ಸುಂಟಿಕೊಪ್ಪ: ಸರ್ವ ಧರ್ಮೀಯರ ಶಾಂತಿ ಸಭೆ

ಸುಂಟಿಕೊಪ್ಪ, ನ.6: ಟಿಪ್ಪು ಜಯಂತಿಯು ಸರ್ಕಾರಿ ಕಾರ್ಯಕ್ರಮವಾಗಿದ್ದು, ಅದನ್ನು ಹೊರತುಪಡಿಸಿ ಖಾಸಗಿ ಕಾರ್ಯಕ್ರಮವಾಗಿ ಯಾರಾದರೂ ಆಚರಿಸಿದಲ್ಲಿ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಸುಂಟಿಕೊಪ್ಪ ಪೊಲೀಸ್ ಠಾಣಾಧಿಕಾರಿ ಜಯರಾಂ ಹೇಳಿದ್ದಾರೆ.
ಸುಂಟಿಕೊಪ್ಪ ಪೊಲೀಸ್ ಠಾಣೆಯಲ್ಲಿ ಟಿಪ್ಪು ಜಯಂತಿ ಹಿನ್ನೆಲೆಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಭಾನುವಾರ ನಡೆದ ಸರ್ವ ಧರ್ಮೀಯರ ಶಾಂತಿ ಸಭೆಯಲ್ಲಿ ಅವರು ಮಾತನಾಡಿದರು.
ನವೆಂಬರ್ 10 ರಂದು ಕೊಡಗಿನಲ್ಲಿ ಸರ್ಕಾರದ ಆದೇಶದಂತೆ ಜಿಲ್ಲಾಡಳಿತ ಸರ್ಕಾರಿ ಕಾರ್ಯಕ್ರಮವಾಗಿ ಆಚರಿಸಲು ತಯಾರಿ ನಡೆಸಲಾಗಿದೆ. ಆದರೆ ಇದನ್ನು ವಿರೋಧಿಸಿದವರಿಗೂ ಹಾಗೂ ಖಾಸಗಿ ಕಾರ್ಯಕ್ರಮವಾಗಿ ಟಿಪ್ಪು ಜಯಂತಿ ಆಚರಿಸಿದರೂ ಅದಕ್ಕೆ ಕಾನೂನು ರೀತಿಯಲ್ಲಿ ಕಠಿಣ ಶಿಕ್ಷೆಯನ್ನು ವಿಧಿಸಲಾಗುವುದು ಎಂದರು.
ನ. 10 ರಂದು ಮದುವೆ, ಇನ್ನಿತರ ನಿಗಧಿತ ಕಾರ್ಯಕ್ರಮಗಳನ್ನು ಹೊರತುಪಡಿಸಿ ಕುಟ್ಟಪ್ಪ ಜಯಂತಿ, ಸೋಯೆಲ್ ಜಯಂತಿ ಆಚರಿಸುವಂತಿಲ್ಲ. ಅಲ್ಲದೇ ಟಿಪ್ಪು ಜಯಂತಿಯ ಸಂದರ್ಭ ಆಹ್ವಾನ ಪತ್ರಿಕೆ ಇರುವವರು ಮಾತ್ರ ಭಾಗವಹಿಸಲು ಅವಕಾಶವಿದೆ. ಅಂದು 144 ಸೆಕ್ಷನ್ ಜಾರಿಯಲ್ಲಿರುವುದರಿಂದ ಮೆರವಣಿಗೆ, ಪ್ರತಿಭಟನೆಗಳಿಗೆ ಅವಕಾಶ ಇಲ್ಲದೇ ಇರುವುದರಿಂದ ಯಾರು ಆ ಸಾಹಸಕ್ಕೆ ಕೈ ಹಾಕಬಾರದು ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಎಎಸ್ಸೈ ಪಾರ್ಥ, ಗ್ರಾ.ಪಂ ಉಪಾಧ್ಯಕ್ಷ ಪಿ.ಆರ್.ಸುಕುಮಾರ್, ವಿಶ್ವ ಹಿಂದೂ ಪರಿಷದ್ ಜಿಲ್ಲಾ ಪ್ರದಾನ ಕಾರ್ಯದರ್ಶಿ ಡಿ.ನರಸಿಂಹ, ಟಿಪ್ಪು ಸುಲ್ತಾನ್ ಅಭಿಮಾನಿ ಸೇನೆಯ ಕೊಡಗು ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎ. ಉಸ್ಮಾನ್, ಗ್ರಾ.ಪಂ ಸದಸ್ಯರಾ ಕೆ.ಇ.ಕರೀಂ, ಶ್ರೀದರ್ ಕುಮಾರ್, ಸೋಮಯ್ಯ,ರಜಾಕ್, ಕೆದಕಲ್ ಗ್ರಾ.ಪಂ ಸದಸ್ಯ ದೇವಿಪ್ರಸಾದ್ ಕಾಯರ್ಮಾರ್, ಅಣ್ಣಾ ಶೇರಿಪ್, ಎಂ.ಎ.ಉಸ್ಮಾನ್, ಫ್ರೂಟ್ ಉಸ್ಮಾನ್, ಎಂ.ಎ. ವಸಂತ, ಪೂವಪ್ಪ, ಕೃಷ್ಣಪ್ಪ, ಅವುಲಕುಟ್ಟಿ ಹೊಸಕೋಟೆ ಇತರರು ಇದ್ದರು.







