ಮುಖ್ಯಮಂತ್ರಿ ವಿರುದ್ಧ ಜೆಡಿಎಸ್ ವರಿಷ್ಠ ದೇವೇಗೌಡ ವಾಗ್ದಾಳಿ
ಬೆಂಗಳೂರು, ನ.8: ಜೆಡಿಎಸ್ನವರು ವಿಕಾಸಯಾತ್ರೆ ಮಾಡುತ್ತಿದ್ದಾರೆ. ದೇವೇಗೌಡ ಹಾಗೂ ಕುಮಾರಸ್ವಾಮಿ ಅಧಿಕಾರಾವಧಿಯಲ್ಲಿ ವಿಕಾಸ ಆಗಲಿಲ್ಲವೇ ಅಂತ ಕೆಲವರು ಪ್ರಶ್ನೆ ಮಾಡಿದ್ದಾರೆ. ರಾಜ್ಯಕ್ಕಾಗಿ ನಾವು ಏನು ಮಾಡಿದ್ದೇವೆ ಎಂಬುದು ಜನರಿಗೆ ಗೊತ್ತಿದೆ ಎಂದು ಪರೋಕ್ಷವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ವಾಗ್ದಾಳಿ ನಡೆಸಿದ್ದಾರೆ.
ಬುಧವಾರ ನಗರದಲ್ಲಿರುವ ಜೆಡಿಎಸ್ ಕಚೇರಿ(ಜೆಪಿ ಭವನ)ಯಲ್ಲಿ ಕನಕಪುರ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಗ್ರಾಮವಾಸ್ತವ್ಯದ ಬಗ್ಗೆಯೂ ಮುಖ್ಯಮಂತ್ರಿ ವ್ಯಂಗ್ಯಮಾಡಿದ್ದಾರೆ. ವಾಸ್ತವ್ಯದ ಬಳಿಕ ಹಾಸಿಗೆ, ದಿಂಬು, ಕಮೋಡು ಎಲ್ಲ ತಗೊಂಡು ಹೋಗ್ತಾರೆ ಅಂತ ಹೇಳಿದ್ದಾರೆ. ನಿನ್ನೆ ಕುಮಾರಸ್ವಾಮಿ ಗ್ರಾಮ ವಾಸ್ತವ್ಯ ಮಾಡಿರುವ ಮನೆಗೆ ಏನು ತಗೊಂಡು ಹೋಗಿದ್ದಾರೆ ಎಂಬುದನ್ನು ಅವರೇ ಹೋಗಿ ನೋಡಲಿ ಎಂದು ದೇವೇಗೌಡ ತಿರುಗೇಟು ನೀಡಿದರು.
ಕನಕಪುರ ಕ್ಷೇತ್ರದಲ್ಲಿ ಇದ್ದ ಸಣ್ಣಪುಟ್ಟ ರಾಜಕೀಯ ಭಿನ್ನಾಭಿಪ್ರಾಯಗಳನ್ನು ಇಂದಿನ ಸಭೆಯಲ್ಲಿ ಬಗೆಹರಿಸಲಾಗಿದೆ. ಈ ಕ್ಷೇತ್ರವನ್ನು ಗೆಲ್ಲಿಸಿಕೊಡುತ್ತೇವೆ ಎಂದು ಕಾರ್ಯಕರ್ತರು ಹಾಗೂ ಮುಖಂಡರು ಭರವಸೆ ನೀಡಿದ್ದಾರೆ. ಜೆಡಿಎಸ್ ಅಭ್ಯರ್ಥಿಯಾಗಿ ಡಿ.ಎಂ.ವಿಶ್ವನಾಥ್ ಹೆಸರನ್ನೆ ಅಂತಿಮಗೊಳಿಸಲಾಗಿದೆ ಎಂದು ಹೇಳಿದರು.
ಕಳೆದ ಚುನಾವಣೆಯಲ್ಲಿ ಕೇವಲ 7 ಸಾವಿರ ಮತಗಳ ಅಂತರದಿಂದ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ.ಶಿವಕುಮಾರ್ ವಿರುದ್ಧ ವಿಶ್ವನಾಥ್ ಪರಾಭವಗೊಂಡಿದ್ದರು. ಕನಕಪುರದಲ್ಲಿ ಈಗಲೂ ನಾನು ಹೋದರೂ ಜನ ಸೇರಿಸುವ ಶಕ್ತಿಯಿದೆ. ಮುಂದಿನ ಚುನಾವಣೆಯಲ್ಲಿ ಕನಕಪುರದಿಂದ ಒಂದು ಸ್ಥಾನ ಗೆಲ್ಲಿಸಿಕೊಡುವ ಭರವಸೆಯನ್ನು ಕಾರ್ಯಕರ್ತರು ನೀಡಿದ್ದಾರೆ ಎಂದರು.
ಮೊನ್ನೆ ಹರದನಹಳ್ಳಿಯ ನಮ್ಮ ಮನೆದೇವರಿಗೆ ಪೂಜೆಸಲ್ಲಿಸಿ, ನಿನ್ನೆ ಚಾಮುಂಡೇಶ್ವರಿಗೆ ಪೂಜೆಸಲ್ಲಿಸಿ ಚುನಾವಣಾ ಪ್ರಚಾರ ಆರಂಭ ಮಾಡಿದ್ದೇವೆ. ಮೈಸೂರಿನಲ್ಲಿ ಅಷ್ಟು ಜನ ಸೇರಿದ್ದನ್ನು ನಾನು ನೋಡಿಲ್ಲ ಎಂದು ಅವರು, ಹಿಂದೆ ನಾನು ತಪ್ಪುಮಾಡಿದ್ದೇನೆ. ಹೀಗಾಗಿ ಈ ಬಾರಿ ನಿಮ್ಮ ಆಶೀರ್ವಾದಬೇಕು ಅಂತ ಕುಮಾರಸ್ವಾಮಿ ಹೇಳಿದ್ದಕ್ಕೆ ನಾನು ಮೈಸೂರಿಗೆ ಹೋಗಿದ್ದೆ. ಆದರೆ, ಮೈಸೂರು ಸಭೆಯಲ್ಲಿ ನಾನು ಭಾಷಣ ಮಾಡಿಲ್ಲ. ರಾಜ್ಯದ ಜನತೆ 5 ವರ್ಷ ಬಿಜೆಪಿಗೆ ಮತ್ತು 5 ವರ್ಷ ಕಾಂಗ್ರೆಸ್ಗೆ ಅಧಿಕಾರ ನೀಡಿದ್ದಾರೆ. ಈ ಬಾರಿ ನಮಗೆ ಅಧಿಕಾರ ಕೊಡುತ್ತಾರೆ ಅಂತ ಭರವಸೆ ಇದೆ ಎಂದರು.
ನೋಟುಗಳ ಅಮಾನ್ಯೀಕರಣದ ಕುರಿತು ಪ್ರತಿಕ್ರಿಯಿಸಿದ ದೇವೇಗೌಡ, ಸದ್ಯದಲ್ಲಿಯೇ ಗುಜರಾತ್ ಚುನಾವಣೆ ನಡೆಯಲಿದೆ. ಅಲ್ಲಿ ಎರಡೂ ರಾಷ್ಟ್ರೀಯ ಪಕ್ಷಗಳು ಎಷ್ಟು ಹಣ ಚೆಲ್ಲುತ್ತಾರೆ ಅಂತಾ ಗಮನಿಸಿ. ಅಲ್ಲೇ ನಿಮ್ಮ ಪ್ರಶ್ನೆಗೆ ಉತ್ತರ ಸಿಗುತ್ತದೆ ಎಂದರು.
ಮುಂದಿನ ಚುನಾವಣೆಯಲ್ಲಿ ಪ್ರಜ್ವಲ್ ರೇವಣ್ಣ ಸ್ಪರ್ಧೆಗೆ ಸಂಬಂಧಿಸಿದಂತೆ ಭವಾನಿ ರೇವಣ್ಣ ನೀಡಿರುವ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ದೇವೇಗೌಡ, ನಾನು ಸದ್ಯಕ್ಕೆ ಯಾವ ಸೂಚನೆಯನ್ನು ನೀಡಿಲ್ಲ. ಈ ಬಗ್ಗೆ ತೀವರ್ಮಾನ ಮಾಡಲು ಜನರಿದ್ದಾರೆ ಎಂದು ಹೇಳಿದರು.
ನಾನು ಪ್ರಧಾನಿಯಾಗುತ್ತೇನೆ ಅಂದುಕೊಂಡಿರಲಿಲ್ಲ. ಹಾಗೆಯೇ ನಿಖಿಲ್ ಮತ್ತು ಪ್ರಜ್ವಲ್ ಏನಾಗಬೇಕು ಅನ್ನೋದನ್ನು ಜನರೇ ತೀರ್ಮಾನ ಮಾಡುತ್ತಾರೆ. ಅವರಿಬ್ಬರೂ ರಾಜಕೀಯವಾಗಿ ಬೆಳೆಯುವುದು ನಿಜ. ಜೆಡಿಎಸ್ ಬಂಡಾಯ ಶಾಸಕ ಚಲುವರಾಯಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದ ದೇವೇಗೌಡ, ನನ್ನ ಹಣೆಬರಹ ಬರೆಯುವುದು ದೇವೇಗೌಡರು ಅಥವಾ ಕುಮಾರಸ್ವಾಮಿ ಅಲ್ಲ. ಜನರೇ ತೀರ್ಮಾನಿಸುತ್ತಾರೆ ಅಂದಿದ್ದಾರೆ. ಈಗಲಾದರೂ ಅವರಿಗೆ ಅದು ಅರ್ಥವಾಯಿತಲ್ಲ ಅಷ್ಟು ಸಾಕು ಎಂದರು.







