ಜ.19ರಿಂದ ಸಾವಯವ-ಸಿರಿಧಾನ್ಯಗಳ ಅಂತಾರಾಷ್ಟ್ರೀಯ ವಾಣಿಜ್ಯ ಮೇಳ: ಕೃಷ್ಣಭೈರೇಗೌಡ

ಬೆಂಗಳೂರು, ನ.6: ಸಾವಯವ ಮತ್ತು ಸಿರಿಧಾನ್ಯ ಅಂತಾರಾಷ್ಟ್ರೀಯ ವಾಣಿಜ್ಯ ಮೇಳ ಜನವರಿ 19ರಿಂದ ಮೂರು ದಿನಗಳ ಕಾಲ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಲಿದೆ ಎಂದು ಕೃಷಿ ಸಚಿವ ಕೃಷ್ಣ ಭೈರೇಗೌಡ ತಿಳಿಸಿದ್ದಾರೆ.
ಸೋಮವಾರ ಖಾಸಗಿ ಹೊಟೇಲ್ ನಲ್ಲಿ ಸಾವಯವ ಮತ್ತು ಸಿರಿಧಾನ್ಯಗಳು-2018 ಅಂತಾರಾಷ್ಟ್ರೀಯ ವಾಣಿಜ್ಯ ಮೇಳದ ನೂತನ ವೆಬ್ಸೈಟ್ ಮತ್ತು ಲೋಗೋ ಅನಾವರಣ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
2016ರ ಎಪ್ರಿಲ್ ನಲ್ಲಿ ರಾಷ್ಟ್ರೀಯ ಬೃಹತ್ ಸಾವಯವ ಸಿರಿಧಾನ್ಯಗಳ ಮೇಳಕ್ಕೆ ವ್ಯಾಪಕ ಉತ್ತಮ ಪ್ರತಿಕ್ರಿಯೆ ದೊರೆತಿರುವ ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ಮಟ್ಟದ ಮೇಳ ಆಯೋಜಿಸಲಾಗುತ್ತಿದೆ. ಅಲ್ಲದೆ, ರಾಜ್ಯ ಸರಕಾರವು ಸಾವಯವ ಹಾಗೂ ಸಿರಿಧಾನ್ಯಗಳ ರಾಜಧಾನಿಯಾಗಿ ರೂಪುಗೊಳ್ಳುತ್ತಿದೆ ಎಂದು ನುಡಿದರು.
ಸಮ್ಮೇಳನದ ಯಶಸ್ವಿ, ಪ್ರಚಾರಕ್ಕಾಗಿ ಈಗಾಗಲೇ ದಕ್ಷಿಣ ಭಾರತದ ಅತಿದೊಡ್ಡ ನಗರಗಲ್ಲಿ ರೋಡ್ ಶೋಗಳನ್ನು ನಡೆಸಲಾಗಿದ್ದು, ಮುಂಬರುವ ದಿನಗಳಲ್ಲಿ ದೇಶದ ರಾಜಧಾನಿ ಹೊಸದಿಲ್ಲಿ ಸೇರಿ ವಿವಿಧ ಕಡೆ ರೋಡ್ ಶೋಗಳನ್ನು ನಡೆಸಲು ಉದ್ದೇಶಿಸಲಾಗಿದೆ. ಇನ್ನು ಅಂತಾರಾಷ್ಟ್ರೀಯ ಮೇಳದ ಬಗ್ಗೆ ಗಮನ ಸೆಳೆಯಲು ಅಮೇರಿಕಾ, ಜಪಾನ್ ಸೇರಿ ಇತರೆ ದೇಶಗಳ ಉದ್ದಿಮೆದಾರರನ್ನು ಆಹ್ವಾನಿಸಲಾಗಿದೆ ಎಂದು ವಿವರಿಸಿದರು.
ನಮ್ಮ ಸಾವಯವ ಪದ್ಧತಿಯೂ ರಾಷ್ಟ್ರೀಯ-ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚು ಜನಪ್ರಿಯವಾಗಿದೆ. ಜನವರಿ ನಡೆಯುವ ಮೇಳದಲ್ಲಿ, ಕೃಷಿಕರು, ಮಾರಾಟಗಾರರು, ಖರೀದಿದಾರರು ಹಾಗೂ ಸಾವಯವ ಉತ್ಪನ್ನಗಳನ್ನು ಸಂಸ್ಕರಿಸುವವರು ಭಾಗವಹಿಸಲಿದ್ದು, ಕೃಷಿ ಸಲಕರಣೆಗಳು ಸೇರಿ ಸಾವಯವ ಉತ್ಪನ್ನಗಳ ಪ್ರದರ್ಶನ ಏರ್ಪಡಿಸಲಾಗಿದೆ ಎಂದು ತಿಳಿಸಿದರು.
ಸಾವಯವ ಮತ್ತು ಸಿರಿಧಾನ್ಯಗಳ ಉತ್ಪಾದನೆಯಲ್ಲಿ ಕರ್ನಾಟಕ ದೇಶದಲ್ಲಿಯೇ ಅಗ್ರಸ್ಥಾನದಲ್ಲಿದೆ ಎಂದ ಅವರು, ನಮ್ಮ ಸರಕಾರ ಮೂರು ವರ್ಷಗಳಿಂದ ಸಾವಯವ ಪದಾರ್ಥಗಳ ಉತ್ಪಾದನೆಗಾಗಿ ಹೆಚ್ಚಿನ ಆದ್ಯತೆ ನೀಡಿ ಕೆಲಸ ಮಾಡುತ್ತಿದೆ. ಬೆಂಗಳೂರು ನಗರ ಒಂದರಲ್ಲೆ ಸುಮಾರು 250ಕ್ಕೂ ಹೆಚ್ಚು ಸಿರಿಧಾನ್ಯಗಳ ಮಳಿಗೆಗಳಿವೆ. ಸಾವಯವ ಹಾಗೂ ಸಿರಿಧಾನ್ಯಗಳಿಗೆ ದೇಶದಲ್ಲೇ ಬೆಂಗಳೂರು ಅತಿ ದೊಡ್ಡ ಮಾರುಕಟ್ಟೆ ಆಗಿದೆ ಎಂದರು.
ರೈತರು ಬೆಳೆಯುವ ಸಾವಯವ ಕೃಷಿ ಪದಾರ್ಥಗಳಿಗೆ ಉತ್ತಮ ಬೆಲೆಸಿಗಬೇಕು. ಅಂತಹದ್ದೊಂದು ಕೆಲಸವನ್ನು ಸರಕಾರ ಮಾಡಲು ಮುಂದಾಗಿದ್ದು, ಆ ನಿಟ್ಟಿನಲ್ಲಿ ಉದ್ದಿಮೆದಾರರಿಗೆ ಹಾಗೂ ಗ್ರಾಹಕರಲ್ಲಿ ಸಿರಿ ಧಾನ್ಯಗಳ ಬಗ್ಗೆ ಅರಿವು ಮೂಡಿಸುವಂತ ಕೆಲಸ ಮಾಡಲಾಗುತ್ತಿದೆ. ರೈತರು ಬೆಳೆದ ಬೆಳೆಗಳಿಗೆ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಸಿಕ್ಕರೆ ಸಾವಯವ ಕೃಷಿ ಚಟುವಟಿಕೆಗಳಲ್ಲಿ ಇನ್ನು ಹೆಚ್ಚಿನ ರೈತರು ತಮ್ಮನ್ನು ತಾವು ತೊಡಗಿಸಿಕೊಳ್ಳಲಿದ್ದಾರೆ ಎಂದು ತಿಳಿಸಿದರು.
ಅಂತಾರಾಷ್ಟ್ರೀಯ ಮಟ್ಟದಲ್ಲೂ ಇತ್ತೀಚೆಗೆ ಸಾವಯವ-ಸಿರಿಧಾನ್ಯಗಳ ಬೇಡಿಕೆ ಹೆಚ್ಚಾಗುತ್ತಿದೆ. ಇದನ್ನು ಮನಗಂಡು ಅಂತಾರಾಷ್ಟ್ರೀಯ ಮಾರುಕಟ್ಟೆಗೂ ಹೆಜ್ಜೆ ಇಡಲು ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ. ಸಿರಿಧಾನ್ಯ ನಮ್ಮ ಸಂಪ್ರಾದಾಯಿಕ ಆಹಾರ ಪದ್ಧತಿ. ಅಲ್ಲದೇ, ಪೌಷ್ಠಿಕ ಅಂಶವುಳ್ಳ ಆಹಾರ, ಇಂತಹ ಆಹಾರ ಸೇವಿಸುವುದರ ಮೂಲಕ ಹಲವು ರೋಗಗಳಿಂದ ದೂರವಿರಬಹುದು ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಸಾವಯವ ಕೃಷಿ ಮಿಷಿನ್ ಅಧ್ಯಕ್ಷ ಸೋಮಶೇಖರ್, ಕೃಷಿ ಇಲಾಖೆಯ ಕಾರ್ಯದರ್ಶಿ ಮಹೇಶ್ವರ ರಾವ್, ಆಯುಕ್ತ ಸತೀಶ್ ಸೇರಿ ಪ್ರಮುಖರಿದ್ದರು.







