ಸ್ಥಳಾಂತರಗೊಂಡಿದ್ದ ಉಡುಪಿ ಮೈನ್ ಶಾಲೆ ಮತ್ತೆ ಪುನರಾರಂಭ
ಜಿಪಂ ಅಧ್ಯಕ್ಷರಿಂದ ಪರಿಶೀಲನೆ: ದುರಸ್ತಿಗೆ ಅನುದಾನ ಬಿಡುಗಡೆ ಭರವಸೆ

ಉಡುಪಿ, ನ.7: ಗೋಡೆ ಕುಸಿದ ಹಿನ್ನೆಲೆಯಲ್ಲಿ ಮಕ್ಕಳ ಸುರಕ್ಷತೆಯ ದೃಷ್ಠಿ ಯಿಂದ ನಾಲ್ಕು ತಿಂಗಳ ಹಿಂದೆ ಉಡುಪಿಯ ನಾರ್ತ್ ಶಾಲೆಗೆ ಸ್ಥಳಾಂತರ ಗೊಂಡಿದ್ದ ಶತಮಾನ ಕಂಡ ಉಡುಪಿ ಮಹಾತ್ಮ ಗಾಂಧಿ ಮೈನ್ ಶಾಲೆಯು ಇಂದು ಪುನಾರಂಭಗೊಂಡಿತು.
ಕೆಲ ತಿಂಗಳ ಹಿಂದೆ ಉಡುಪಿ ಜಿಪಂ ಸಾಮಾನ್ಯ ಸಭೆಯಲ್ಲಿ ತೆಗೆದುಕೊಂಡ ನಿರ್ಣಯದಂತೆ ಮೈನ್ ಶಾಲೆಯನ್ನು ಪುನರಾರಂಭಿಸುವಂತೆ ಸರಕಾರ ಆದೇಶ ನೀಡಿತ್ತು. ಈ ಮಧ್ಯೆ ಇಂದು ಬೆಳಗ್ಗೆ ಶಾಲೆಯ 30 ವಿದ್ಯಾರ್ಥಿಗಳಾದ ಬೀಡಿನ ಗುಡ್ಡೆಯ ವಲಸೆ ಕಾರ್ಮಿಕರ ಮಕ್ಕಳು ಪ್ರಸ್ತುತ ಕಲಿಯುವ ನಾರ್ತ್ ಶಾಲೆಯ ಶಿಕ್ಷಕರಿಗೆ ಯಾವುದೇ ಮಾಹಿತಿ ನೀಡದೆ ಮನೆಯಿಂದ ನೇರ ಮೈನ್ ಶಾಲೆಗೆ ಆಗಮಿಸಿದರು.
ಸಂಪೂರ್ಣ ಅಸ್ತವ್ಯಸ್ಥಗೊಂಡಿದ್ದ ಶಾಲೆಯ ಕೊಠಡಿಗಳನ್ನು ಮಕ್ಕಳೇ ಸರಿಪಡಿಸಿ ನೀರಿನಿಂದ ತೊಳೆದು ಶುಚಿಗೊಳಿಸಿದರು. ಈ ಸಮಯ ಶಾಲೆಯ ಮುಂದಿನ ಕೆಎಂ ಮಾರ್ಗದಲ್ಲಿ ಇಲಾಖಾ ವಾಹನದಲ್ಲಿ ಹೋಗುತ್ತಿದ್ದ ಉಡುಪಿ ಜಿಪಂ ಅಧ್ಯಕ್ಷ ದಿನಕರ ಬಾಬು ಮಕ್ಕಳೆಲ್ಲ ಸೇರಿ ಶಾಲೆಯನ್ನು ಶುಚಿಗೊಳಿಸುತ್ತಿರುವುದನ್ನು ನೋಡಿದರು. ತಕ್ಷಣ ವಾಹನವನ್ನು ನಿಲ್ಲಿಸಿ ನೇರ ತರಗತಿಗೆ ಭೇಟಿ ನೀಡಿದ ಅವರು ಮಕ್ಕಳನ್ನು ವಿಚಾರಿಸಿದರು.
ಅಧಿಕಾರಿಗಳಿಗೆ ತರಾಟೆ: ಮಕ್ಕಳೆ ಶಾಲೆಯನ್ನು ಶುಚಿಗೊಳಿಸುತ್ತಿರುವುದನ್ನು ಮತ್ತು ಶಾಲೆಯ ಅವ್ಯವಸ್ಥೆಯನ್ನು ನೋಡಿದ ಜಿಪಂ ಅಧ್ಯಕ್ಷರು ಕೂಡಲೇ ಉಡುಪಿ ಸಾರ್ವ ಜನಿಕ ಶಿಕ್ಷಣ ಇಲಾಖೆ ಪ್ರಭಾರ ಉಪನಿರ್ದೇಶಕ ನಾಗೇಶ್ ಶ್ಯಾನುಭಾಗ್, ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಟೇಶ್ ನಾಯಕ್ ಅವರನ್ನು ಶಾಲೆಗೆ ಕರೆಸಿದರು. ಮಕ್ಕಳು ಶಾಲೆಗೆ ಬಂದಿರುವ ವಿಚಾರ ಗೊತ್ತಿಲ್ಲ ಎಂದು ಉತ್ತರಿಸಿದ ಅಧಿಕಾರಿಗಳನ್ನು ದಿನಕರ ಬಾಬು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.
‘ಶಾಲೆಯನ್ನು ನವೆಂಬರ್ ತಿಂಗಳಲ್ಲಿ ಸ್ಥಳಾಂತರಿಸುವಂತೆ ಆದೇಶವಾಗಿದ್ದು, ಆದರೆ ನ.3 ಮತ್ತು 4ರಂದು ಮಕ್ಕಳ ಸಾಮರ್ಥ್ಯ ಪರೀಕ್ಷೆ ಇದ್ದುದರಿಂದ ಅದರ ಪ್ರಶ್ನೆ ಪತ್ರಿಕೆಗಳು ನಾರ್ತ್ ಶಾಲೆಗೆ ಬಂದಿದ್ದವು. ಹಾಗಾಗಿ ಪರೀಕ್ಷೆ ಮುಗಿದ ಬಳಿಕ ಸ್ಥಳಾಂತರಿಸಲು ನಿರ್ಧರಿಸಲಾಗಿತ್ತು. ನಂತರ ರಜೆ ಬಂದಿದ್ದುದರಿಂದ ನ.9ರಂದು ಸ್ಥಳಾಂತರಿಸಲು ಸೂಚಿಸಲಾಗಿತ್ತು. ಈ ಮಧ್ಯೆ ಮಕ್ಕಳು ಯಾರಿಗೂ ತಿಳಿಸದೆ ಶಾಲೆಗೆ ಬಂದಿದ್ದಾರೆ’ ಎಂದು ನಾಗೇಶ್ ಶ್ಯಾನುಭಾಗ್ ತಿಳಿಸಿದರು.
ಈ ಶಾಲೆಯಲ್ಲಿ ಒಟ್ಟು 50 ಮಕ್ಕಳು ಕಲಿಯುತ್ತಿದ್ದು, ಗೋಡೆ ಬಿದ್ದ ಕಾರಣ ಸುರಕ್ಷತೆಯ ದೃಷ್ಠಿಯಿಂದ ಅವರನ್ನೆಲ್ಲ ನಾರ್ತ್ ಶಾಲೆಗೆ ಸ್ಥಳಾಂತರಿಸಲಾಗಿತ್ತು. ಅದೇ ರೀತಿ ಇಲ್ಲಿದ್ದ ನಾಲ್ಕು ಶಿಕ್ಷಕರಲ್ಲಿ ಒಬ್ಬರನ್ನು ಹಿರಿಯಡ್ಕ, ಇನ್ನೊಬ್ಬರನ್ನು ವಳಕಾಡು ಶಾಲೆಗೆ ಮತ್ತು ಇಬ್ಬರನ್ನು ನಾರ್ತ್ ಶಾಲೆಗೆ ವರ್ಗಾಯಿಸಲಾಗಿತ್ತು. ಇಂದು 30 ಮಕ್ಕಳು ಈ ಶಾಲೆಗೆ ಬಂದು ಅವರೇ ಶುಚಿಗೊಳಿಸಿದ್ದಾರೆ. ನಮ್ಮಲ್ಲಿ ಶುಚಿಗೊಳಿಸಲು ಪ್ರತ್ಯೇಕ ಸಿಬ್ಬಂದಿಗಳು ಇಲ್ಲದ ಕಾರಣ ಮಕ್ಕಳೇ ಶಾಲೆಗಳನ್ನು ಶುಚಿಗೊಳಿಸುತ್ತಾರೆ ಎಂದರು.
ಇಂದಿನಿಂದಲೇ ಶಾಲೆ ಆರಂಭ: ಜಿಪಂ ಅಧ್ಯಕ್ಷರು ಮಕ್ಕಳನ್ನು ನಾರ್ತ್ ಶಾಲೆಗೆ ಹೋಗುತ್ತೀರಾ ಎಂದು ಕೇಳಿದ ಪ್ರಶ್ನೆಗೆ ಎಲ್ಲ ಮಕ್ಕಳು ಇಲ್ಲ ಎಂದು ಉತ್ತರ ನೀಡಿದರು. ಆ ಹಿನ್ನೆಲೆಯಲ್ಲಿ ನಾರ್ತ್ ಶಾಲೆಗೆ ನೇಮಿಸಲಾಗಿದ್ದ ಇಲ್ಲಿನ ಇಬ್ಬರು ಶಿಕ್ಷಕಿಯರನ್ನು ಮತ್ತೆ ಈ ಶಾಲೆಗೆ ಕರೆಸಿಕೊಳ್ಳಲಾಯಿತು.
‘ಮಕ್ಕಳು ಶಾಲೆಗೆ ಬಂದಿರುವ ಹಿನ್ನೆಲೆಯಲ್ಲಿ ಇಂದಿನಿಂದಲೇ ಶಾಲೆಯನ್ನು ಆರಂಭಿಸಲಾಗುವುದು. ಇಂದು ಊಟದ ವ್ಯವಸ್ಥೆಯನ್ನು ನಾರ್ತ್ ಶಾಲೆ ಯಿಂದ ತರಲಾಗುವುದು. ನಾಳೆಯಿಂದ ಅಕ್ಷರ ದಾಸೋಹವನ್ನು ಇಲ್ಲಿಗೆ ವರ್ಗಾಯಿಸಿಕೊಳ್ಳಲಾಗುವುದು. ಅದೇ ರೀತಿ ಇಲ್ಲಿಂದ ಹೋಗಿರುವ ನಾಲ್ವರು ಶಿಕ್ಷಕರನ್ನು ಮತ್ತೆ ಇಲ್ಲಿಗೆ ಕರೆಸಿಕೊಳ್ಳುವಂತೆ ಆದೇಶ ನೀಡಲಾಗಿದೆ. ಅದರಂತೆ ಇಂದು ಮೂವರು ಶಿಕ್ಷಕರು ಬಂದು ಮಕ್ಕಳಿಗೆ ಪಾಠ ಮಾಡಲಿದ್ದಾರೆ’ ಎಂದು ನಾಗೇಶ್ ಶ್ಯಾನುಭಾಗ್ ತಿಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜಿಪಂ ಅಧ್ಯಕ್ಷ ದಿನಕರ ಬಾಬು, ಈ ಶಾಲೆಯನ್ನು ಜಿಪಂ ಗಮನಕ್ಕೆ ತಾರದೆಯೇ ಏಕಾಏಕಿ ಸ್ಥಳಾಂತರ ಮಾಡ ಲಾಗಿತ್ತು. ಇದರ ವಿರುದ್ಧ ಜಿಪಂ ಸಾಮಾನ್ಯ ಸಭೆಯಲ್ಲಿ ನಿರ್ಣಯ ಮಾಡಿ ಕೂಡಲೇ ಶಾಲೆಯನ್ನು ದುರಸ್ತಿ ಮಾಡಿ ಪುನಾರಂಭಿಸಬೇಕು ಎಂದು ಸೂಚಿಸ ಲಾಗಿತ್ತು. ಅದರಂತೆ ಇದೀಗ ಗೋಡೆಯನ್ನು ದುರಸ್ತಿಗೊಳಿಸಿ ಶಾಲೆಯನ್ನು ಪುನಾರಂಭಿಸಲಾಗಿದೆ. ಮುಂದೆ ಈ ಶಾಲೆಯ ಅಭಿವೃದ್ಧಿಗೆ ಬೇಕಾದ ಅನು ದಾನವನ್ನು ಜಿಪಂ ನಿಧಿಯಿಂದ ನೀಡಲಾಗುವುದು ಎಂದು ಹೇಳಿದರು.
2ವರ್ಷಗಳಿಂದ ವಿದ್ಯುತ್ ಬಿಲ್ ಪಾವತಿಸಿಲ್ಲ!
ಜಿಪಂ ಅಧ್ಯಕ್ಷರು ಶಾಲೆಗೆ ಆಗಮಿಸಿದ ಮಕ್ಕಳು ಕತ್ತಲೆ ಕೋಣೆಯಲ್ಲಿ ಓದು ತ್ತಿರುವುದನ್ನು ನೋಡಿ ಅಧಿಕಾರಿಗಳನ್ನು ವಿಚಾರಿಸಿದರು. ಆಗ ಈ ಶಾಲೆಯ ವಿದ್ಯುತ್ ಬಿಲ್ನ್ನು ಕಳೆದ ಎರಡು ವರ್ಷಗಳಿಂದ ಪಾವತಿಸದ ಕಾರಣ ಮೆಸ್ಕಾಂ ನವರು ವಿದ್ಯುತ್ ಸಂಪರ್ಕ ಕಡಿತ ಮಾಡಿದ್ದಾರೆ ಎಂಬ ಮಾಹಿತಿ ತಿಳಿಯಿತು.
ಶಾಲೆಯ ಶಿಕ್ಷಕರು ಹೇಳುವ ಪ್ರಕಾರ ಕಳೆದ ಎರಡು ವರ್ಷಗಳಿಂದ ಒಟ್ಟು 15 ಸಾವಿರ ರೂ. ವಿದ್ಯುತ್ ಬಿಲ್ ಪಾವತಿಸಲು ಬಾಕಿ ಇದೆ. ಹಾಗಾಗಿ ಇತ್ತೀಚೆಗೆ ಮೆಸ್ಕಾಂನವರು ವಿದ್ಯುತ್ ಸಂಪರ್ಕ ಕಡಿತ ಮಾಡಿದ್ದಾರೆ. ಸ್ಥಳದಲ್ಲಿದ್ದ ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧಿಕಾರಿಗಳು ಕೂಡಲೇ ಮೆಸ್ಕಾಂ ಅಧಿಕಾರಿಗಳನ್ನು ಸಂಪರ್ಕಿಸಿ ವಿದ್ಯುತ್ ಸಂರ್ಪಕ ಕಲ್ಪಿಸುವಂತೆ ಮನವಿ ಮಾಡಿದರು. ಅದರಂತೆ ಶಾಲೆಗೆ ವಿದ್ಯುತ್ ಸಂಪರ್ಕ ಒದಗಿಸಲಾಯಿತು. ಮೆಸ್ಕಾಂನ ಬಾಕಿ ಬಿಲ್ನ್ನು ಸದ್ಯವೇ ಯಾವುದಾದರೂ ಫಂಡ್ನಿಂದ ಪಾವತಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದರು







