ಡಿಕೆಶಿ ಸೆಳೆಯುವ ಬಿಜೆಪಿ ಪ್ರಯತ್ನ ಫಲಿಸುವುದಿಲ್ಲ: ಸಿಎಂ ಸಿದ್ದರಾಮಯ್ಯ

ಹುಬ್ಬಳ್ಳಿ, ನ.9: ಐಟಿ ಅಧಿಕಾರಿಗಳ ಮೂಲಕ ಇಂಧನ ಸಚಿವ ಡಿ.ಕೆ. ಶಿವಕುಮಾರ್ ಅವರನ್ನು ಬಿಜೆಪಿಗೆ ಸೆಳೆಯುವ ಆ ಪಕ್ಷದ ನಾಯಕರ ಪ್ರಯತ್ನ ಫಲ ನೀಡುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಗುರುವಾರ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ಯಾವ ಆಸೆ ಆಮಿಷವೊಡ್ಡಿದರೂ ಅದಕ್ಕೆಲ್ಲ ಶಿವಕುಮಾರ್ ಸೊಪ್ಪು ಹಾಕುವುದಿಲ್ಲ. ಅವರು ಹುಟ್ಟು ಕಾಂಗ್ರೆಸಿಗರು ಎಂದರು.
ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಶಿವಕುಮಾರ್ಗೆ ಉಪಮುಖ್ಯಮಂತ್ರಿ ಸ್ಥಾನ ನೀಡುವ ಆಮಿಷವೊಡ್ಡಲಾಗಿದೆ ಎಂಬ ಆಪಾದನೆಗಳಿಗೆ ಕುರಿತು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಉಪಮುಖ್ಯಮಂತ್ರಿ ಹುದ್ದೆ ಸಂವಿಧಾನದಲ್ಲಿ ಇಲ್ಲ. ಅದು ರಾಜಕೀಯವಾಗಿ ಮಾಡಿಕೊಂಡ ಹುದ್ದೆಯಷ್ಟೇ. ಅದಕ್ಕೆ ಅಷ್ಟೊಂದು ಮಹತ್ವವಿಲ್ಲ ಎಂದು ತಿಳಿಸಿದರು.
ಬಿಜೆಪಿಯ ಹಲವಾರು ಮುಖಂಡರು ನಮ್ಮ ಸಂಪರ್ಕದಲ್ಲಿ ಇದ್ದಾರೆ. ಅವರು ಕಾಂಗ್ರೆಸ್ ಸೇರುವ ಆತುರದಲ್ಲಿ ಇದ್ದಾರೆ. ಆದರೆ, ಅವರು ಮೂಲತಃ ಸಂಘ ಪರಿವಾರದವರೋ ಅಲ್ಲವೋ ಎಂಬುದನ್ನು ನೋಡುತ್ತಿದ್ದೇವೆ. ಆರೆಸ್ಸೆಸ್ ನವರಾದರೆ ಅವರಿಗೆ ಕೋಮುವಾದದ ತರಬೇತಿ ಆಗಿರುತ್ತೆ. ಅಂತಹವರನ್ನು ಸೇರಿಸಿಕೊಳ್ಳುವುದಿಲ್ಲ. ಸಂಪರ್ಕದಲ್ಲಿ ಯಾರಿದ್ದಾರೆ ಎಂಬುದನ್ನು ಬಹಿರಂಗಪಡಿಸಲಾಗದು ಎಂದು ಹೇಳಿದರು.
ಟಿಪ್ಪುಜಯಂತಿ ಸರಕಾರಿ ಕಾರ್ಯಕ್ರಮವಾಗಿ ನಡೆಯುತ್ತದೆ. ಅಲ್ಲದೆ, ಕಾರ್ಯಕ್ರಮದ ಆಹ್ವಾನ ಪತ್ರಿಕೆಯಿಂದ ಬಿಜೆಪಿಯವರ ಹೆಸರನ್ನು ತೆಗೆದುಹಾಕಲು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಬಿಜೆಪಿಯವರು ಢೋಂಗಿಗಳು. ಜಗದೀಶ್ ಶೆಟ್ಟರ್ ಮುಖ್ಯಮಂತ್ರಿ ಆಗಿದ್ದಾಗ ಟಿಪ್ಪುಮಹಾವೀರ, ಶೂರ ಎಂದು ಹಾಡಿ ಹೊಗಳಿದ್ದರು. ಟಿಪ್ಪುಕುರಿತಾದ ಪುಸ್ತಕಕ್ಕೆ ಶೆಟ್ಟರ್, ಸದಾನಂದಗೌಡ ಮುನ್ನುಡಿ ಬರೆದಿದ್ದಾರೆ ಎಂದರು.
ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ, ಕೆಜೆಪಿಯಲ್ಲಿದ್ದಾಗ ಟಿಪ್ಪು ವೇಷಧಾರಿ ಆಗಿರಲಿಲ್ಲವೇ. ಇವರದ್ದು ಎರಡು ನಾಲಿಗೆ ಅಲ್ಲವೇ. ಟಿಪ್ಪುಬಗ್ಗೆ ಮಾತನಾಡಲು ಬಿಜೆಪಿಯವರಿಗೆ ಯಾವ ನೈತಿಕತೆ ಇದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಲಿಂಗಾಯತ ಪ್ರತ್ಯೇಕ ಧರ್ಮ ಕುರಿತು ಕೇಂದ್ರ ಸರಕಾರ ಕ್ರಮ ಕೈಗೊಳ್ಳಬೇಕು. ಶಿಫಾರಸು ಮಾಡುವುದಷ್ಟೇ ನಮ್ಮ ಕೆಲಸ. ಆದರೆ, ಈವರೆಗೆ ಶಿಫಾರಸು ಮಾಡುವ ಹಂತಕ್ಕೆ ಬಂದಿಲ್ಲ. ಪ್ರತ್ಯೇಕ ಧರ್ಮದ ಗೊಂದಲಕ್ಕೆ ನಾನು ಹೋಗಲ್ಲ. ಲಿಂಗಾಯತರಿಗೆ ಅಲ್ಪಸಂಖ್ಯಾತ ಮೀಸಲಾತಿ ಕಲ್ಪಿಸುವ ವಿಚಾರವನ್ನು ಹಿಂದುಳಿದ ವರ್ಗಗಳ ಆಯೋಗ ಪರಿಶೀಲಿಸಿ ಶಿಫಾರಸು ಮಾಡುತ್ತದೆ ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.
ಕಪ್ಪುಹಣ, ಭ್ರಷ್ಟಾಚಾರ, ಉಗ್ರರಿಗೆ ಹಣ ರವಾನೆ ಹಾಗೂ ನಕಲಿ ನೋಟುಗಳಿಗೆ ಕಡಿವಾಣ ಹಾಕಲು ನೋಟು ಅಮಾನ್ಯ ನಿರ್ಧಾರ ಕೈಗೊಂಡಿದ್ದಾಗಿ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದರು. ಈ ನಾಲ್ಕರಲ್ಲಿ ಒಂದು ಕೆಲಸವಾದರೂ ಆಗಿದೆಯೇ? ನೋಟು ಅಮಾನ್ಯವಾಗಿ ಒಂದು ವರ್ಷವಾಗಿದೆ. ಈ ಅವಧಿಯಲ್ಲಿ ಅವರು ಮಾಡಿದ್ದೇನು. ಹೀಗಾಗಿಯೇ ಕಾಂಗ್ರೆಸ್ ಕರಾಳ ದಿನ ಆಚರಿಸಿದ್ದು.
-ಸಿದ್ದರಾನಯ್ಯ, ಮುಖ್ಯಮಂತ್ರಿ







