ಐಟಿ ಅಧಿಕಾರಿಗಳಿಂದ ಡಿಕೆಶಿಗೆ ಬಿಜೆಪಿ ಸೇರಲು ಒತ್ತಡ: ಸಿಎಂ ಸಿದ್ದರಾಮಯ್ಯ
‘ಭಾರತ ನರಳುತ್ತಿದೆ’ ಕರಾಳ ದಿನಾಚರಣೆ

ಬೆಂಗಳೂರು, ನ.8: ಇಂಧನ ಸಚಿವ ಡಿ.ಕೆ.ಶಿವಕುಮಾರ್ ನಿವಾಸದ ಮೇಲೆ ದಾಳಿ ನಡೆಸಿದ ಐಟಿ ಅಧಿಕಾರಿಗಳು ಅವರನ್ನು ಬಿಜೆಪಿಗೆ ಸೇರುವಂತೆ ಆಹ್ವಾನ ನೀಡುತ್ತಾರೆ ಎಂದರೆ, ಈ ಸಾಂವಿಧಾನಿಕ ಸಂಸ್ಥೆಗಳು ಯಾವ ಮಟ್ಟದಲ್ಲಿ ಕೇಸರಿಕರಣವಾಗಿವೆ ಎಂಬುದನ್ನು ಊಹಿಸಿಕೊಳ್ಳಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದ್ದಾರೆ.
ಬುಧವಾರ ನಗರದ ಸ್ವಾತಂತ್ರ ಉದ್ಯಾನವನದಲ್ಲಿ ನೋಟುಗಳ ಅಮಾನ್ಯೀಕರಣಗೊಂಡ ಒಂದು ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಕೆಪಿಸಿಸಿ ವತಿಯಿಂದ ಆಯೋಜಿಸಲಾಗಿದ್ದ ‘ಭಾರತ ನರಳುತ್ತಿದೆ’ ಕರಾಳ ದಿನಾಚರಣೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಕೇಂದ್ರದಲ್ಲಿ ಅಧಿಕಾರದಲ್ಲಿರುವುದು ಬಿಜೆಪಿ ಸರಕಾರವಲ್ಲ, ‘ರೇಡ್’ ಸರಕಾರ ಎಂದು ಮಾಜಿ ಕೇಂದ್ರ ವಿದೇಶಾಂಗ ಸಚಿವ ಯಶವಂತ್ಸಿನ್ಹಾ ಹೇಳಿದ್ದರು. ಸಿಬಿಐ, ಐಟಿ, ಇಡಿ ಎಲ್ಲವನ್ನೂ ರಾಜಕೀಯ ವಿರೋಧಿಗಳನ್ನು ಹೆದರಿಸಲು ಕೇಂದ್ರ ಸರಕಾರ ಬಳಸಿಕೊಳ್ಳುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಆರ್ಬಿಐನ ಮಾಜಿ ಗವರ್ನರ್ ರಘುರಾಮ್ ರಾಜನ್, ಯಶವಂತ್ ಸಿನ್ಹಾ, ಅರುಣ್ ಶೌರಿ, ಸುಬ್ರಹ್ಮಣ್ಯ ಸ್ವಾಮಿ, ಶತ್ರುಘ್ನ ಸಿನ್ಹಾ ಸೇರಿದಂತೆ ಎಲ್ಲರೂ ನೋಟುಗಳ ಅಮಾನ್ಯೀಕರಣದ ಅಡ್ಡಪರಿಣಾಮಗಳ ಬಗ್ಗೆ ಟೀಕಿಸಿದ್ದಾರೆ ಎಂದರು.
ಪ್ರಧಾನಿ ನರೇಂದ್ರಮೋದಿ ಓರ್ವ ಸರ್ವಾಧಿಕಾರಿ. ಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮೀತ್ ಶಾ ಇಬ್ಬರದ್ದೂ ಕ್ರಿಮಿನಲ್ ಬ್ರೈನ್ (ಅಪರಾಧಿ ಮನಸ್ಥಿತಿ). ಇವರು ಅಧಿಕಾರಕ್ಕೆ ಬಂದ ನಂತರ ಬಿಜೆಪಿಯನ್ನು ಕಟ್ಟಿ ಬೆಳೆಸಿದ ಎಲ್.ಕೆ.ಅಡ್ವಾಣಿ ಸೇರಿದಂತೆ ಎಲ್ಲರೂ ಮೂಲೆಗುಂಪಾಗಿದ್ದಾರೆ ಎಂದು ಹೇಳಿದರು.
ಅಮಿತ್ ಶಾ ಮಗ ಜಯ್ ಶಾ ಕಂಪೆನಿ ಎಷ್ಟು ಪ್ರಮಾಣದ ಕಪ್ಪುಹಣವನ್ನು ಬಿಳಿಹಣವನ್ನಾಗಿ ಮಾಡಿಕೊಂಡಿದ್ದಾರೆ ಎಂಬುದನ್ನು ನರೇಂದ್ರ ಮೋದಿ ಹೇಳಬೇಕು. ಸಿದ್ದರಾಮಯ್ಯ ನೇತೃತ್ವದ ಸರಕಾರದಲ್ಲಿರುವ ಭ್ರಷ್ಟ ಸರಕಾರ ಇಡೀ ದೇಶದಲ್ಲಿ ಎಲ್ಲೂ ಇಲ್ಲ ಎಂದು ಹೇಳುತ್ತಿರುವುದು ಸ್ವತಃ ಜೈಲಿಗೆ ಹೋಗಿ ಬಂದ ಅಸಾಮಿ ಅಮಿತ್ ಶಾ ಎಂದು ಸಿದ್ದರಾಮಯ್ಯ ವ್ಯಂಗ್ಯವಾಡಿದರು.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಇಬ್ಬರೂ ಜೈಲಿಗೆ ಹೋಗಿ ಬಂದಿರುವ ಗಿರಾಕಿಗಳು. ಇವರಿಗೆ ನಾಚಿಕೆ, ಮಾನ, ಮರ್ಯಾದೆ ಇದ್ದರೆ ಸಾರ್ವಜನಿಕವಾಗಿ ತಲೆ ಎತ್ತಿ ತಿರುಗಾಡಬಾರದು. ಬಾಯಿ ಬಿಟ್ಟರೆ ಬರೀ ಸುಳ್ಳು ಹೇಳುವುದನ್ನೆ ಕಾಯಕ ಮಾಡಿಕೊಂಡಿದ್ದಾರೆ ಎಂದು ಟೀಕಿಸಿದರು.
ಬಿಜೆಪಿಯವರು ಪರಿವರ್ತನಾ ರ್ಯಾಲಿ ಮಾಡಲಿ, ನರೇಂದ್ರ ಮೋದಿ ಹಾಗೂ ಅಮಿತ್ ಶಾ ಪದೇ ಪದೇ ರಾಜ್ಯಕ್ಕೆ ಬಂದು ಹೋಗಲಿ, ಯಾವ ಪರಿಣಾಮವು ಬೀರುವುದಿಲ್ಲ. ಇದು ಬಸವಣ್ಣ, ಕನಕದಾಸ, ಕುವೆಂಪು ಅವರ ನಾಡು. ಕೋಮುವಾದ, ಧರ್ಮ-ಧರ್ಮ, ಜಾತಿ-ಜಾತಿಗಳ ನಡುವೆ ದ್ವೇಷದ ಬಿತ್ತಿ ರಾಜಕೀಯ ಲಾಭ ಪಡೆಯಲು ಸಾಧ್ಯವಾಗುವುದಿಲ್ಲ ಎಂದು ವಾಗ್ದಾಲಿ ನಡೆಸಿದರು.
ಜೆಡಿಎಸ್ನವರು ಕುಮಾರಪರ್ವ ಆರಂಭಿಸಿದ್ದಾರೆ. ಕರ್ನಾಟಕ ವಿಕಾಸ ವಾಹಿನಿ ಮೂಲಕ ಯಾತ್ರೆ ಹೊರಡಿದ್ದಾರೆ. ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಹಾಗೂ ಎಚ್.ಡಿ.ಕುಮಾರಸ್ವಾಮಿ ಈ ರಾಜ್ಯದ ಮುಖ್ಯಮಂತ್ರಿಯಾಗಿರಲಿಲ್ಲವೇ, ದೇವೇಗೌಡ ಪ್ರಧಾನಿಯಾಗಿರಲಿಲ್ಲವೇ ಅಧಿಕಾರದಲ್ಲಿದ್ದಾಗ ಯಾಕೆ ವಿಕಾಸ ಮಾಡಲಿಲ್ಲ ಎಂದು ಪ್ರಶ್ನಿಸಿದರು.
ಯಾರು ಅಧಿಕಾರಕ್ಕೆ ಬರಬೇಕು ಎಂಬುದನ್ನು ಜನ ತೀರ್ಮಾನ ಮಾಡುತ್ತಾರೆ. ಸುಳ್ಳು ಹೇಳಿಕೊಂಡು ಜನರನ್ನು ದಾರಿ ತಪ್ಪಿಸಲು ಸಾಧ್ಯವಿಲ್ಲ. 13 ಲಕ್ಷ ಮನೆಗಳನ್ನು ನಾವು ಕಟ್ಟಿದ್ದೇವೆ. ಬೆಂಗಳೂರು ನಗರದಲ್ಲಿ 1 ಲಕ್ಷ ಮನೆಗಳನ್ನು ಕಟ್ಟಲು ತೀರ್ಮಾನಿಸಲಾಗಿದೆ. ಎ.ಟಿ.ರಾಮಸ್ವಾಮಿ ವರದಿಯಲ್ಲಿ ತಿಳಿಸಿದಂತೆ ಒತ್ತುವರಿ ಯಾಗಿದ್ದ 11.08 ಸಾವಿರ ಎಕರೆ ಜತೆಗೆ 6 ಸಾವಿರ ಎಕರೆ ಭೂಮಿಯನ್ನು ಒತ್ತುವರಿಯಿಂದ ತೆರವು ಮಾಡಿದ್ದೇವೆ ಎಂದು ಹೇಳಿದರು.
ನಮ್ಮದು ಹಗರಣ ಮುಕ್ತ ಸರಕಾರ. ಈ ಬಗ್ಗೆ ಒಂದೇ ವೇದಿಕೆಗೆ ಚರ್ಚೆಗೆ ಬರಲಿ. ವಿಪಕ್ಷ ನಾಯಕ ಜಗದೀಶ್ ಶೆಟ್ಟರ್, ಸಿದ್ದರಾಮಯ್ಯ ಸರಕಾರದ ಸಾಧನೆ ಶೂನ್ಯ ಎಂದಿದ್ದಾರೆ. ದೇಶದ ಸುಮಾರು 15 ರಾಜ್ಯಗಳಲ್ಲಿ ಬಿಜೆಪಿ ಮುಖ್ಯಮಂತ್ರಿಗಳು ಆಡಳಿತ ನಡೆಸುತ್ತಿರಬಹುದು. ಬಡವರ ಹಸಿವನ್ನು ನೀಗಿಸಲು ಉಚಿತವಾಗಿ ತಲಾ ಒಬ್ಬರಿಗೆ 7 ಕೆಜಿ ಅಕ್ಕಿ ನೀಡುತ್ತಿರುವ ಯಾವುದಾದರೂ ರಾಜ್ಯವಿದ್ದರೆ ಹೇಳಲಿ ಎಂದು ಅವರು ಸವಾಲು ಹಾಕಿದರು.
ಬಡವರು ನಮ್ಮ ಮೇಲೆ ಪ್ರೀತಿ, ಅಭಿಮಾನ ಹೊಂದಿದ್ದಾರೆ. ಬಿಜೆಪಿಯ ಪರಿವರ್ತನಾ ರ್ಯಾಲಿಗೆ ದುಡ್ಡು, ಸೀರೆ ಕೊಟ್ಟು ಜನರನ್ನು ಸೇರಿಸಲಾಗುತ್ತಿದೆ. ಇದು ಬಿಜೆಪಿ ರ್ಯಾಲಿಯಲ್ಲ, ಕೆಜೆಪಿ ರ್ಯಾಲಿ ಎಂದು ಬಿಜೆಪಿ ಮುಖಂಡ, ಮಾಜಿ ಸಚಿವ ಸೊಗಡು ಶಿವಣ್ಣ ಹೇಳಿದ್ದಾರೆ. ಬಿಜೆಪಿಯಲ್ಲಿ ಯಡಿಯೂರಪ್ಪ ಕಾಲೆಳೆಯುವವರು ಬಹಳಷ್ಟು ಜನರಿದ್ದಾರೆ. ಅವರೊಂದಿಗಿರುವವರು ಶೋಭಾ ಕರಂದ್ಲಾಜೆ, ಬಿ.ಜೆ.ಪುಟ್ಟಸ್ವಾಮಿ ಮಾತ್ರ ಎಂದು ಸಿದ್ದರಾಮಯ್ಯ ಹೇಳಿದರು.
ಬಿಜೆಪಿ ಪರಿವರ್ತನಾ ರ್ಯಾಲಿಯ ಉದ್ಘಾಟನೆಗೆ 3 ಲಕ್ಷ ಜನ ಸೇರುತ್ತಾರೆ ಎಂದಿದ್ದರು. 40 ಸಾವಿರ ಆಸನಗಳನ್ನು ಹಾಕಿದ್ದರು. ಆದರೆ, ಬಂದಿದ್ದು ಕೇವಲ 20 ಸಾವಿರ ಜನ ಮಾತ್ರ. ಬಿಜೆಪಿ ನಾಯಕ ಅಶೋಕ್ರನ್ನು ನಾನು ಬೆದರಿಸಿ ಯಾತ್ರೆಗೆ ಜನ ಸೇರದಂತೆ ಮಾಡಿದೆ ಎಂದು ಆರೋಪ ಮಾಡುವವರಿಗೆ ನಾಚಿಕೆಯಾಗಬೇಕು.
-ಸಿದ್ದರಾಮಯ್ಯ, ಮುಖ್ಯಮಂತ್ರಿ







