ಉಡುಪಿ : 35 ಕೋಟಿ ರೂ. ಕಾಮಗಾರಿಗಳಿಗೆ ಸಚಿವ ಪ್ರಮೋದ್ ಚಾಲನೆ

ಉಡುಪಿ, ನ. 9: ರಾಜ್ಯ ಮೀನುಗಾರಿಕೆ, ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಅವರು ಗುರುವಾರ ಉಡುಪಿ ವಿಧಾನಸಭಾ ಕ್ಷೇತ್ರದಾದ್ಯಂತ ಸಂಚರಿಸಿ ರಸ್ತೆ ಅಭಿವೃದ್ಧಿ, ಮೀನುಗಾರಿಕಾ ರಸ್ತೆ, ಕಡಲತೀರ ಸಂರಕ್ಷಣಾ ಕಾಮಗಾರಿ ಸೇರಿದಂತೆ ಇಡೀ ದಿನ ಒಟ್ಟು 35 ಕೋಟಿ ರೂ.ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದರು.
ಮಲ್ಪೆಯಲ್ಲಿ ಬೊಬ್ಬರ್ಯಪಾದೆ ಬಳಿ ಮೀನುಗಾರಿಕಾ ಜೆಟ್ಟಿಯನ್ನು 2.40 ಕೋಟಿ ರೂ. ವೆಚ್ಚದಲ್ಲಿ ನಾಲ್ಕು ತಿಂಗಳೊಳಗೆ ನಿರ್ಮಿಸಿ ಲೋಕಾರ್ಪಣೆ ಮಾಡಿದ್ದು ಐತಿಹಾಸಿಕವೆಂದು ಈ ಸಂದಭರ್ದಲ್ಲಿ ಸಚಿವರು ಹೇಳಿದರು. ಇದಕ್ಕೆ ಪೂರಕವಾಗಿ ಸಂಪರ್ಕ ರಸ್ತೆಯನ್ನು 55 ಲಕ್ಷ ರೂ.ಗಳ ವೆಚ್ಚದಲ್ಲಿ ನಿರ್ಮಿಲಾಗಿದೆ ಎಂದೂ ಅವರು ನುಡಿದರು.
ಇಲ್ಲಿ ಹೂಳೆತ್ತುವ ಕಾರ್ಯ ನಾಳೆಯಿಂದ ಪ್ರಾರಂಭಗೊಳ್ಳಲಿದ್ದು, 1.30 ಕೋಟಿ ರೂ. ವೆಚ್ಚದಲ್ಲಿ ಸಮುದ್ರ ತಡೆಗೋಡೆ ನಿರ್ಮಾಣ ಕಾರ್ಯ ಕುತ್ಪಾಡಿ ಯಲ್ಲಿ ಆರಂಭವಾಗಿದೆ. ಕಡಲಕೊರೆತದಿಂದಾಗಿ ಇಲ್ಲಿನ ಮೀನುಗಾರಿಕೆ ರಸ್ತೆ ಸಂಪೂರ್ಣ ಹದಗೆಟ್ಟಿದ್ದು ಅದರ ದುರಸ್ತಿಗೆ ಸಚಿವರು ಸೂಚನೆ ನೀಡಿದರು. ಬಂದರು ಮತ್ತು ಮೀನುಗಾರಿಕಾ ವ್ಯಾಪ್ತಿಯಡಿ ಕೈಗೊಂಡ ಕಾಮಗಾರಿಗಳಲ್ಲಿ 11 ಕೋಟಿ ರೂ. ಕಾಮಗಾರಿಗಳ ಭೂಮಿ ಪೂಜೆಯನ್ನು ಇಂದು ನೆರವೇರಿಸಿ ದರು. 9 ಕೋಟಿ ರೂ. ವೆಚ್ಚದ ವಿವಿಧ ಕಾಮಗಾರಿ ಉದ್ಘಾಟನೆಯಾಗಿದೆ. ನಗರೋತ್ಥಾನ ಅನುದಾನದಲ್ಲಿ ಮಲ್ಪೆ ಕಡಲತೀರ ಸಂರಕ್ಷಣಾ ಕಾಮಗಾರಿ 3 ಕೋಟಿ ರೂ. ವೆಚ್ಚದಲ್ಲಿ, ಮಲ್ಪೆ ಕಡಲತೀರದಲ್ಲಿ ತುರ್ತು ಸಂರಕ್ಷಣಾ ಕಾಮಗಾರಿ 1.30 ಕೋಟಿ, ಉತ್ತರ ಭಾಗದ ಕಡಲತೀರದಲ್ಲಿ ತುರ್ತು ಸಂರಕ್ಷಣೆಗೆ 1.90ಕೋಟಿ ರೂ.ಗ ಕಾಮಗಾರಿ ಲೋಕಾರ್ಪಣೆಗೊಂಡಿದೆ.
ಐದು ಕೋಟಿ ರೂ. ವೆಚ್ಚದಲ್ಲಿ ಮಲ್ಪೆ ಒಂದು ಮತ್ತು ಎರಡನೇ ಹಂತದ ಮೀನುಗಾರಿಕೆ ಬಂದರಿನ ಆವರಣದಲ್ಲಿ ಜಟ್ಟಿ ವಿಸ್ತರಣೆ, ಹರಾಜು ಪ್ರಾಂಗಣದ ನವೀಕರಣ ಹಾಗೂ ಅಂತರಿಕ ರಸ್ತೆಗಳ ಕಾಮಗಾರಿ, ಕಿದಿಯೂರು ಪಡುಕೆರೆ ಕಡಲತೀರದಲ್ಲಿ ಶಾಶ್ವತ ಸಮುದ್ರ ಕೊರೆತ ತಡೆ ಸಂರಕ್ಷಣೆ ಕಾಮಗಾರಿಗೆ 4.80 ಕೋಟಿ ರೂ., ಕಡೆಕಾರ್ ಪಡುಕೆರೆ ಕಡಲತೀರದಲ್ಲಿ ತುರ್ತು ಸಮುದ್ರ ಕೊರೆತ ತಡೆ ಸಂರಕ್ಷಣೆ 1.30 ಕೋಟಿರೂ.ವೆಚ್ಚದಲ್ಲಿ ನಿರ್ಮಾಣಗೊಳ್ಳಲಿವೆ.
ಕಾರ್ಯಕ್ರಮದಲ್ಲಿ ನಗರಸಭಾ ಅಧ್ಯಕ್ಷ ಮೀನಾಕ್ಷಿ ಮಾಧವ ಬನ್ನಂಜೆ, ಉಪಾಧ್ಯಕ್ಷೆ ಸಂಧ್ಯಾ, ಸತೀಶ್ ಅಮೀನ್ ಪಡುಕೆರೆ, ದಿವಾಕರ್ ಎ ಕುಂದರ್, ನಗರಸಬಾ ಸದಸ್ಯರಾದ ರಮೇಶ್ ಕಾಂಚನ್, ಗಣೇಶ್ ನೆರ್ಗಿ, ಮೀನುಗಾರಿಕಾ ಇಲಾಖಾ ಅಧಿಕಾರಿಗಳು, ಬಂದರು ಇಲಾಖೆಯ ಇಂಜಿನಿಯರ್ ನಾಗರಾಜ್ ಹಾಗೂ ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.







