ಕಾವ್ಯಗಳ ಅಂತರಂಗದ ಗ್ರಹಿಕೆಗೆ ಗಮಕ ಪರಿಣಾಮಕಾರಿ ಮಾಧ್ಯಮ: ನರೇಂದ್ರ ಪೈ
ಚಿಕ್ಕಮಗಳೂರು, ನ.9: ಕಾವ್ಯಗಳ ಅಂತರಂಗದ ಸಮರ್ಪಕ ಗ್ರಹಿಕೆಗೆ ಗಮಕ ಪರಿಣಾಮಕಾರಿ ಮಾಧ್ಯಮ. ಅದರಲ್ಲಿ ಕಾವ್ಯವಾಚನ ಹಾಗೂ ವ್ಯಾಖ್ಯಾನ ಎಂಬ ಎರಡು ವಿಧದಲ್ಲಿ ಸಂಪನ್ನಗೊಳ್ಳುವುದರಿಂದ ಪಂಡಿತರಿಂದ ಸಾಮಾನ್ಯ ವರ್ಗದವರಿಗೂ ಕಾವ್ಯವನ್ನು ಅರ್ಥೈಸಿಕೊಳ್ಳಲು ಸಹಕಾರಿಯಾಗುತ್ತದೆ. ಹಿಂದೆ ಕಾವ್ಯ ಪ್ರಸಾರದ ಸಾಧನ ಗಮಕವೇ ಆಗಿತ್ತು ಎಂದು ಉದ್ಭವ ಪ್ರಕಾಶನದ ಟ್ರಸ್ಟಿ ನರೇಂದ್ರ ಪೈ ಹೇಳಿದ್ದಾರೆ.
ನಗರದ ಹೊರವಲಯದ ಕೆಂಪನಹಳ್ಳಿಯಲ್ಲಿರುವ ಆಶಾಕಿರಣ ಅಂಧಮಕ್ಕಳ ಶಾಲಾ ಪ್ರಾಂಗಣದಲ್ಲಿ ಉದ್ಭವ ಪ್ರಕಾಶನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಏರ್ಪಡಿಸಿದ್ದ ಸಂತ ಕನಕದಾಸರ ಕೀರ್ತನೆಗಳ ವಾಚನ-ವ್ಯಾಖ್ಯಾನದ ಗಮಕ ಕೀರ್ತನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಗಮಕ ಕನ್ನಡದ ಅಭಿಜಾತ ಕಲೆ, ಕಾವ್ಯದ ಸ್ವರೂಪ, ದಗಳ ಅರ್ಥ, ಅಲಂಕಾರಗಳ ಬಳಕೆ, ಕಥನ ವೈವಿಧ್ಯ ಮೊದಲಾದ ಸೂಕ್ಷ್ಮ ಸಂಗತಿ ತಿಳಿಯಲು ಪೂರಕ. ಆಧುನಿಕ ಜೀವನದಲ್ಲಿ ಕಾವ್ಯಗಳ ಅಧ್ಯಯನ ಕಡಿಮೆ ಯಾಗುತ್ತಿರುವ ಸಂದರ್ಭದಲ್ಲಿ ಗಮಕ ಕಲೆಯು ಹಳಗನ್ನಡ, ನಡುಗನ್ನಡ ಕಾವ್ಯಗಳಿಗೆ ಪುನಃಶ್ಚೇತನ ನೀಡಿದೆ ಎಂದರು.
ಕಾರ್ಯಕ್ರಮವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಸಿ.ರಮೇಶ್ ಉದ್ಘಾಟಿಸಿ ಮಾತನಾಡಿ, ಸಂಸ್ಕೃತಿಯ ಪ್ರಸಾರಕ್ಕಾಗಿ ಸರಕಾರ ಹಲವು ಯೋಜನೆಗಳನ್ನು ರೂಪಿಸಿ, ವರ್ಷಪೂರ್ತಿ ಹತ್ತಾರು ಕಾರ್ಯಕ್ರಮಗಳನ್ನು ನಿರ್ವಹಿ ಸುತ್ತಿದೆ. ಗಮಕ ಕೀರ್ತನ ಕಾರ್ಯ ಕ್ರಮವು ಸಂಸ್ಕೃತಿಯ ಪ್ರಸಾರದ ಉದ್ದೇಶವನ್ನು ಹೊಂದಿದೆ. ಸಂತರು, ಸಾಧಕರ ಜೀವನ ಚರಿತ್ರೆಯಿಂದ ನಮ್ಮ ಪರಂಪರೆ, ಸಂಸ್ಕೃತಿಗಳ ಅರಿವಿಗೆ ಮಾರ್ಗದರ್ಶಿಯಾಗಿದೆ. ದಾಸರ ಕೀರ್ತನೆ ಕನ್ನಡಿಗರ ಮನೆ-ಮನೆಗಳಿಗೆ ತಲುಪಿಸುವ ಕೆಲಸವಾಗಬೇಕಾಗಿದೆ ಎಂದರು.
ಸಾಹಿತಿ ಬೆಳವಾಡಿ ಮಂಜುನಾಥ ಕನಕದಾಸರ ಜೀವನ ಸಾಧನೆಯನ್ನು ಪರಿಚಯಿಸಿದರು. ಗಾಯಕಿ ಜ್ಯೋತಿ ವಿನೀತ್ಕುಮಾರ್ ರಾಗ ಸಂಯೋಜಿಸಿ ಹಾಡಿದ ಕನಕದಾಸ ವಿರಚಿತ ಹಲವು ಕೀರ್ತನೆಗಳು ಗಮನ ಸೆಳೆದವು. ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ರವೀಶ್ ಕ್ಯಾತನಬೀಡು, ಅಜ್ಜಂಪುರ ಸೂರಿ ಪ್ರತಿಷ್ಠಾನದ ಸೂರಿ ಪ್ರಭು, ಕವಿ ಅರವಿಂದ ದೀಕ್ಷಿತ್, ವಿನೀತ್ ಕುಮಾರ್ ಸಾಹಿತಿ ರಮೇಶ್ ಬೊಂಗಾಳೆ ಉಪಸ್ಥಿತರಿದ್ದರು. ಶಿಕ್ಷಕ ಲಕ್ಷ್ಮೇಗೌಡ ಸ್ವಾಗತಿಸಿ, ಮುಖ್ಯೋಪಾಧ್ಯಾಯ ಚಂದ್ರಶೇಖರ್ ವಂದಿಸಿದರು.







