ನೋಟು ನಿಷೇಧಕ್ಕೆ ಒಂದು ವರ್ಷ: ಎಡ ಪಕ್ಷಗಳಿಂದ ಕರಾಳ ದಿನಾಚರಣೆ

ಬೆಂಗಳೂರು, ನ.8: ಪ್ರಧಾನಿ ನರೇಂದ್ರ ಮೋದಿ 500, 1000 ಮುಖಬೆಲೆಯ ಗರಿಷ್ಠ ಪ್ರಮಾಣದ ನೋಟುಗಳ ಅಮಾನ್ಯೀಕರಣಗೊಳಿಸಿ ಒಂದು ವರ್ಷ ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಇದನ್ನು ಖಂಡಿಸಿ ಸಿಪಿಐ, ಸಿಪಿಎಂ, ಎಸ್ಯುಸಿಐ ಸೇರಿದಂತೆ ಹಲವು ಎಡಪಕ್ಷಗಳ ಕಾರ್ಯಕರ್ತರು ನಗರದ ಮೈಸೂರು ಬ್ಯಾಂಕ್ ವೃತ್ತದಲ್ಲಿ ಪ್ರತಿಭಟನೆ ನಡೆಸುವ ಮೂಲಕ ಕರಾಳ ದಿನಾಚರಣೆಯನ್ನಾಗಿ ಆಚರಿಸಲಾಯಿತು.
ನೋಟುಗಳ ನಿಷೇಧದಿಂದಾಗಿ ಸಾಮಾನ್ಯ ಜನರ ಮೇಲಾದ ದುಷ್ಪಾರಿಣಾಮವನ್ನು ಖಂಡಿಸಿ ಕೇಂದ್ರ ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಮಾತನಾಡಿದ ಸಿಪಿಎಂ ಮುಖಂಡ ಕೆ.ಎನ್.ಉಮೇಶ್, ನೋಟು ನಿಷೇಧದದಿಂದ ಆರ್ಥಿಕ ವ್ಯವಸ್ಥೆ ತೀರ ಹದಗೆಟ್ಟಿದ್ದು, ಜನ ಸಾಮಾನ್ಯರು ಆರ್ಥಿಕ ಪರಿಸ್ಥಿತಿಯಿಂದ ಚೇತರಿಸಿಕೊಳ್ಳಲು ಸಾಧ್ಯವಾಗದಷ್ಟು ದುರ್ಬಲಗೊಳಿಸಿತು. ಗ್ರಾಮೀಣ ಮಾರುಕಟ್ಟೆ, ರೈತರು, ಕೂಲಿ ಕಾರ್ಮಿಕರು, ದಿನಗೂಲಿ ನೌಕರರು, ಬೀದಿ ವ್ಯಾಪಾರಿಗಳು, ಸಣ್ಣ ಅಂಗಡಿಗಳಲ್ಲಿ ಜೀವನ ನಡೆಸುತ್ತಿದ್ದ ಸಾಮಾನ್ಯ ಜನರು ಸಂಕಷ್ಟದಲ್ಲಿ ಜೀವನ ನಿರ್ವಹಣೆ ಮಾಡಬೇಕಾದ ಸ್ಥಿತಿಗೆ ತಂದಿಡಲಾಗಿದೆ ಎಂದು ಆರೋಪಿಸಿದರು.
ಪ್ರಧಾನಮಂತ್ರಿ ನರೇಂದ್ರಮೋದಿಯವರು ಏಕಪಕ್ಷೀಯವಾದ ನಿರ್ಣಯಗಳನ್ನು ಕೈಗೊಳ್ಳುವ ಮೂಲಕ ತುಘಲಕ್ ಸರಕಾರವನ್ನು ನಡೆಸುತ್ತಿದ್ದಾರೆ. ಇದರಿಂದಾಗಿ ದೇಶದ ಜನರು ಆತಂಕದ ವಾತಾವರಣದಲ್ಲಿ ಜೀವನ ನಡೆಸುವಂತಾಗಿದೆ ಎಂದ ಅವರು, ದೇಶಿಯ ಕಾರ್ಪೋರೇಟ್ಗಳ ಹಾಗೂ ಬಂಡವಾಳಶಾಹಿಗಳ ಹಿತಾಸಕ್ತಿಯನ್ನು ರಕ್ಷಿಸುವ ನಿಟ್ಟಿನಲ್ಲಿ ಮೋದಿ ಸರಕಾರ ಅಧಿಕಾರ ನಡೆಸುತ್ತಿದೆ ಎಂದು ಕಿಡಿಕಾರಿದರು.
ನೋಟು ಅಮಾನ್ಯೀಕರಣ ನಿರ್ಣಯ ಕೈಗೊಂಡವರು ಯಾರು, ಇದರಿಂದಾಗಿ ಅಂದಿನ ಆರ್ಬಿಐನ ಗವರ್ನರ್ ರಘುರಾಂ ರಾಜನ್ ರಾಜೀನಾಮೆ ನೀಡಿದ್ದೇಕೆ. ಈ ತೀರ್ಮಾನದಿಂದಾಗಿ ಸಾಲಿನಲ್ಲಿ ನಿಂತು 100 ಕ್ಕೂ ಅಧಿಕ ಜನರು ಮರಣ ಹೊಂದಿದರು, ಇದಕ್ಕೆ ಯಾರು ಜವಾಬ್ದಾರರು ಹಾಗೂ ಏಕೆ ಪರಿಹಾರ ಕೊಡಲಿಲ್ಲ ಮತ್ತು ಪ್ರಕರಣ ದಾಖಲಿಸಿಲ್ಲ. ನೋಟು ನಿಷೇಧಕ್ಕೂ ಮೊದಲು ಬ್ಯಾಂಕ್ಗಳಲ್ಲಿ ಹಣ ತುಂಬಿಸಿದವರ ಮೇಲೆ ಯಾಕೆ ಕ್ರಮ ಕೈಗೊಂಡಿಲ್ಲ ಸೇರಿದಂತೆ ಹಲವು ಪ್ರಶ್ನೆಗಳಿಗೆ ಪ್ರಧಾನಿ ಉತ್ತರಿಸಬೇಕು ಎಂದರು.
ಸಿಪಿಐ ಮುಖಂಡ ಸಿದ್ಧನಗೌಡ ಪಾಟೀಲ್ ಮಾತನಾಡಿ, ಪ್ರಧಾನ ಮಂತ್ರಿ ನರೇಂದ್ರ ಮೋದಿ ನೋಟು ಅಮಾನ್ಯೀಕರಣ ಮಾಡಿದ್ದು, ಅವರ ವೈಫಲ್ಯತೆಯಾಗಿದೆ. ಇದರಿಂದಾಗಿ ಬಡ ಜನತೆ ಸಾಕಷ್ಟು ತೊಂದರೆಗೆ ಒಗಾದರು. ಆದರೆ, ಯಾರೊಬ್ಬ ಶ್ರೀಮಂತನೂ ಹಣ ಬದಲಾವಣೆ ಮಾಡಿಕೊಳ್ಳಲು ಬ್ಯಾಂಕುಗಳ ಮುಂದೆ ನಿಂತಿರುವುದು ಕಂಡು ಬಂದಿಲ್ಲ. ವಾರಗಟ್ಟಲೆ ಬ್ಯಾಂಕುಗಳ ಮುಂದೆ ಸರತಿ ಸಾಲಿನಲ್ಲಿ ನಿಂತು ಬಡ ಜನರು ತೊಂದರೆಗೀಡಾಗಿದ್ದಾರೆ ಎಂದು ತಿಳಿಸಿದರು.
ರಾಷ್ಟ್ರೀಕೃತ ಬ್ಯಾಂಕ್ಗಳಿಂದ ದೊಡ್ಡ ಪ್ರಮಾಣದ ಸಾಲ ಪಡೆದಿರುವ ಕಾರ್ಪೊರೇಟ್ ಕಂಪೆನಿಗಳನ್ನು ರಕ್ಷಿಸುವ ಸಲುವಾಗಿ ಪ್ರಧಾನಿ ನರೇಂದ್ರ ಮೋದಿ ಸರ್ಕಸ್ ಮಾಡಲಾಯಿತು. ಅಲ್ಲದೆ, ಈ ಸಾಲದಿಂದ ಬ್ಯಾಂಕ್ಗಳು ಕುಸಿಯುವಂತೆ ಈ ರೀತಿ ನೋಟು ಅಮಾನ್ಯ ಮಾಡಲಾಯಿತಾ ಎಂಬ ಅನುಮಾನ ಕಾಡುತ್ತಿದೆ. ಒಟ್ಟಾರೆಯಾಗಿ ಭ್ರಷ್ಟ ಶ್ರೀಮಂತರನ್ನು ರಕ್ಷಿಸುವ ಸಲುವಾಗಿ ಮೋದಿ ನೋಟು ಅಮಾನ್ಯ ಮಾಡಿದ್ದಾರೆ ಎಂದರು.
ವಿದೇಶದಲ್ಲಿರುವ ಕಪ್ಪುಹಣ ತಂದು ಬಡ ಜನರಿಗೆ ಖಾತೆಗಳಿಗೆ ತುಂಬಲಾಗುತ್ತದೆ ಎಂದು ಆಶ್ವಾಸನೆ ನೀಡಿದ್ದರು. ಆದರೆ, ಇದೀಗ ಅವರು ನೀಡಿದ ಭರವಸೆ ಹುಸಿಯಾಗಿದ್ದು, ಬಡವರ ಖಾತೆಗೆ ಜಮೆಯಾಗಬೇಕಿದ್ದ ಲಕ್ಷಾಂತರ ಕೋಟಿ ರೂ.ಗಳಷ್ಟು ಹಣವನ್ನು ಅಮಿತ್ ಶಾ ಮಗನ ಖಾತೆಗೆ ಜಮೆಯಾಗಿದೆ ಎಂದು ವಾಗ್ದಾಳಿ ನಡೆಸಿದ ಅವರು, ರೈತರ ಸಾಲ ಮನ್ನಾ ಮಾಡಲು ಹಣವಿಲ್ಲವಾದರೂ, ಕಾರ್ಪೊರೇಟ್ ಕಂಪೆನಿಗಳ ಸಾಲ ಮನ್ನಾ ಮಾಡಲು ಹಣ ಎಲ್ಲಿಂದ ಬಂದಿದೆ ಎಂದು ಹೇಳಿದರು.
ಪ್ರತಿಭಟನೆಯಲ್ಲಿ ಸಿಪಿಎಂ ಮುಖಂಡರಾದ ಗೌರಮ್ಮ, ಆರ್.ಶ್ರೀನಿವಾಸ್, ಕೆ.ಎಸ್.ವಿಮಲಾ, ಕೆ.ಪ್ರಕಾಶ್, ಗೋಪಾಲಕೃಷ್ಣ ಅರಳಿಹಳ್ಳಿ, ಸುರೇಂದ್ರರಾವ್, ಕಾರ್ಮಿಕ ಮುಖಂಡ ಅನಂತ ಸುಬ್ಬಾರಾವ್, ಎಸ್ಯುಸಿಐನ ಶ್ರೀರಾಮ್, ಸಿಪಿಐ(ಎಂಎಲ್)ನ ಮುಖಂಡರಾದ ಆರ್.ಶ್ರೀನಿವಾಸ್, ವಿದ್ಯಾರ್ಥಿ ಮುಖಂಡರಾದ ಗುರುರಾಜ್ ದೇಸಾಯಿ, ಯುವಜನ ಮುಖಂಡರಾದ ಬಸವರಾಜ್ ಪೂಜಾರ್ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.







