ಈಗ ಕ್ಷೇತ್ರದ ನೆನಪಾಗುತ್ತಿದೆ
ಮಾನ್ಯರೆ,
ರಾಜ್ಯ ವಿಧಾನ ಸಭೆ ಚುನಾವಣೆ ಹತ್ತಿರವಿರುವ ಈ ಸಂದರ್ಭದಲ್ಲಿ ಎಲ್ಲಾ ರಾಜಕೀಯ ಪಕ್ಷಗಳು ಮೈದಾನಕ್ಕಿಳಿದು ಈಗಿಂದಲೇ ತಮ್ಮ ತಮ್ಮ ಪಕ್ಷದ ಪರವಾಗಿ ಪ್ರಚಾರವನ್ನು ಕೈಗೊಳ್ಳುತ್ತಿದ್ದಾರೆ. ಹಾಲಿ ಬಹುತೇಕ ಶಾಸಕರು ತಮ್ಮ ಐದು ವರ್ಷಗಳ ಅವಧಿಯ ಬಹುತೇಕ ಸಮಯವನ್ನು ತಮ್ಮ ಕ್ಷೇತ್ರದಿಂದ ದೂರ ಉಳಿದು ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿಯೇ ಕಳೆದಿರುವುದು ನಿರಾಕರಿಸಲಾಗದ ಸತ್ಯವಾಗಿದೆ. ಊರಲ್ಲಿ ಇವರ ಪರವಾಗಿ ಭಾವೀ ಶಾಸಕರೆನಿಸಿಕೊಂಡವರು ಇವರ ಜವಾಬ್ದಾರಿಯನ್ನು ವಹಿಸಿಕೊಳ್ಳುವುದು ನಮ್ಮ ಉತ್ತರ ಕರ್ನಾಟಕದಲ್ಲಿ ಸಾಮಾನ್ಯ.
ಬರುವ ಚುನಾವಣೆಯನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಈಗ ಹೆಚ್ಚಿನ ಜನಪ್ರತಿನಿಧಿಗಳಲ್ಲಿ ಬಹುತೇಕರು ತಮ್ಮ ತಮ್ಮ ಕ್ಷೇತ್ರಗಳಲ್ಲಿಯೇ ಠಿಕಾಣಿ ಹೂಡಲಾರಂಭಿಸಿದ್ದಾರೆ. ಈಗ ಅವರಿಗೆ ಕ್ಷೇತ್ರದ ನೆನಪು ಬರುತ್ತಿದೆ. ಯಾವುದೇ ರೀತಿಯಿಂದಲಾದರೂ ಗೆಲುವು ಸಾಧಿಸಬೇಕೆಂಬುದು ಇವರ ಕನಸಾಗಿದೆ. ಐದು ವರ್ಷಗಳಲ್ಲಿ ಪೂರ್ಣಗೊಳಿಸಲಾಗದ ವಿವಿಧ ಯೋಜನೆಗಳ ಉದ್ಘಾಟನೆಗಳು ಈಗ ಎಲ್ಲ ಪಕ್ಷದ ಶಾಸಕರುಗಳಿಂದ ಅಲ್ಲಲ್ಲಿ ಭರ್ಜರಿಯಾಗಿ ನಡೆಯುತ್ತಿವೆ. ಮುಂದೆ ತಮ್ಮನ್ನು ಆರಿಸಿದರೆ ಈ ಯೋಜನೆಗಳನ್ನು ಪೂರ್ಣಗೊಳಿಸಲಾಗುವುದೆಂಬ ಭರವಸೆಗಳ ಸುರಿಮಳೆಗಳು ಒಂದೆಡೆಯಾದರೆ ಐದು ವರ್ಷಗಳಲ್ಲಿ ಒಮ್ಮೆಯೂ ಇವರನ್ನು ಕಾಣದವರು ತಮ್ಮ ಹಳ್ಳಿಗಳಲ್ಲಿ ಇವರ ಆಗಮನವನ್ನು ಕಂಡು ಖುಷಿಯಿಂದ ಕುಣಿದಾಡುತ್ತಾರೆ. ತಮ್ಮ ಹಕ್ಕುಗಳನ್ನು ಕೇಳುವಂತೆ ಕನಿಷ್ಠ ಧೈರ್ಯ ಅರಿವು ಇವರಲ್ಲಿ ಬಹುತೇಕರಿಗೆ ಇರುವುದಿಲ್ಲ. ಅಂತಹ ಒಂದಿಬ್ಬರು ಇದ್ದರೂ ಅವರನ್ನು ಸಮಜಾಯಿಸಿ, ಆಮಿಷ ತೋರಿಸಿ ತಮ್ಮ ತೆಕ್ಕೆಗೆ ಇವರು ತೆಗೆದುಕೊಳ್ಳುತ್ತಾರೆ. ಹಾಗಾಗಿ ಈಗಲಾದರೂ ಜನಸಾಮಾನ್ಯರು ಎಚ್ಚರಗೊಳ್ಳದಿದ್ದರೆ ಬದಲಾವಣೆ ಖಂಡಿತವಾಗಿಯು ಸಾಧ್ಯವಿಲ್ಲ.