ನಗರದ ವ್ಯಾಮೋಹ ಬಿಟ್ಟು ಕೃಷಿ ಮಾಡಿ: ಕೃಷಿ ತಜ್ಞ ವಿಜಯ
ಚಿಕ್ಕಮಗಳೂರು, ನ.8: ಕೋಟಿ ವಿದ್ಯೆಗಳಲ್ಲಿ ಮೇಟಿ ವಿದ್ಯೆಯೇ ಮೇಲು ಎಂಬುದನ್ನು ರೈತಾಪಿ ವರ್ಗ ಮನಗಾಣಬೇಕು. ನಗರಗಳ ವ್ಯಾಮೋಹ ಬಿಟ್ಟು ಮತ್ತೆ ಕೃಷಿಯತ್ತ ಗಮನಹರಿಸಬೇಕು ಎಂದು ಹಾಸನ ಆಕಾಶವಾಣಿಯ ಕಾರ್ಯಕ್ರಮ ನಿರ್ವಾಹಕ, ಕೃಷಿ ತಜ್ಞ ವಿಜಯ ಅಂಗಡಿ ಕರೆ ನೀಡಿದ್ದಾರೆ.
ಜಿಲ್ಲಾ ಕಸಾಪದಿಂದ ತಾಲೂಕಿನ ಮೂಕ್ತಿಹಳ್ಳಿಯ ಪ್ರಗತಿಪರ ಕೃಷಿಕ ಚಂದ್ರಶೇಖರ ನಾರಣಾಪುರ ನಿವಾಸದಲ್ಲಿ ಏರ್ಪಡಿಸಿದ್ದ ಕೃಷಿ-ಋಷಿ ಸಂವಾದ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕೃಷಿ ಲಾಭದಾಯಕವಲ್ಲ ಎಂಬ ತಪ್ಪು ಕಲ್ಪನೆ ಇಂದು ಜನಜನಿ ತವಾಗಿದೆ, ಆದರೆ ನಿಜವಾಗಿ ಭೂಮಿ ತಾಯಿಯನ್ನು ನಂಬಿದವರು ಎಂದಿಗೂ ಹಾಳಾಗುವುದಿಲ್ಲ, ಕೃಷಿಯಲ್ಲಿ ದೊರೆಯುವ ಆನಂದ, ಸಾ ರ್ಥಕತೆ ಬೇರೆ ಯಾವ ಕ್ಷೇತ್ರದಲ್ಲೂ ದೊರೆಯಲು ಅಸಾಧ್ಯ ಎಂದರು.
ಬ್ಯಾಂಕ್ನಲ್ಲಿ ಒಂದು ರೂ. ಠೇವಣಿ ಇಟ್ಟರೆ ಅದು ಎಂಟು ವರ್ಷಕ್ಕೆ ಎರಡು ರೂ. ಆಗುತ್ತದೆ. ಆದರೆ ಕೃಷಿಯಲ್ಲಿ ಒಂದು ಕಾಳನ್ನು ನೆಟ್ಟರೆ ಕೇವಲ ನಾಲ್ಕೈದು ತಿಂಗಳಿನಲ್ಲಿ ಸಾವಿರಾರು ಕಾಳಾಗುತ್ತವೆ. ಕೋಟ್ಯಾಂತರ ಜನ ಉದ್ಯಮಗಳಲ್ಲಿ ವ್ಯವಹಾರಗಳಲ್ಲಿ ನಷ್ಟ ಅನುಭವಿಸಿ ಮನೆ ಮಠ ಕಳೆದುಕೊಂಡಿದ್ದಾರೆ. ಆದರೆ ದೇಶದಲ್ಲಿ ಶೇ.90 ರಷ್ಟು ಜನ ಕೃಷಿಯಿಂದ ಶ್ರೀಮಂತರಾಗಿದ್ದಾರೆ. ಹಳ್ಳಿಗಳು ಅಭಿವೃದ್ಧಿ ಹೊಂದಿರುವುದು ಮತ್ತು ಉಳಿದಿರುವುದು ಕೃಷಿಯಿಂದಲೇ ಎಂದು ಹೇಳಿದರು.
ಎಪಿಎಂಸಿ ಅಧ್ಯಕ್ಷ ಎಚ್.ಎಸ್.ಕವೀಶ್ ಹಾಗೂ ಕಾಫಿ ಬೆಳೆಗಾರ ಎಂ.ಸಿ.ಪ್ರಕಾಶ್ ಮಾತನಾಡಿ, ಸರಕಾರಗಳು ರೈತರ ಪರವಾಗಿ ನಿಂತರೆ ದೇಶದಲ್ಲಿ ಕೃಷಿ ಕ್ಷೇತ್ರ ಬೆಳೆಯಲು ಸಾಧ್ಯವಾಗುತ್ತದೆ ಎಂದರು.
ಜಿಲ್ಲಾ ಕಸಾಪ ಅಧ್ಯಕ್ಷ ಕುಂದೂರು ಅಶೋಕ್ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ತಾಲೂಕು ಕಸಾಪ ಅಧ್ಯಕ್ಷ ಹಿರೇಮಗಳೂರು ಪುಟ್ಟಸ್ವಾಮಿ, ಪ್ರಗತಿ ಪರ ಕೃಷಿಕ ಚಂದ್ರಶೇಖರ ನಾರಣಾಪುರ, ಕೃಷಿಕ ಕೆ.ಪಿ.ಚಂದ್ರೇಗೌಡ, ಸಾಹಿತಿ ಬೆಳವಾಡಿ ಮಂಜುನಾಥ್ ಉಪಸ್ಥಿತರಿದ್ದರು. ಡಿ.ಎಂ.ಮಂಜುನಾಥ ಸ್ವಾಮಿ ನಿರೂಪಿಸಿ, ಲಕ್ಷ್ಮಣಗೌಡ ಸ್ವಾಗತಿಸಿ, ಪ್ರೊ. ಕೆ.ಎನ್.ಲಕ್ಷ್ಮೀಕಾಂತ್ ವಂದಿಸಿದರು.







