ಮುಂಬೈ ದಾಳಿಯಿಂದ ಪಾಕ್ ಪ್ರತಿಷ್ಠೆಗೆ ಮಸಿ: ಪಾಕಿಸ್ತಾನದ ಮಾಜಿ ವಿದೇಶ ಕಾರ್ಯದರ್ಶಿ
ವಾಶಿಂಗ್ಟನ್, ನ. 7: 2008ರ ಮುಂಬೈ ದಾಳಿಯು ನಮ್ಮ ಕಾಶ್ಮೀರದ ನಿಲುವಿನ ಮೇಲೆ ಸರಿಪಡಿಸಲಾಗದಷ್ಟು ಹಾನಿ ನಡೆಸಿದೆ ಹಾಗೂ ಪಾಕಿಸ್ತಾನದ ಪ್ರತಿಷ್ಠೆಗೆ ಮಸಿ ಬಳಿದಿದೆ ಎಂದು ಪಾಕಿಸ್ತಾನದ ಮಾಜಿ ವಿದೇಶ ಕಾರ್ಯದರ್ಶಿ ರಿಯಾಝ್ ಮುಹಮ್ಮದ್ ಖಾನ್ ಹೇಳಿದ್ದಾರೆ.
ವಾಶಿಂಗ್ಟನ್ನಲ್ಲಿರುವ ಪಾಕಿಸ್ತಾನ ರಾಯಭಾರ ಕಚೇರಿಯಲ್ಲಿ ಕಾರ್ಯಕ್ರಮವೊಂದನ್ನು ಉದ್ದೇಶಿಸಿ ಮಾತನಾಡಿದ ವೇಳೆ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದರು ಎಂದು ‘ಡಾನ್ ಆನ್ಲೈನ್’ ಮಂಗಳವಾರ ವರದಿ ಮಾಡಿದೆ.
ಪಾಕಿಸ್ತಾನದ 10 ಭಯೋತ್ಪಾದಕರು 2008 ನವೆಂಬರ್ 28 ಮತ್ತು 29ರಂದು ಮುಂಬೈಯಲ್ಲಿ ದಾಂಧಲೆ ನಡೆಸಿ ವಿದೇಶಿ ಪ್ರವಾಸಿಗರು ಸೇರಿದಂತೆ ಕನಿಷ್ಠ 166 ಮಂದಿಯನ್ನು ಹತ್ಯೆಗೈದರು. ಅವರು ಎರಡು ವೈಭವೋಪೇತ ಹೊಟೇಲ್ಗಳು, ಒಂದು ಯಹೂದಿ ಕೇಂದ್ರ ಮತ್ತು ಒಂದು ರೈಲ್ವೆ ನಿಲ್ದಾಣದ ಮೇಲೆ ದಾಳಿ ನಡೆಸಿದರು.
ಪಾಕಿಸ್ತಾನದ ಜಮಾಅತ್ ಉದ್ದಾವ ಭಯೋತ್ಪಾದಕ ಸಂಘಟನೆಯ ಮುಖ್ಯಸ್ಥ ಹಫೀಝ್ ಸಯೀದ್ ಈ ಭಯೋತ್ಪಾದಕ ದಾಳಿಯ ರೂವಾರಿಯಾಗಿದ್ದಾನೆ. ಈ ಘಟನೆಯ ಬಳಿಕ ಭಾರತ ಮತ್ತು ಪಾಕಿಸ್ತಾನಗಳ ನಡುವೆ ಯುದ್ಧದ ಸನ್ನಿವೇಶ ನಿರ್ಮಾಣವಾಗಿತ್ತು.
‘‘ಕಾಶ್ಮೀರದಲ್ಲಿ ನಡೆಯುತ್ತಿರುವ ಸ್ಥಳೀಯರ ಕಾನೂನುಬದ್ಧ ಸ್ವಾತಂತ್ರ ಚಳವಳಿಯನ್ನು ದುರ್ಬಲಗೊಳಿಸಲು’’ ಈ ಭಯೋತ್ಪಾದಕ ಗುಂಪುಗಳ ತಪ್ಪುಗಳನ್ನು ಬಳಸಲಾಗದು ಎಂದು ಮಾಜಿ ವಿದೇಶ ಕಾರ್ಯದರ್ಶಿ ಹೇಳಿದರು.