ನ.13 ರಂದು ಭೂಮಿ, ವಸತಿಗಾಗಿ ಆಗ್ರಹಿಸಿ 'ಬೆಳಗಾವಿ ಚಲೋ'
ಬೆಂಗಳೂರು, ನ.10: ಭೂಮಿ ಹಾಗೂ ವಸತಿಗಾಗಿ ಆಗ್ರಹಿಸಿ ನ.13 ರಂದು ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ವತಿಯಿಂದ ಬೆಳಗಾವಿ ಚಲೋ ಹಮ್ಮಿಕೊಳ್ಳಲಾಗಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿ ರಾಜ್ಯ ಸಂಚಾಲಕ ಕುಮಾರ್ ಸಮತಳ, ಕಂದಾಯ, ಗೋಮಾಳ, ಅರಣ್ಯ ಸೇರಿದಂತೆ ವಿವಿಧ ಸರಕಾರಿ ಭೂಮಿಯಲ್ಲಿ ಹತ್ತಾರು ವರ್ಷಗಳಿಂದ ಸಾಗುವಳಿ ಮಾಡುತ್ತಿರುವ ಲಕ್ಷಾಂತರ ಭೂ ರಹಿತರು ಸಕ್ರಮಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ. ಈ ಕುರಿತು ಹೋರಾಟ ಸಮಿತಿಯಿಂದ ನಾಲ್ಕು ಹಂತದಲ್ಲಿ ಹೋರಾಟ ಮಾಡಲಾಗಿದೆ. ಆದರೆ, ಸರಕಾರ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಅಲ್ಲದೆ, ಸರಕಾರ ನೀಡಿದ ಭರವಸೆಗಳನ್ನು ಸಂಪೂರ್ಣವಾಗಿ ಮರೆತಿದೆ ಎಂದು ತಿಳಿಸಿದರು.
ರಾಜ್ಯದಲ್ಲಿ ಮೂರು-ನಾಲ್ಕು ದಶಕಗಳಿಂದಲೂ ಲಕ್ಷಾಂತರ ಭೂ ರಹಿತ ದಲಿತ, ಆದಿವಾಸಿ, ಹಿಂದುಳಿದ ವರ್ಗಗಳು ಭೂಮಿ ಮತ್ತು ಮನೆಗಾಗಿ ಅರ್ಜಿ ಸಲ್ಲಿಸಿ ಕಾಯುತ್ತಲೇ ಇದಾರೆ. ಒಂದು ತಲೆಮಾರಿನ ಕಾಲಾವಧಿಯಲ್ಲಿ ಹಲವು ಸರಕಾರಗಳು, ಮಂತ್ರಿಗಳು, ಶಾಸಕರು ಬಂದು ಹೋದರೂ ಭೂಮಿಗಾಗಿ ಸಲ್ಲಿಸಿರುವ ಅರ್ಜಿಗಳು ವಿಲೇವಾರಿಯಾಗಿಲ್ಲ. ಬದಲಿಗೆ, ಸರಕಾರಿ ಭೂಮಿಯಲ್ಲಿ ಸಾಗುವಳಿ ಮಾಡುತ್ತಿರುವ ರೈತರನ್ನು ಅಕ್ರಮವಾಗಿ ಕಬಳಿಕೆ ಮಾಡಿದ್ದಾರೆ ಎಂಬ ನೆಪವೊಡ್ಡಿ ಒಕ್ಕಲೆಬ್ಬಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
2016 ರಲ್ಲಿ ಬೆಳಗಾವಿಯಲ್ಲಿ ನಡೆದ ವಿಧಾನಸಭಾ ಅಧಿವೇಶನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ‘ಬಡವರಿಗೆ ಭೂಮಿ ವಸತಿ ನೀಡುವುದು ನಮ್ಮ ಸರಕಾರದ ಆದ್ಯತೆಯೇ ಹೊರತು ಕಂಪೆನಿಗಳಿಗಲ್ಲ. ಕಾಗೋಡು ತಿಮ್ಮಪ್ಪರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸುತ್ತೇವೆ. ಈಗ ಉಳುಮೆ ಮಾಡುತ್ತಿದ್ದು, ಅರ್ಜಿ ಹಾಕಿರುವವರಿಗೆ ಕೂಡಲೇ ಭೂಮಿ ಮಂಜೂರು ಮಾಡುತ್ತೇವೆ. ಉಳಿದಂತೆ, ಹಂಚಿಕೆಗೆ ಎಷ್ಟು ಸರಕಾರಿ ಭೂಮಿ ಲಭ್ಯವಿದೆ ಎಂಬುದನ್ನು ಸಮೀಕ್ಷೆ ಮಾಡಿಸಿ, ಅದನ್ನು ಬಡವರಿಗೆ ಹಂಚಿಕೆ ಮಾಡುತ್ತೇವೆ ಎಂದು ಆಶ್ವಾಸನೆ ನೀಡಿದ್ದರು. ಆದರೆ, ಇದುವರೆಗೂ ಇದರಲ್ಲಿ ಒಂದನ್ನೂ ಪೂರ್ಣಗೊಳಿಸಿಲ್ಲ ಎಂದು ತಿಳಿಸಿದರು.
ಕೊಡಗು, ಹಾವೇರಿ, ಕೊಪ್ಪಳ, ರಾಯಚೂರು, ಚಿಕ್ಕಮಗಳೂರು, ತುಮಕೂರು ಸೇರಿದಂತೆ ಅನೇಕ ಜಿಲ್ಲೆಗಳಲ್ಲಿ ಬಗರ್ಹುಕುಂ ಅಡಿಯಲ್ಲಿ ಸಾಗುವಳಿ ಮಾಡಿದ್ದ ಬೆಳೆಗಳನ್ನು ನಾಶಪಡಿಸಿ, ಅವರ ಮನೆಗಳನ್ನು ಜೆಸಿಬಿ ಯಂತ್ರಗಳ ಮೂಲಕ ಧ್ವಂಸಗೊಳಿಸಿದ್ದಾರೆ. ಅಲ್ಲದೆ, ರೈತರ ಮೇಲೆ ಸುಳ್ಳು ಕೇಸುಗಳನ್ನು ದಾಖಲಿಸಿ ಜೈಲಿಗೆ ಕಳಿಸುತ್ತೇವೆ ಎಂದು ಬೆದರಿಕೆ ಹಾಕುತ್ತಿದ್ದಾರೆ. ದೊಡ್ಡ ಭೂ ಕಬಳಿಕೆದಾರರಿಂದ ಸರಕಾರಿ ಭೂಮಿ ವಶಪಡಿಸಿಕೊಳ್ಳಲು ಎಂದು ರಚನೆಯಾದ ಭೂ ಕಬಳಿಕೆ ನ್ಯಾಯಾಲಯದಲ್ಲಿ ನೂರಾರು ರೈತರ ಮೇಲೆ ಭೂ ಕಬಳಿಕೆ ಪ್ರಕರಣಗಳನ್ನು ದಾಖಲಿಸಿ ಶಿಕ್ಷಿಸುತ್ತಿದ್ದಾರೆ ಎಂದು ಆರೋಪಿಸಿದರು.
ಆದುದರಿಂದ ರೈತರ ಬೇಡಿಕೆಗಳನ್ನು ಅಧಿವೇಶನದಲ್ಲಿ ಮಂಡಿಸಬೇಕು ಮತ್ತು ಅದನ್ನು ಪರಿಹರಿಸಲು ಸೂಕ್ತ ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಆಗ್ರಹಿಸಿ, ರಾಜ್ಯ ಸರಕಾರ ನೀಡಿರುವ ಭರವಸೆಗಳನ್ನು ಈಡೇರಿಸಲು ಮುಂದಾಗಬೇಕು ಎಂದು ಒತ್ತಾಯಿಸಿ ಸರಕಾರದ ಗಮನ ಸೆಳೆಯಲು ತಮಟೆ ಚಳವಳಿ ಹಮ್ಮಿಕೊಳ್ಳಲಾಗಿದೆ. ನ.13 ರಿಂದ ಆರಂಭವಾಗುವ ಚಳವಳಿ ನ.23 ರವರೆಗೂ ಎಲ್ಲ ಶಾಸಕರ ಕಚೇರಿ ಎದುರು ಮುಂದುವರಿಯುತ್ತದೆ ಎಂದರು.
ಬೇಡಿಕೆಗಳು:
-ಭೂಮಿ ಮತ್ತು ವಸತಿ ಸಮಸ್ಯೆ ಶೀಘ್ರ ಪರಿಹಾರವಾಗುವ ಮಾರ್ಗಗಳನ್ನು ಚರ್ಚಿಸಲು ಉನ್ನತ ಮಟ್ಟದ ಸಮಿತಿ ರಚಿಸಬೇಕು.
-ಪರ್ಯಾಯ ವ್ಯವಸ್ಥೆ ಕಲ್ಪಿಸದೆ ಬಡವರನ್ನು ಮನೆ ಮತ್ತು ಹೊಲಗಳಿಂದ ಹೊರಹಾಕಿ ಬೀದಿ ಪಾಲು ಮಾಡಬಾರದು ಎಂದು ಸುಗ್ರೀವಾಜ್ಞೆ ಹೊರಡಿಸಬೇಕು.
-ಈಗಾಗಲೇ ಅನೇಕ ವರ್ಷಗಳಿಂದ ಉಳುಮೆ ಮಾಡುತ್ತಿರುವ ಅಥವಾ ಮನೆ ಕಟ್ಟಿಕೊಂಡಿರುವ ಹಾಗೂ ಅರ್ಜಿ ಸಲ್ಲಿಸಿರುವ ಜನರಿಗೆ ತಕ್ಷಣವೇ ಅವರ ಹಕ್ಕು ಮಾನ್ಯ ಮಾಡುವ ತೀರ್ಮಾನ ಕೈಗೊಳ್ಳಬೇಕು ಸೇರಿದಂತೆ ಹಲವು ಬೇಡಿಕೆಗಳು ಈಡೇರಿಸಬೇಕು ಎಂದರು.







