವಹಕ್ಕು ಆಯೋಗ

ತಿರುವನಂತಪುರಂ, ನ.6: ವೈಕಂ ನಿವಾಸಿ ಹಾದಿಯಾಳ ಮಾನವಹಕ್ಕುಗಳಿಗೆ ರಕ್ಷಣೆಯಿದೆಯೇ ಎನ್ನುವುದನ್ನು ಕೋಟ್ಟಯಂ ಜಿಲ್ಲಾ ಪೊಲೀಸ್ ಅಧೀಕ್ಷಕರು ದೃಢಪಡಿಸಬೇಕೆಂದು ಕೇರಳ ಮಾನವಹಕ್ಕುಗಳ ಆಯೋಗ ಆದೇಶಿಸಿದೆ. ಸುಪ್ರೀಂಕೋರ್ಟ್ ಆದೇಶದ ಪ್ರಕಾರ ಮುಂದಿನ ಕ್ರಮ ಕೈಗೊಳ್ಳುವ ಹೊಣೆಗಾರಿಕೆ ಸರಕಾರದ್ದಾಗಿದೆ ಎಂದು ಆಯೋಗದ ಸದಸ್ಯ ಕೆ. ಮೋಹನ್ ಕುಮಾರ್ ಆದೇಶದಲ್ಲಿ ಸೂಚಿಸಿದ್ದಾರೆ.
ಈ ವಿಷಯದಲ್ಲಿ ಕೋಟ್ಟಯಂ ಜಿಲ್ಲಾ ಪೊಲೀಸ್ ಅಧೀಕ್ಷಕರು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ. ಇದೇ ವೇಳೆ ಹಾದಿಯಾ ಗೃಹಬಂಧನದಲ್ಲಿದ್ದಾಳೆ ಎನ್ನುವುದು ಸರಿಯಲ್ಲ ಎಂದು ಹಾದಿಯಾಳ ತಂದೆ ಕೆಎಂ ಅಶೋಕನ್ ಮಾನವಹಕ್ಕು ಆಯೋಗಕ್ಕೆ ಸಲ್ಲಿಸಿದ ಸ್ಪಷ್ಟೀಕರಣದಲ್ಲಿ ವಿವರಿಸಿದ್ದಾರೆ.
ಹಾದಿಯಾಳ ಮಾನವಹಕ್ಕುಗಳು ಉಲ್ಲಂಘಿಸಲ್ಪಟ್ಟಿಲ್ಲ ಎಂದು ಅವರು ಸಲ್ಲಿಸಿದ ಅಫಿದಾವಿತ್ನಲ್ಲಿ ತಿಳಿಸಲಾಗಿದೆ. ಮುನವ್ವರಲಿ ಶಿಹಾಬ್ ತಂಙಳ್, ಶಂನಾದ್ ಬದರ್, ಅಮ್ಮು ಥಾಮಸ್ ಎಂಬವರು ಸಲ್ಲಿಸಿದ್ದ ದೂರಿನ ಹಿನ್ನೆಲೆಯಲ್ಲಿ ಮಾನವಹಕ್ಕು ಆಯೋಗ ಕೋಟ್ಟಯಂ ಪೊಲೀಸ್ ಅಧೀಕ್ಷರಿಗೆ ಹಾದಿಯಾಳ ಮಾನವಹಕ್ಕು ದೃಢಪಡಿಸುವಂತೆ ಆದೇಶ ಹೊರಡಿಸಿದೆ.





